ಮುಂಬೈ: ಮಾಸ್ತಿಗುಡಿ ಕನ್ನಡ ಸಿನೆಮಾ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಮೃತಪಟ್ಟ ಇಬ್ಬರು ನಟರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ತಮಿಳು ಮತ್ತು ಬಾಲಿವುಡ್ ನಟ ಆರ್ ಮಾಧವನ್, ಸ್ಟಂಟ್ ಕಲಾವಿದರಿಗೆ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವಂತೆ ಆಗ್ರಹಸಿದ್ದಾರೆ.
ತಿಪ್ಪಗೊಂಡನಹಳ್ಳಿ ಕೆರೆಯ ಮೇಲೆ ಹೆಲಿಕ್ಯಾಪ್ಟರ್ ನಿಂದ ಇಳಿಯುವ ಸ್ಟಂಟ್ ನಿರ್ವಹಿಸುವಾಗ, ನೀರಿಗೆ ಧುಮುಕಿ ಈಜಲಾರದೆ ನಟರಾದ ಉದಯ್ ಮತ್ತು ಅನಿಲ್ ಮೃತಪಟ್ಟಿದ್ದರು. ಇದಾದ ಒಂದು ದಿನದ ನಂತರ ಮಂಗಳವಾರ ಸಂಜೆ ಆರ್ ಮಾಧವನ್ ಟ್ವೀಟ್ ಮಾಡಿದ್ದು ಈ ಸುದ್ದಿ ಅತೀವ ದುಃಖ ತಂದಿದೆ ಎಂದಿದ್ದಾರೆ.
"ಇದರಿಂದ ನಿಜಕ್ಕೂ ದುಃಖವಾಗಿದೆ. ನನ್ನ ಸಂತಾಪಗಳು ಮತ್ತು ಎಲ್ಲ ಸ್ಟಂಟ್ ಕಲಾವಿದರಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈ ಮೂಲಕ ಪ್ರಾರ್ಥಿಸಿಕೊಳ್ಳುತ್ತೇನೆ" ಎಂದು ಮಾಧವನ್ ಟ್ವೀಟ್ ಮಾಡಿದ್ದಾರೆ.
ಇದೆ ಸಮಯದಲ್ಲಿ ತಮಿಳು ನಟ ಸೂರ್ಯ ಶಿವಕುಮಾರ್ ಕೂಡ ಟ್ವೀಟ್ ಮಾಡಿಡ್ಡಿ "ಬಹಳ ದುಃಖಗೊಂಡಿದ್ದೇನೆ. ವಿ ಎಫ್ ಎಕ್ಸ್ (ಗ್ರಾಫಿಕ್ಸ್) ಯುಗದಲ್ಲಿ ಇದು ದುರದೃಷ್ಟ. ಚಿತ್ರತಂಡದ ಸುರಕ್ಷತೆ ಬಗ್ಗೆ ಕ್ರಮ ತೆಗೆದುಕೊಳ್ಳುವುದಕ್ಕೆ ಇದು ಸೂಕ್ತ ಸಮಯ. ಮೃತಪಟ್ಟವರ ಕುಟುಂಬ ವರ್ಗಕ್ಕೆ ನನ್ನ ತಾಪಗಳು" ಎಂದಿದ್ದು ಅದನ್ನು ಮರುಟ್ವೀಟ್ ಮಾಡಿದ್ದಾರೆ.