ಬೆಂಗಳೂರು: ಡಿಜಿಟಲ್ ಯುಗದಲ್ಲಿ 'ಬದ್ಮಾಶ್' ಚಿತ್ರತಂಡ ಪ್ರಚಾರಕ್ಕಾಗಿ ಸಾಂಪ್ರದಾಯಿಕ ಮಾರ್ಗಗಳ ಮೊರೆ ಹೋಗಿದೆ. ಆಟೋಗಳು ಮೈಕುಗಳ ಮೂಲಕ ರಸ್ತೆಗಿಳಿದು ಪ್ರಚಾರಕ್ಕೆ ಮುಂದಾಗಿದೆ ತಂಡ.
ನವೆಂಬರ್ ೧೮ ಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರದ ಪ್ರಚಾರಕ್ಕಾಗಿ ಕಾಲೇಜು ಯುವಕರು ಸ್ವಯಂ ಆಸಕ್ತಿಯಿಂದ ಮುಂದೆ ಬಂದಿದ್ದಾರಂತೆ.
ತಮ್ಮ ಎಂಜಿನಿಯರಿಂಗ್ ಪದವಿ ಮುಗಿಸಿ ಸಿನೆಮಾ ರಂಗಕ್ಕೆ ಬಂದವರು ನಿರ್ದೇಶಕ ಆಕಾಶ್ ಶ್ರೀವತ್ಸ. ಈಗ ಚಿತ್ರತಂಡ ೨೯ ಜಿಲ್ಲೆಗಳಾದ್ಯಂತ ಆಟೋಗಳನ್ನು ಬಾಡಿಗೆ ಪಡೆದು ಅದಕ್ಕೆ ಹಾರ್ನ್ ಮತ್ತು ಮೈಕ್ ಗಳಲ್ಲಿ ಸಿಕ್ಕಿಸಿ, ಬದ್ಮಾಶ್ ಚಿತ್ರದ ಪೋಸ್ಟರ್ ಗಳನ್ನೂ ಅಂಟಿಸಿ ಪ್ರಚಾರಕ್ಕೆ ಇಳಿದಿದೆ.
"ಬೆಂಗಳೂರಿನಲ್ಲಿ ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿ ಆಟೋಗಳಲ್ಲಿ ನಾವು ತರಬೇತಿ ನೀಡಿರುವ ಪ್ರತಿನಿಧಿಗಳಿರುತ್ತಾರೆ. ಬೆಂಗಳೂರಿನಲ್ಲಿ ಮಾತ್ರ ಕಾರುಗಳನ್ನು ಬಳಸಲಿದ್ದೇವೆ. ಎಲ್ಲ ಪ್ರತಿನಿಧಿಗಳು ಜನರ ಜೊತೆ ವೈಯಕ್ತಿಕವಾಗಿ ವ್ಯವಹರಿಸಿ ಸಿನೆಮಾ ನೋಡಲು ಪ್ರೇರೇಪಿಸಲಿದ್ದಾರೆ" ಎನ್ನುತ್ತಾರೆ ನಿರ್ದೇಶಕ ಆಕಾಶ್.
ಇಂತಹ ಪ್ರಚಾರದ ಅವಶ್ಯಕತೆ ಬಹಳಷ್ಟಿದೆ ಎನ್ನುವ ನಿರ್ದೇಶಕ "ತಂತ್ರಜ್ಞಾನ ಇದ್ದರು ಅದು ಕಾಸ್ಮೋಪಾಲಿಟನ್ ನಗರಕ್ಕೆ ಸೀಮಿತವಾಗಿದೆ. ನಮಗೆ ವೈಯಕ್ತಿಕವಾಗಿ ಗಮನ ಹರಿಸುವುದು ಬೇಕಾಗಿದೆ. ರಾಜ್ಯದ ಪ್ರತಿ ಮೂಲೆ ಮೂಲೆಗೂ ನಮ್ಮ ಸಿನೆಮಾ ಕೊಂಡೊಯ್ಯುವ ಆಸೆ. ಆದುದರಿಂದ ಸಾಂಪ್ರದಾಯಿಕ ಮಾರ್ಗದ ಮೊರೆ ಹೋಗಿದ್ದೇವೆ" ಎನ್ನುತ್ತಾರೆ.
ರವಿ ಕಶ್ಯಪ್ ನಿರ್ಮಿಸಿರುವ ಈ ಚಿತ್ರದಲ್ಲಿ ಧನಂಜಯ್ ಮತ್ತು ಸಂಚಿತಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅಚ್ಯುತ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಜುಡಾ ಸ್ಯಾಂಡಿ ಅವರ ಸಂಗೀತ ಮತ್ತು ಶ್ರೀಶ ಕುಡುವಲ್ಲಿ ಅವರ ಸಿನೆಮ್ಯಾಟೋಗ್ರಫಿ ಸಿನೆಮಾಗಿದೆ.