ಇನ್ಮುಂದೆ ಚಿತ್ರೀಕರಣದ ವೇಳೆ ದುರಂತ ನಡೆದರೆ ನಿರ್ದೇಶಕರೇ ಹೊಣೆ: ಫಿಲಂ ಚೇಂಬರ್
ಬೆಂಗಳೂರು: ಕನ್ನಡ ಚಲನ ಚಿತ್ರಗಳ ಸಾಹಸ ಶೂಟಿಂಗ್ ವೇಳೆ ಯಾವುದೇ ದುರಂತ ಸಂಭವಿಸಿದರೇ ಅದಕ್ಕೆ ನಿರ್ದೇಶಕರೇ ನೇರ ಹೊಣೆ ಎಂದು ರಾಜ್ಯ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ಹೇಳಿದ್ದಾರೆ.
ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ರಾಕ್ಲೈನ್ ವೆಂಕಟೇಶ್(ಕಾರ್ಯದರ್ಶಿ ,ಕಲಾವಿದರ ಸಂಘ), ಸಾ.ರಾ. ಗೋವಿಂದು ಮತ್ತು ಮುನಿರತ್ನ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮಾಸ್ತಿಗುಡಿ ಸಿನಿಮಾ ಶೂಟಿಂಗ್ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಸಾವನ್ನಪ್ಪಿರುವ ನಟರಾದ ಅನಿಲ್ ಮತ್ತು ಉದಯ್ ಕುಟುಂಬಗಳಿಗೆ ಈಗಾಗಲೇ ಸರ್ಕಾರ ಪರಿಹಾರ ಘೋಷಿಸಿದೆ. ಚಿತ್ರರಂಗ ಕೂಡಾ ಮೃತರ ಕುಟುಂಬದ ನೆರವಿಗೆ ಸದಾ ಸಿದ್ಧವಿದೆ ಎಂದರು.
ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ದುರಂತ ಇಡೀ ಚಿತ್ರರಂಗಕ್ಕೆ ಎಚ್ಚರಿಕೆಯ ಗಂಟೆ. ಚಿತ್ರರಂಗದವರು ತಮ್ಮ ಜವಾಬ್ಧಾರಿ ಅರಿಯುವ ಸಮಯ ಬಂದಿದೆ. ನಿರ್ಮಾಪಕ ಸುಂದರ್ ಪಿ.ಗೌಡ ನ್ಯಾಯಾಂಗ ಬಂಧನದಲ್ಲಿದ್ದಾನೆ .ಯಾವುದೇ ತಪ್ಪು ಮಾಡದ ನಿರ್ಮಾಪಕನಿಗೆ ಶಿಕ್ಷೆ ಯಾಕೆ ?ಇನ್ನು ಮುಂದೆ ದುರಂತಗಳಿಗೆ ಸಾಹಸ ನಿರ್ದೇಶಕರೇ ಹೊಣೆಯಾಗುತ್ತಾರೆ. ಮುಂದಿನ ದಿನಗಳಲ್ಲಿ ಇಂತಹ ದುರಂತಗಳು ಸಂಭವಿಸದಂತೆ ಮುನ್ನಚ್ಚೆರಿಕೆ ವಹಿಸುವುದು ಚಿತ್ರರಂಗದ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೃತ ಅನಿಲ್ ಮತ್ತು ಉದಯ್ ಅವರ ಕುಟುಂಬದ ಜೊತೆ ಚಿತ್ರರಂಗವಿದ್ದು, ಸರಕಾರದ ವತಿಯಿಂದ ಅವರ ಕುಟುಂಬಗಳಿಗೆ ನಿವೇಶನ ಕೊಡಿಸಲು ನಾವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದು ಸಾ.ರಾ ಗೋವಿಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ