ಬೆಂಗಳೂರು: 'ರಣ ವಿಕ್ರಮ'ನ ನಂತರ ನಿರ್ದೇಶಕ ಪವನ್ ಒಡೆಯರ್ ನಟ ಪುನೀತ್ ರಾಜಕುಮಾರ್ ಅವರ ಮತ್ತೊಂದು ಸಿನೆಮಾ ನಿರ್ದೇಶಿಸಲಿದ್ದಾರೆ ಎಂಬ ವದಂತಿಗಳು ಗಾಂಧಿನಗರದಲ್ಲಿ ಸುದ್ದಿ ಮಾಡಿದ್ದವು. ಈಗ ಆ ಸುದ್ದಿ ಸಾಕಾರವಾಗುತ್ತಿರುವ ಸುಳಿವು ಸಿಕ್ಕಿದೆ.
ಪುನೀತ್ ಅವರ ಈ ಹೊಸ ಚಿತ್ರದ ಶೀರ್ಷಿಕೆ 'ವೀರ ಆಂಜನೇಯ ಪ್ರಸಾದ' (ವಿಎಪಿ). ಇದು ಗಾಂಧಿನಗರದಲ್ಲಿ ಸಂಚಲನ ಮೂಡಿಸಿದೆ ಎನ್ನುತ್ತವೆ ಮೂಲಗಳು. ಈ ಶೀರ್ಷಿಕೆಗೆ ನಟನ ಅಭಿಮಾನಿಗಳು ಹರ್ಷಗೊಂಡಿದ್ದಾರಂತೆ!
ಈ ಸಿನೆಮಾದ ಬಗ್ಗೆ ಇನ್ನು ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ ಶಿರಿಷಾ ಲಗದಪತಿ ನಿರ್ಮಿಸುತ್ತಿರುವ ಈ ಸಿನೆಮಾದ ಮುಹೂರ್ತ ಅಕ್ಟೋಬರ್ 11 ಕ್ಕೆ ನೆರವೇರಲಿದೆಯಂತೆ. ಮತ್ತು ಸಿನೆಮಾದ ಚಿತ್ರೀಕರಣ ಮುಂದಿನ ವರ್ಷದ ಪ್ರಾರಂಭದಲ್ಲಿ ಶುರುವಾಗುವ ಸಾಧ್ಯತೆಯಿದೆ.
ಶಿರಿಷಾ ಲಗದಪತಿ ಈ ಹಿಂದೆ ಪವನ್ ಅವರ ತೆಲುಗು ಚಿತ್ರ 'ಪೋಟುಗದು' ಮತ್ತು ಅವರ ಚೊಚ್ಚಲ ಕನ್ನಡ ಚಿತ್ರ 'ಗೋವಿಂದಾಯನಮಃ' ನಿರ್ಮಿಸಿದ್ದರು.