ಬೆಂಗಳೂರು: ಸ್ಟಾರ್ ನಟ-ನಿರ್ದೇಶಕ ಜೋಡಿ ಗಣೇಶ್ ಮತ್ತು ಯೋಗರಾಜ್ ಭಟ್ ಮತ್ತೆ 'ಮುಗುಳುನಗೆ' ಬೀರಲು ಬಂದಿರುವುದು ಕನ್ನಡ ಚಿತ್ರಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರುವ ಸಂಗತಿ. ಈಗ ಚಿತ್ರತಂಡ ಪಾಂಡಿಚೆರಿಯಲ್ಲಿ ತಾತ್ಕಾಲಿಕವಾಗಿ ಬೀಡುಬಿಟ್ಟಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ.
ರೋಮ್ಯಾನ್ಸ್ ಚಿತ್ರ ಎಂದು ಬಣ್ಣಿಸಲಾಗಿರುವ 'ಮುಗುಳುನಗೆ'ಯಲ್ಲಿ ಮೂವರು ಹೀರೋಯಿನ್ ಗಳು. ಈ ಪ್ರೀತಿ ಪಯಣದ ಚಿತ್ರದ ಗಣೇಶ್ ಮತ್ತು ನಿಖಿತಾ ನಾರಾಯಣ್ ಭಾಗವನ್ನು ಸದ್ಯಕ್ಕೆ ಪಾಂಡಿಚೆರಿಯಲ್ಲಿ ಚಿತ್ರೀಕರಣಗೊಳ್ಳುತ್ತಿದ್ದು, ಈ ತಿಂಗಳ ಕೊನೆಯವರೆಗೆ ಮುಂದುವರೆಯಲಿದೆ.
ಬೆಂಗಳೂರಿನಲ್ಲಿ ಪ್ರಾರಂಭವಾದ ಚಿತ್ರೀಕರಣ ನಂತರ ಮೈಸೂರಿನಲ್ಲಿ ಮುಂದುವರೆದು ಈಗ ಪಾಂಡಿಚೆರಿಗೆ ತೆರಳಿದೆ.
ಅಮೂಲ್ಯ ಮತ್ತು ಆಶಿಕಾ ರಂಗನಾಥ್ ಇನ್ನಿಬ್ಬರು ನಾಯಕನಟಿಯರು ಸಿನೆಮಾದಲ್ಲಿದ್ದು ಭಾವನಾ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲೇ ತಿಳಿಸಿದ್ದಂತೆ ಸಿನೆಮಾದಲ್ಲಿ ಯಾವ ಖಳನಾಯಕನು ಇಲ್ಲ, ಬದಲಾಗಿ ಪರಿಸ್ಥಿತಿಗಳೇ ಇಲ್ಲಿ ಖಳನಾಯಕರ ಪಾತ್ರ ವಹಿಸಲಿವೆಯಂತೆ.