ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಮುಂದಿನ ಚಲನಚಿತ್ರ 'ರಯೀಸ್ ಪ್ರಚಾರದ ಸಮಯದಲ್ಲಿ ವೊಡೊಧರಾ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಓರ್ವ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆಯನ್ನು ಮಂಗಳವಾರ ಖಂಡಿಸಿ ನಟನನ್ನು ಭೂಗತ ದೊರೆ ದಾವೂದ್ ಇಬ್ರಾಹಿಂ ಅವರಿಗೆ ಕೂಡ ಹೋಲಿಸಿದ್ದಾರೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ.
ಓರ್ವ ವ್ಯಕ್ತಿ - ವೋಡೋದರಾದ ಹತಿಖಾನ ಪ್ರದೇಶದ ಸಾಮಾಜಿಕ ಕಾರ್ಯಕ್ರತ ಫರೀದ್ ಖಾನ್ ಪಠಾಣ್ ಮೃತಪಟ್ಟಿದ್ದರೆ, ಇಬ್ಬರು ಈ ನೂಕು ನುಗ್ಗಾಟದಲ್ಲಿ ಗಾಯಗೊಂಡಿದ್ದಾರೆ. ಮುಂಬೈನಿಂದ ದೆಹಲಿಗೆ ತೆರಳುತ್ತಿದ್ದ ನಟ ಆಗಸ್ಟ್ ಕ್ರಾಂತಿ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿದ್ದರು.
ಈ ಘಟನೆಯ ಬಗ್ಗೆ ಪ್ರತಿಕ್ರಿಸಿರುವ ಕೈಲಾಶ್ "ದಾವೂದ್ ಇಬ್ರಾಹಿಂ ಬೀದಿಗಿಳಿದರೆ ಅವನನ್ನು ನೋಡಲು ಕೂಡ ಜನ ಗುಂಪುಗಟ್ಟುತ್ತಾರೆ. .. ಜನ ಗುಂಪುಗಟ್ಟುವುದರ ಆಧಾರದ ಮೇಲೆ ಜನಪ್ರಿಯತೆಯನ್ನು ಅಳೆಯಲು ಸಾಧ್ಯವಿಲ್ಲ. ನಾನು ಮುಂದಕ್ಕೆ ಪ್ರತಿಕ್ರಿಯಿಸುವುದಿಲ್ಲ. .. ಇದರ ಅರ್ಥ ಏನೆಂದು ಜನಕ್ಕೆ ಗೊತ್ತಾಗುತ್ತದೆ" ಎಂದಿದ್ದಾರೆ.