ನಾಗಾಭರಣ ನಿರ್ದೇಶನದ 'ಅಲ್ಲಮ'ದಲ್ಲಿ ಸಂತನ ಪಾತ್ರ ಪೋಷಿಸದ ಬಗ್ಗೆ ಧನಂಜಯ್

ಇತಿಹಾಸ ಮಹಾಪುರುಷರ ಜೀವನವನ್ನು ದೃಶ್ಯಮಾಧ್ಯಮದಲ್ಲಿ ಕಟ್ಟಿಕೊಡುವುದು ಸವಾಲಿನ ಕೆಲಸ. ಕನ್ನಡ ಚಿತ್ರರಂಗದಲ್ಲಿ ಇಂತಹ ಸಿನೆಮಾಗಳು ವಿರಳ ಎನ್ನುತ್ತಾರೆ ನಾಗಾಭರಣ ನಿರ್ದೇಶನದ 'ಅಲ್ಲಮ'
'ಅಲ್ಲಮ' ಪಾತ್ರದಲ್ಲಿ ಧನಂಜಯ್
'ಅಲ್ಲಮ' ಪಾತ್ರದಲ್ಲಿ ಧನಂಜಯ್
ಬೆಂಗಳೂರು: ಇತಿಹಾಸ ಮಹಾಪುರುಷರ ಜೀವನವನ್ನು ದೃಶ್ಯಮಾಧ್ಯಮದಲ್ಲಿ ಕಟ್ಟಿಕೊಡುವುದು ಸವಾಲಿನ ಕೆಲಸ. ಕನ್ನಡ ಚಿತ್ರರಂಗದಲ್ಲಿ ಇಂತಹ ಸಿನೆಮಾಗಳು ವಿರಳ ಎನ್ನುತ್ತಾರೆ ನಾಗಾಭರಣ ನಿರ್ದೇಶನದ 'ಅಲ್ಲಮ' ಸಿನೆಮಾದಲ್ಲಿ ಮುಖ್ಯ ನಟರಾದ ಧನಂಜಯ್ ಮತ್ತು ಮೇಘನಾ ರಾಜ್. ಆದುದರಿಂದ ಇಂತಹ ವಿರಳ ಸಿನೆಮಾದ ಭಾಗವಾಗಿದ್ದು ಒಂದು ಅದ್ಭುತ ಅನುಭವ ಎನ್ನುತ್ತಾರೆ ನಟರು. 
ಕನ್ನಡ ನಟನಾಗಿ ಅಲ್ಲಮನ ಪಾತ್ರ ನಿರ್ವಹಿಸುವುದು ನನ್ನ ಕರ್ತವ್ಯವಾಗಿತ್ತು ಎನ್ನುವ ನಟ ಧನಂಜಯ್, ರಾಜಕುಮಾರ್ ನಟಿಸುತ್ತಿದ್ದ ಐತಿಹಾಸಿಕ ಸಿನೆಮಾಗಳನ್ನು ಮೆಚ್ಚಿ ನೋಡಿಕೊಂಡು ಬೆಳೆದ ವ್ಯಕ್ತಿ ತಾನೆಂದು ತಿಳಿಸುತ್ತಾರೆ. "ಅದು ಕ್ಯಾಸೆಟ್ ಗಳು ಬಹಳ ಜನಪ್ರಿಯವಾಗಿದ್ದ ಕಾಲ ಮತ್ತು ದೇವಾಲಯಗಳಲ್ಲಿ ಅವುಗಳನ್ನು ಹಾಕುತ್ತಿದ್ದರು. 'ಬಬ್ರುವಾಹನ', 'ಭಕ್ತ ಪ್ರಹ್ಲಾದ' ಇಂತಹ ಸಿನೆಮಾಗಳಲ್ಲಿ ಅಣ್ಣಾವ್ರು (ಡಾ. ರಾಜಕುಮಾರ್) ಹೊಡೆದಿದ್ದ ಡೈಲಾಗ್ ಗಳು ನನ್ನ ಮನಸ್ಸಿನಲ್ಲಿ ಇನ್ನು ಅಚ್ಚಳಿಯದೆ ಉಳಿದಿವೆ. ನಾನು ಕೂಡ ರಂಗಭೂಮಿ ಹಿನ್ನಲೆಯಿಂದ ಬಂದವನಾದ್ದರಿಂದ ಇಂತಹ ಪಾತ್ರಗಳ ಬಗ್ಗೆ ಬಾಲ್ಯದಲ್ಲಿ ನನಗೆ ವಿಶೇಷ ಪ್ರೀತಿಯಿತ್ತು" ಎನ್ನುತ್ತಾರೆ ಧನಂಜಯ್. 
"ಟಿ ಎಸ್ ನಾಗಾಭರಣ ಮತ್ತು ಹರಿ ಕೋಡೆ ತಂಡಕ್ಕೆ 'ಸಂತ ಶಿಶುನಾಳ ಶರೀಫ', 'ನಾಗಮಂಡಲ' ಮತ್ತು 'ಮೈಸೂರು ಮಲ್ಲಿಗೆ' ಯಂತಹ ಸಿನೆಮಾಗಳನ್ನು ಮಾಡಿದ ಖ್ಯಾತಿಯಿದೆ. ನನ್ನ ವೃತ್ತಿ ಜೀವನ ಪ್ರಾರಂಭ ಹಂತದಲ್ಲೇ ಈ ತಂಡದ ಜೊತೆಗೆ ಕೆಲಸ ಮಾಡಿರುವುದು ನನ್ನ ಅದೃಷ್ಟ" ಎನ್ನುತ್ತಾರೆ ನಟ. 
"ನನ್ನ ಕನಸನ್ನು ನನಸಾಗಿಸಿಕೊಳ್ಳುವುದಕ್ಕೆ ಸಹಕರಿಸಿದ ನಾಗಾಭರಣ ಅವರಿಗೆ ನಾನು ಆಭಾರಿಯಾಗಿದ್ದೇನೆ," ಎನ್ನುವ ಧನಂಜಯ್, ಅಲ್ಲಮನ ವಚನಗಳನ್ನು ಓದಿಕೊಂಡು, ಕೇಳಿಕೊಂಡು ಬೆಳೆದಿದ್ದಕ್ಕೆ ಈ ಪಾತ್ರವನ್ನು ನಿರ್ವಹಿಸುವುದು ಸುಲಭವಾಯಿತು ಎನ್ನುತ್ತಾರೆ. "ಕೆಲವು ನಾಟಕಗಳಲ್ಲಿ ನೋಡಿ ಅಲ್ಲಮನ ಬಗ್ಗೆ ಕೆಲವೊಂದು ಸಂಗತಿಗಳನ್ನು ಅರಿತಿದ್ದೆ" ಎಂದು ಕೂಡ ಅವರು ಹೇಳಿದ್ದಾರೆ. 
"ಆದುದರಿಂದ ಅಲ್ಲಮನ ಪಾತ್ರವನ್ನು ಅಭಿನಯಿಸುವುದಾಗಿ ನಿಶ್ಚಯಿಸಿದ ಮೇಲೆ, ನಾಗಾಭರಣ ಅವರು ಬರಹಗಾರರೊಂದಿಗೆ ಚರ್ಚಿಸಿದ್ದನ್ನೆಲ್ಲೆ ಮತ್ತೆ ಕೇಳಲು ಕುಳಿತೆ. ಅಲ್ಲಮನ ಬಗ್ಗೆ ಸಾಕಷ್ಟು ಪುಸ್ತಕಗಳನ್ನು ಓದಿದೆ. ಈ ಸಂತ ಕವಿ ಮತ್ತು ವಚನಕಾರನ ಬಗ್ಗೆ ಎಲ್ಲ ಸಾಹಿತ್ಯ ವಿದ್ಯಾರ್ಥಿಯು ಅಭಿಮಾನಿಯಾಗಿರುತ್ತಾನೆ ಮತ್ತು ಅದರಲ್ಲಿ ನಾನು ಒಬ್ಬ ಕೂಡ. ಇಡೀ ಅನುಭವ ನನ್ನನು ರಂಗಭೂಮಿ ದಿನಗಳನ್ನು ನೆನಪಿಸಿತು ಇದು ಅದ್ಬುತ" ಎನ್ನುತ್ತಾರೆ. 
ಅಲ್ಲಮನ ಜೀವನದ ಮೂರು ಹಂತಗಳನ್ನು ಚಿತ್ರಿಸಲಾಗಿದ್ದು, ಇದಕ್ಕಾಗಿ ಧನಂಜಯ್ ಒಮ್ಮೆ ತೂಕ ಗಳಿಸಿಕೊಂಡು ಮತ್ತೆ ಕೆಳೆದುಕೊಳ್ಳಬೇಕಾಯಿತಂತೆ. ಇದಕ್ಕಾಗಿ ಅವರು ಯೋಗ ಕೂಡ ಮಾಡಿದರಂತೆ. "ಈ ಸಿನಿಮಾಗಾಗಿ ನಾನು ಮೃದಂಗವನ್ನು ಕೂಡ ಕಲಿಯಬೇಕಾಯಿತು" ಎನ್ನುತ್ತಾರೆ ಧನಂಜಯ್. 
"ಇಡೀ ಸಿನೆಮಾದ ಚಿತ್ರೀಕರಣದ ವೇಳೆ, ಅಲ್ಲಮನನ್ನು ಜಗತ್ತಿಗೆ ಕೊಂಡೊಯ್ಯುವ ದೊಡ್ಡ ಜವಾಬ್ದಾರಿ ಇದೆ ಎಂದು ನಂಬಿದ್ದೆ. ನನ್ನ ವೃತ್ತಿ ಜೀವನದ ಈ ಸಮಯದಲ್ಲಿ ಐತಿಹಾಸಿಕ ವಿಷಯ ಆಯ್ಕೆ ಮಾಡಿಕೊಳ್ಳುವುದು ಸೂಕ್ತವಲ್ಲ ಎಂದು ಚಿತ್ರರಂಗದ ಹಲವರು ಹೇಳಿದ್ದರು ... ಆದರೆ ಕನ್ನಡಿಗನಾಗಿ, ಈ ಪಾತ್ರ ನಿರ್ವಹಿಸುವುದು ನನ್ನ ಕರ್ತವ್ಯ ಎಂದು ತಿಳಿದೆ" ಎನ್ನುತ್ತಾರೆ ಧನಂಜಯ್. 
'ಅಲ್ಲಮ' ಸಿನೆಮಾ ಇದು ತೆರೆಕಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com