ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಮುಂದಿನ ಚಿತ್ರ 'ಪದ್ಮಾವತಿ' ಸಿನೆಮಾ ಸೆಟ್ ನಲ್ಲಿ ನಿರ್ದೇಶಕರ ಮೇಲೆ ನಡೆದಿರುವ ಹಲ್ಲೆಯಿಂದ ತೀವ್ರ ದುಃಖವಾಗಿದೆ ಮತ್ತು ನೋವಾಗಿದೆ ಎಂದಿರುವ ಪದ್ಮಾವತಿ
ಮುಂಬೈ: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಮುಂದಿನ ಚಿತ್ರ 'ಪದ್ಮಾವತಿ' ಸಿನೆಮಾ ಸೆಟ್ ನಲ್ಲಿ ನಿರ್ದೇಶಕರ ಮೇಲೆ ನಡೆದಿರುವ ಹಲ್ಲೆಯಿಂದ ತೀವ್ರ ದುಃಖವಾಗಿದೆ ಮತ್ತು ನೋವಾಗಿದೆ ಎಂದಿರುವ ಪದ್ಮಾವತಿ ಪಾತ್ರ ಪೋಷಿಸುತ್ತಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸಿನೆಮಾದಲ್ಲಿ ಇತಿಹಾಸವನ್ನು ತಿರುಚಲಾಗಿಲ್ಲ ಎಂದಿದ್ದಾರೆ.
ರಜಪೂತ್ ಸಂಸ್ಥೆ, ಶ್ರೀ ರಜಪೂತ್ ಕರ್ನಿ ಸೇನಾದ ಕಾರ್ಯಕರ್ತರು ಶುಕ್ರವಾರ ಜೈಪುರದಲ್ಲಿ ಚಿತ್ರೀಕರಣ ನಡೆಯುವಾಗ ಭನ್ಸಾಲಿ ಮೇಲೆ ದಾಳಿ ಮಾಡಿ, ಕಪಾಳಕ್ಕೆ ಹೊಡೆದು ಅವರ ಬಟ್ಟೆಯನ್ನು ಹರಿದು ಹಲ್ಲೆ ಮಾಡಿದ್ದರು.
"ನಾನು ಆಘಾತಕಾರಿ ಸ್ಥಿತಿಯಲ್ಲಿದ್ದೇನೆ! ನೆನ್ನೆಯ ಘಟನೆಯಿಂದ ತೀವ್ರ ದುಃಖವಾಗಿದೆ ಮತ್ತು ನೋವಾಗಿದೆ! ಪದ್ಮಾವತಿಗೆ ಸಂಬಂಧಿಸಿದಂತೆ ಇತಿಹಾಸವನ್ನು ತಿರುಚಲಾಗಿಲ್ಲ ಎಂದು ನಾನು ಭರವಸೆ ನೀಡಬಲ್ಲೆ" ಎಂದು ದೀಪಿಕಾ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.
"ನಮ್ಮ ಒಂದೇ ಗುರಿ ಎಂದರೆ ಧೈರ್ಯವಂತ ಮತ್ತು ಶಕ್ತಿಯುತ ಮಹಿಳೆಯ ಕಥೆಯನ್ನು ಮೂಲದಲ್ಲಿರುವಂತೆಯೇ ಜಗತ್ತಿಗೆ ಹೇಳುವುದು" ಎಂದು ಕೂಡ ಅವರು ಬರೆದಿದ್ದಾರೆ.
ಈ ಸಿನೆಮಾದಲ್ಲಿ ದೀಪಿಕಾ ಜೊತೆಗೆ ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ನಟಿಸಿದ್ದಾರೆ.