ಬೆಂಗಳೂರು: 'ಅನುಭವ ೨' ಶೀರ್ಷಿಕೆಯನ್ನು ನೊಂದಣಿ ಮಾಡಿಸಿಕೊಂಡಿದ್ದ ನಿರ್ದೇಶಕ ನಿರ್ಭಯ್ ಚಕ್ರವರ್ತಿ ಈಗ ಸಿನೆಮಾ ನಿರ್ದೇಶಿಸಲು ಮುಂದಾಗಿದ್ದಾರೆ.
೧೯೮೪ ರಲ್ಲಿ ಕಾಶಿನಾಥ್ ನಿರ್ದೇಶಿಸಿದ್ದ 'ಅನುಭವ' ಬ್ಲಾಕ್ ಬಸ್ಟರ್ ಚಿತ್ರ ಎನಿಸಿಕೊಂಡಿತ್ತು. ಇದರಲ್ಲಿ ಅಭಿನಯ ಮತ್ತು ಉಮಾಶ್ರೀ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.
ಇದೆ ಶೀರ್ಷಿಕೆಯ ಸಿನೆಮಾ ಮಾಡಲು ನಂತರ ಹಲವು ನಿರ್ದೇಶಕರು ಆಸಕ್ತಿ ತೋರಿದ್ದರು. ಕೆಲವು ದಿನಗಳ ಹಿಂದ ಸತೀಶ್ ನೀನಾಸಂ ನಾಯಕನಟನಾಗಿರುವ ಈ ಹೆಸರಿನ ಸಿನೆಮಾ ಸೆಟ್ಟೇರಲಿದೆ ಎಂಬ ವದಂತಿಗಳು ಕೂಡ ದಟ್ಟವಾಗಿದ್ದವು. ಉದಯ್ ಮೆಹ್ತಾ ನಿರ್ಮಿಸಬೇಕಿದ್ದ ಈ ಸಿನೆಮಾವನ್ನು ಅರಸು ಅಂತಾರೆ ನಿರ್ದೇಶಿಸಬೇಕಿತ್ತು. ಈ ತಂಡ 'ಅನುಭವ ೨' ಶೀರ್ಷಿಕೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಉತ್ಸುಕರಾಗಿದ್ದರು. ಆದರೆ ಇತ್ತೀಚಿನ ವರದಿಗಳ ಪ್ರಕಾರ ಈ ಶೀರ್ಷಿಕೆ ಹೊಂದಿರುವ ನಿರ್ಭಯ್ ತಾವೇ ಸಿನೆಮಾ ಮಾಡಲು ಮುಂದಾಗಿದ್ದಾರೆ.
ಈ ಸಿನೆಮಾವನ್ನು ಕನ್ನಡ ಮತ್ತು ತೆಲುಗಿನಲ್ಲಿ ನಿರ್ದೇಶಿಸಲು ಮುಂದಾಗಿರುವ ನಿರ್ಭಯ್, ನಟ ಜಗಪತಿ ಬಾಬು ಅವರಿಗೆ ನಟಿಸುವಂತೆ ಕೋರಿದ್ದು, ಒಂದು ಸಾಲಿನ ಕಥೆ ಕೇಳಿರುವ ತೆಲುಗು ನಟ ಒಪ್ಪಿಗೆ ನೀಡಿದ್ದಾರಂತೆ.
ಈ ಹಿಂದೆ ನಿರ್ಭಯ್ ಅವರ ಚೊಚ್ಚಲ ಚಿತ್ರ 'ವಿಜಯಾದಿತ್ಯ' ಸಿನೆಮಾದಲ್ಲಿ ನಟ ಜಗಪತಿ ಬಾಬು ನಟಿಸಿದ್ದರು. ಆದರೆ ಆ ಸಿನೆಮಾಗೆ ನಿರ್ಮಾಪಕ ಹೆಚ್ಚಿನ ಸಮಯ ತೆಗೆದುಕೊಂಡಿದ್ದರಿಂದ ಈಗ ಸಿನೆಮಾ ನಿಂತುಹೋಗಿದೆ.
'ಅನುಭವ ೨' ಜನಪ್ರಿಯ ನಟಿಯೊಬ್ಬರ ನಿಜ ಜೀವನದ ಕಥೆ ಹೊಂದಿರಲಿದೆ ಎನ್ನುತ್ತವೆ ಮೂಲಗಳು. ಈ ಸಿನೆಮಾದಲ್ಲಿ ನಟಿಸಲು ನಿರ್ದೇಶಕ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರನ್ನು ಕೂಡ ಕೇಳಿಕೊಂಡಿದ್ದಾರಂತೆ. ಎಲ್ಲ ವಿವರಗಳು ಶೀಘ್ರದಲ್ಲೇ ತಿಳಿದುಬರಲಿವೆ.