ಈ ದುರದೃಷ್ಟಕರ ಬೆಳವಣಿಗೆ ಬಗ್ಗೆ ತಮ್ಮ ಕೇಳುಗರಿಗೆ ತಿಳಿಸಿ, ಪರಿಸ್ಥಿತಿಯನ್ನು ಅರಿಯುವುದಕ್ಕೆ ತಯಾರು ಮಾಡಿಕೊಳ್ಳುವುದಕ್ಕೆ ಹೇಳುವುದು ತಮ್ಮ ಉದ್ದೇಶವಾಗಿತ್ತು ಎಂದು ಹೇಳಿರುವ ಎಸ್ ಪಿಬಿ, ಯಾವುದೇ ರೀತಿಯಲ್ಲಿ ಕಠಿಣ ಅಭಿಪ್ರಾಯ ವ್ಯಕ್ತಪಡಿಸಿ, ಚರ್ಚೆ ಮಾಡದಂತೆ ಮನವಿ ಮಾಡಿದ್ದಾರೆ. ಎಸ್.ಪಿ.ಬಿ ಹಾಗೂ ಇಳಯರಾಜ ಅವರ ಆಪ್ತ ವಲಯಗಳು ಹೇಳುವ ಪ್ರಕಾರ, ಕಳೆದ ವರ್ಷ ಅಮೆರಿಕಾ ಪ್ರವಾಸ ಕೈಗೊಂಡ ವೇಳೆಯಲ್ಲಿ ಇಳಯರಾಜ ಅವರೊಂದಿಗೆ ಎಸ್.ಪಿ.ಬಿ ಹೋಗಿರಲಿಲ್ಲ. ಆದ್ದರಿಂದ ಇಬ್ಬರ ನಡುವೆ ಅಸಮಾಧಾನ ಉಂಟಾಗಿದೆಯಂತೆ. ತಮ್ಮ ರಚನೆಗಳನ್ನು ಅನುಮತಿ ಇಲ್ಲದೇ ಬಳಸಿಕೊಂಡಿದ್ದ ಆಡಿಯೋ ಸಂಸ್ಥೆಗಳ ವಿರುದ್ಧವೂ ಇಳಯರಾಜ ದೂರು ದಾಖಲಿಸಿದ್ದ ಉದಾಹರಣೆಗಳಿವೆ. ಅಷ್ಟೇ ಅಲ್ಲದೇ ನಿರ್ದೇಶಕ ಶಂಕರ್ ಅವರು ತಮ್ಮ "ಊರು ವಿಟ್ಟು ಊರು ವಂದು" ಎಂಬ ಹಳೆಯ ಗೀತ ರಚನೆಯೊಂದನ್ನು ಅನುಮತಿ ಇಲ್ಲದೇ 2014 ರಲ್ಲಿ ತೆರೆ ಕಂಡ ಕಪ್ಪಲ್ ಚಲನಚಿತ್ರದ ರೀಮಿಕ್ಸ್ ಗಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಹಾಡನ್ನು 1989 ರ ಚಿತ್ರ ಕರಗಟ್ಟಕಾರನ್ ಗಾಗಿ ಇಳಯರಾಜ ರಚಿಸಿದ್ದರು.