ಬೆಂಗಳೂರು: ೧೯೯೨ ರಲ್ಲಿ 'ಚೈತ್ರದ ಪ್ರೇಮಾಂಜಲಿ' ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಎಸ್ ನಾರಾಯಣ್, ಈಗ ಹಲವು ರಿಮೇಕ್ ಗಳು ಮತ್ತು ಪ್ರೇಮ ವಿಷಯ ಆಧಾರಿತ ಸಿನೆಮಾಗಳ ನಿರ್ದೇಶನದಿಂದ ಗಾಂಧಿನಗರದಲ್ಲಿ ಜನಪ್ರಿಯ ನಿರ್ದೇಶಕನಾಗಿ ಬೆಳೆದಿದ್ದಾರೆ.
ಈ ಹಿಂದೆ, ಪ್ರೀತಿ-ಜಾತಿ-ಮರ್ಯಾದಾ ಹತ್ಯೆಯ ವಿಷಯ ಹೊಂದಿದ್ದ ರಿಮೇಕ್ ಚಿತ್ರ 'ಚೆಲುವಿನ ಚಿತ್ತಾರ' ನಿರ್ದೇಶಿಸಿದ್ದ ನಾರಾಯಣ್ ಅಂತಹುದೇ ವಿಷಯ ಹೊಂದಿರುವ ಮರಾಠಿ ಬ್ಲಾಕ್ ಬಸ್ಟರ್ ಚಿತ್ರ 'ಸೈರಾತ್' ರಿಮೇಕ್ ಮಾಡುವುದಕ್ಕೆ ಕೂಡ ಮುಂದಾಗಿದ್ದಾರೆ. ಇದರ ಕನ್ನಡ ಅವತರಿಣಿಕೆ 'ಮನಸು ಮಲ್ಲಿಗೆ' ಈ ವಾರ ಬಿಡುಗಡೆಗೆ ಸಿದ್ಧವಾಗಿದೆ.
"ಮೂಲ ಸ್ಕ್ರಿಪ್ಟ್ ಯಾವ ಭಾಷೆಯಲ್ಲಿದೆ ಎಂಬುದು ಮುಖ್ಯವಾಗುವುದಿಲ್ಲ. ಭಾವನೆಗಳಿಗೆ ಸಮಯದ, ಭಾಷೆಯ ಹಂಗಿಲ್ಲ. ವ್ಯಕ್ತಿಯೊಬ್ಬ ಈ ಗ್ರಹದ ಮೇಲೆ ಹುಟ್ಟಿದ ಮೇಲೆ ಅವನಿಗೆ ಹಸಿವಾಗುತ್ತದೆ ಮತ್ತು ಅವನ ಬಯಕೆಗಳು ಕೂಡ ಒಂದೇ ಆಗಿರುತ್ತವೆ. ಹಾಗೆಯೇ ಪ್ರೀತಿ ಕೂಡ ಎಂದಿಗೂ ಕಾಣೆಯಾಗದ ಭಾವನೆ" ಎನ್ನುತ್ತಾರೆ ನಾರಾಯಣ್.
"ಪ್ರೀತಿ ಕಥೆ ಮಾಡುವುದು ಯಶಸ್ಸಿನ ಫಾರ್ಮುಲಾ ಆಗಿದ್ದರು, ನಿರ್ದೇಶಕನಾಗಿ ಕಥಾ ವಿಷಯವನ್ನು ಸರಿಯಾಗಿ ನಿಭಾಯಿಸಿ ಪ್ರೇಕ್ಷಕರಿಗೆ ಅದನ್ನು ಸರಿಯಾಗಿ ಕಟ್ಟಿಕೊಡುವ ಜವಾಬ್ದಾರಿ ನನಗಿರುತ್ತದೆ" ಎನ್ನುತ್ತಾರೆ ಅವರು.
ಈ ಹಿಂದೆ ಎಷ್ಟೋ ಸಿನೆಮಾಗಳನ್ನು ನಿರ್ದೇಶಿಸಿದ್ದರು, ಪ್ರತಿ ವಿಷಯ ನನಗೆ ತಾಜಾ ಎನ್ನುವ ಅವರು "'ಸೈರಾತ್' ಮೂಲದಲ್ಲಿ ನೋಡಿದ್ದರು ಕೂಡ, ಕನ್ನಡ ಅವತರಿಣಿಕೆ ನೋಡುವವರಿಗೆ ನನ್ನ ಶ್ರಮ ಅರ್ಥವಾಗುತ್ತದೆ. ನಮ್ಮ ಪ್ರೇಕ್ಷಕರಿಗಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದೇವೆ" ಎನ್ನುತ್ತಾರೆ ನಾರಾಯಣ್.
ರಿಮೇಕ್ ಗಳನ್ನು ಮಾಡುವಾಗ ಮೂಲದ ಬೇರುಗಳನ್ನು ಅಲುಗಾಡಿಸದೆ ಬದಲಾವಣೆ ಮಾಡುವುದಾಗಿ ತಿಳಿಸುವ ನಾರಾಯಣ್ "ನಮ್ಮ ಪ್ರಾದೇಶಿಕ ನೇಟಿವಿಟಿಗೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಆ ಚೌಕಟ್ಟಿನಲ್ಲಿಯೇ ಕೆಲಸ ಮಾಡುತ್ತೇನೆ. ನಾನು ಕೇವಲ ರಿಮೇಕ್ ಮಾಡುವುದಿಲ್ಲ, ಅದರ ಮೇಲೆ ಮತ್ತೆ ಕೆಲಸ ಮಾಡುತ್ತೇನೆ" ಎನ್ನುತ್ತಾರೆ ನಾರಾಯಣ್.
'ಸೈರಾತ್' ಜಾತೀಯತೆ ಮತ್ತು ಮರ್ಯಾದಾ ಹತ್ಯೆಯ ಬಗ್ಗೆ ಸಿನೆಮಾ ಆಗಿದ್ದರೂ ಅದನ್ನು ಮೂಲದಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿಲ್ಲ ಎನ್ನುವ ನಿರ್ದೇಶಕ "ಜನರಿಗೆ ಏನು ಬೇಕೋ ಅದನ್ನು ತಿನ್ನಿಸಲು ನನಗೆ ಇಷ್ಟ, ಅಜೀರ್ಣ ಆಗುವುದನ್ನು ಕೊಡುವುದು ನನಗಿಷ್ಟವಿಲ್ಲ" ಎನ್ನುತ್ತಾರೆ ನಾರಾಯಣ್.