ಕಾಸರಗೋಡು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಚಾರದ ರಂಗೇರಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರ ಸ್ಟೇಟ್ ಮೆಂಟ್ 8/11 ತೆರೆಗೆ ಬಂದರೆ ಅವರಂತೆ ಕಾಣುವ ಎಂ.ಪಿ.ರಾಮಚಂದ್ರನ್ ಎಲ್ಲರ ಗಮನ ಸೆಳೆಯಲಿದ್ದಾರೆ.
ಈ ಚಿತ್ರದಲ್ಲಿ ಅಧಿಕ ಮೌಲ್ಯದ ನೋಟುಗಳ ಅಮಾನ್ಯತೆ ಭ್ರಷ್ಟಾಚಾರಕ್ಕೆ ತಕ್ಕ ಶಿಕ್ಷೆ ಎಂದು ಪ್ರತಿಪಾದಿಸಲಾಗಿದೆ. ಹೀಗಾಗಿ ಬಿಜೆಪಿ ಪಕ್ಷದವರಿಗೆ ಇದು ಇಷ್ಟವಾಗಲಿದೆ.
ಮೋದಿಯವರನ್ನು ಹೋಲುವ ವ್ಯಕ್ತಿ ಎಂದು ಇಂಟರ್ನೆಟ್ ನಲ್ಲಿ ಕಳೆದ ಜುಲೈಯಲ್ಲಿ ಓರ್ವ ವ್ಯಕ್ತಿ ಸುದ್ದಿಯಾಗಿದ್ದರು. ಅವರೇ ಎಂ.ಪಿ.ರಾಮಚಂದ್ರನ್. ಬೆಂಗಳೂರಿಗೆ ಹೋಗುವ ರೈಲಿಗಾಗಿ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ ವ್ಯಕ್ತಿಯ ಫೋಟೋವನ್ನು ಕಾಲೇಜು ವಿದ್ಯಾರ್ಥಿಯೊಬ್ಬ ತೆಗೆದು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದ. ಕೇರಳದ ಪಯ್ಯನ್ನೂರು ರೈಲ್ವೆ ನಿಲ್ದಾಣದಲ್ಲಿ ಮೋದಿ ಎಂದು ತಲೆಬರಹ ನೀಡಿದ್ದ.
ಮರುದಿನ ರಾಮಚಂದ್ರನ್ ಜುಲೈ 12ರಂದು ಬೆಂಗಳೂರು ತಲುಪುವ ಹೊತ್ತಿಗೆ ಬೆಂಗಳೂರಿನಲ್ಲಿ ಛಾಯಾಗ್ರಾಹಕರು ಮತ್ತು ಸುದ್ದಿಗಾರರು ರಾಮಚಂದ್ರ ಅವರಿಗಾಗಿ ಕಾಯುತ್ತಿದ್ದರು. ಅಷ್ಟು ಹೊತ್ತಿಗೆ ಸ್ಟಾರ್ ಗಿರಿ ಅಂಟಿಸಿಕೊಂಡಿದ್ದ ರಾಮಚಂದ್ರನ್ ಅವರನ್ನು ಟಿವಿ ಸ್ಟುಡಿಯೊಗೆ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿ ಮಾತನಾಡಿಸಿದರು.
ಸುದ್ದಿ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ಇವರ ಫೋಟೋ ಬರುತ್ತಿದ್ದಂತೆ ಸಿನಿಮಾಗಳಲ್ಲಿ ಅವಕಾಶ ಬರಲು ಶುರುವಾಯಿತು. ನಿರ್ಮಾಪಕರಾದ ಕೆ ಎಚ್ ವೇಣು ಮತ್ತು ನಿರ್ದೇಶಕ ಅಪ್ಪಿ ಪ್ರಸಾದ್ ಅವರ ಗ್ರಾಮಕ್ಕೆ ಸೆಪ್ಟೆಂಬರ್ ನಲ್ಲಿ ಹೋಗಿ ಸಿನಿಮಾದಲ್ಲಿ ನಟಿಸಲು ಆಫರ್ ಕೊಟ್ಟರು. ನೋಟುಗಳ ಅಮಾನ್ಯತೆ ಕುರಿತ ಸಿನಿಮಾದಲ್ಲಿ ಪ್ರಧಾನಿ ಪಾತ್ರವನ್ನು ನೀಡಲು ಮುಂದಾದರು. ಅದರಂತೆ ಚಿತ್ರ ತಯಾರಾಯಿತು.
ಚಿತ್ರ ಇಂದು ತೆರೆಗೆ ಬರುತ್ತಿದೆ. ರಾಮಚಂದ್ರನ್ ಸಿನಿಮಾ ಹಿನ್ನಲೆಯವರೇನಲ್ಲ. ಆದರೆ ಸ್ಟೇಟ್ ಮೆಂಟ್ ಚಿತ್ರದ ಶೂಟಿಂಗ್ ಎರಡು ದಿನ ಬೆಂಗಳೂರು ಮತ್ತು ಕೊಡಗಿನಲ್ಲಿ ನಡೆಯಿತಂತೆ ಅದನ್ನು ಖುಷಿಯಿಂದ ಇಷ್ಟಪಟ್ಟಿದ್ದಾರೆ. ಮೋದಿಯಂತೆ ನಾನು ಕಂಡಿದ್ದರಿಂದ ನನಗೆ ಈ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಇನ್ನೊಂದು ಅವಕಾಶ ಸಿಗಬಹುದು ಎಂದು ನಿರೀಕ್ಷಿಸುವುದಿಲ್ಲ. ಆದರೆ ಸಿಕ್ಕಿದರೆ ಮಾಡುತ್ತೇನೆ ಎನ್ನುತ್ತಾರೆ ರಾಮಚಂದ್ರನ್.
ಮುಂಬೈಯ ಸ್ಟೀಲ್ ಕಂಪೆನಿಯೊಂದರಲ್ಲಿ ಸ್ಟೆನೊಗ್ರಾಫರ್ ಆಗಿ ಕೆಲಸ ಮಾಡಿದ ರಾಮಚಂದ್ರನ್ ಅಲ್ಲಿ 30 ವರ್ಷಗಳ ಕಾಲ ಇದ್ದರು. ನಂತರ 10 ವರ್ಷಗಳ ಕಾಲ ಸೌದಿ ಅರೇಬಿಯಾದ ನಿರ್ಮಾಣ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 51 ವರ್ಷಗಳಾದ ಮೇಲೆ ಸ್ವಯಂ ನಿವೃತ್ತಿ ಪಡೆದುಕೊಂಡರು. ಇಬ್ಬರು ಗಂಡು ಮಕ್ಕಳಿದ್ದಾರೆ. ಐಟಿ ವೃತ್ತಿಯಲ್ಲಿರುವ ಮಕ್ಕಳು ಮುಂಬೈ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರ ಪತ್ನಿ ಬೆಂಗಳೂರಿನಲ್ಲಿ ಎರಡನೇ ಪುತ್ರನೊಂದಿಗೆ ಜೀವಿಸುತ್ತಿದ್ದಾರೆ. ಸಂತೃಪ್ತಿಯ ನಿವೃತ್ತಿ ಜೀವನ ಸಾಗಿಸುತ್ತಿರುವ ರಾಮಚಂದ್ರನ್ ಧಾರ್ಮಿಕ ಸ್ಥಳಗಳಿಗೆ ಯಾತ್ರೆ ಹೋಗುತ್ತಿರುತ್ತಾರೆ.
Advertisement