ಬೆಂಗಳೂರು: ಸ್ಯಾಂಡಲ್ ವುಡ್ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಸೇರಿದ ಆಡಿ ಕಾರನ್ನು ನೋ ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ ಎಂದು ಟೆಕ್ಕಿ ಧನಂಜಯ್ ಎಂಬುವವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಮಾಧ್ಯಮಗಳಲ್ಲಿ ಸುದ್ದಿಯಾಗಿರುವ ಬಗ್ಗೆ ನಟ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾರನ್ನು ನನ್ನ ಸ್ನೇಹಿತ ನಿರ್ದೇಶಕ ರಿಷಬ್ ಶೆಟ್ಟಿಗೆ ನೀಡಿದ್ದೇನೆ. ಅವರ ಹೆಸರಿಗೆ ದಾಖಲೆಯನ್ನು ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಜೆ ಪಿ ನಗರದಲ್ಲಿ ರಿಷಬ್ ಶೆಟ್ಟಿಯವರನ್ನು ಸ್ಟುಡಿಯೊಗೆ ಬಿಟ್ಟು ಅಲ್ಲಿ ಸುತ್ತಮುತ್ತ ಬೇರೆ ಸ್ಥಳ ಸಿಗದೆ ಅಲ್ಲಿ ಚಾಲಕ ನಿಲುಗಡೆ ಮಾಡಿರಬೇಕು. ನಮ್ಮ ಗಮನಕ್ಕೆ ಈ ವಿಷಯ ಬಂದಿರಲಿಲ್ಲ. ನಮ್ಮ ಚಾಲಕರೂ ಹೇಳಿರಲಿಲ್ಲ ಎನ್ನುತ್ತಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯವನ್ನು ಹಾಕುವ ಮುನ್ನ ನಮ್ಮ ಗಮನಕ್ಕೆ ತರಬಹುದಾಗಿತ್ತು. ನಾವು ತಕ್ಷಣವೇ ಕಾರನ್ನು ತೆಗೆಯುತ್ತಿದ್ದೆವು. ಅವರು ಮಾಧ್ಯಮ ಮೂಲಕ ಗಮನಸೆಳೆಯಲು ಯತ್ನಿಸಿದ್ದಾರೆ ಎನಿಸುತ್ತದೆ, ಹೀಗಾಗಿ ನನ್ನ ಹೆಸರನ್ನು ಕೂಡ ಟ್ಯಾಗ್ ಮಾಡಿದ್ದಾರೆ ಎನ್ನುತ್ತಾರೆ ರಕ್ಷಿತ್ ಶೆಟ್ಟಿ.
ಇನ್ನು ನಿರ್ದೇಶಕ, ನಟ ರಿಷಬ್ ಶೆಟ್ಟಿ ಕೂಡ ಇದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ್ದಾರೆ. ''ನಾನು ಮತ್ತು ರಕ್ಷಿತ್ ಬೇರೆಯಲ್ಲ, ನಮ್ಮ ಮಧ್ಯೆ ಒಳ್ಳೆಯ ಹೊಂದಾಣಿಕೆ ಮತ್ತು ಬಾಂಧವ್ಯವಿದೆ, ಹೀಗಾಗಿ ಅವರಿಂದ ಪಡೆದ ಕಾರಿನ ದಾಖಲೆಯಲ್ಲಿ ಇನ್ನೂ ಅವರ ಹೆಸರು ಇದೆ. ಆದರೆ ಕಾನೂನು ಪ್ರಕಾರವಾಗಿ ಅವರ ಹೆಸರಿನಿಂದ ನನ್ನ ಹೆಸರಿಗೆ ವರ್ಗಾವಣೆಯಾಗಬೇಕಿರುವುದರಿಂದ ಆ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ನನ್ನ ಸ್ಟುಡಿಯೊ ಇರುವುದು ಜೆ ಪಿ ನಗರದಲ್ಲಿಯೇ. ನಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದೆ. ನನ್ನ ಗಮನಕ್ಕೆ ಈ ವಿಷಯ ಬಂದಿರಲಿಲ್ಲ. ನನ್ನನ್ನು ಸ್ಟುಡಿಯೊಗೆ ಚಾಲಕ ಬಿಟ್ಟು ಅಲ್ಲಿ ಜಾಗವಿಲ್ಲದ ಕಾರಣ ಬೇರೆ ಕಡೆ ತೆಗೆದುಕೊಂಡು ಹೋಗಿ ಪಾರ್ಕಿಂಗ್ ಮಾಡಿರಬಹುದು. ಚಾಲಕರಿಂದಲೂ ನಮಗೆ ಈ ವಿಚಾರ ಗೊತ್ತಾಗಲಿಲ್ಲ, ನಿನ್ನೆ ಸಾಮಾಜಿಕ ಮಾಧ್ಯಮ ಮೂಲಕ ವಿಷಯ ಗೊತ್ತಾದ ಕೂಡಲೇ ಅಲ್ಲಿಂದ ಕಾರು ತೆಗೆಸಿದ್ದೇನೆ ಎಂದಿದ್ದಾರೆ.
Advertisement