ಬೆಂಗಳೂರು: ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಚುನಾವಣೆ ಮುಗಿದಿದ್ದು ಫಲಿತಾಂಶ ಹೊರಬಿದ್ದಿದೆ. ನಟ, ನಿರ್ದೇಶಕ, ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಸತತ ಎರಡನೇ ಬಾರಿಗೆ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಭಾನುವಾರ ಬೆಳಿಗ್ಗೆ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಚುನಾವಣೆ ಪ್ರಕ್ರಿಯೆ ನಡೆದಿತ್ತು. ಹಿರಿಯ ನಿರ್ದೇಶಕ ಭಗವಾನ್ ಫಲಿತಾಂಶ ಘೋಷಣೆ ಮಾಡಿದರು.
ಒಟ್ಟು 125 ನಿರ್ದೇಶಕರು ಮತದಾನ ಮಾಡಿದ್ದು ಇದರಲ್ಲಿ 10 ಅಸಿಂಧುವಾಗಿದೆ. ನಾಗೇಂದ್ರ ಪ್ರಸಾದ್ 100 ಮತ ಗಳಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಸಂಘದ ಉಪಾಧ್ಯಕ್ಷರಾಗಿ ಸಾಧು ಕೋಕಿಲಾ, ರೂಪಾ ಅಯ್ಯರ್,ಆಯ್ಕೆಗೊಂಡಿದ್ದರೆ ಶರಣ್ ಕಬ್ಬೂರ್, ನಾಗೇಂದ್ರ ಕಾರ್ಯದರ್ಶಿಗಳಾಗಿ ಚುನಾಯಿತರಾದರು. ನಾಗೇಶ್ ಟಿ.ಎನ್ ಸಂಘದ ಖಜಾಂಚಿಯಾಗಿ ನೇಮಕವಾಗಿದ್ದಾರೆ.