ಸಿನಿಮಾ ಸುದ್ದಿ
ಮೈಸೂರು: ನಟ ಮಂಡ್ಯ ರಮೇಶ್ ಕಾರು ಅಪಘಾತ, ಅಪಾಯದಿಂದ ಪಾರು
ನಟ ಮಂಡ್ಯ ರಮೇಶ್ ಪ್ರಯಾಣಿಸುತ್ತಿದ್ದ ಕಾರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಅಪಘಾತಕ್ಕೀಡಾಗಿದೆ.
ಶ್ರೀರಂಗಪಟ್ಟಣ: ನಟ ಮಂಡ್ಯ ರಮೇಶ್ ಪ್ರಯಾಣಿಸುತ್ತಿದ್ದ ಕಾರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಅಪಘಾತಕ್ಕೀಡಾಗಿದೆ. ಶ್ರೀರಂಗಪಟ್ಟಣದ ಲೋಕಪಾವನಿ ಸೇತುವೆ ಬಳಿ ರಾ.ಹೆ-275ರಲ್ಲಿ ಅಪಘಾತ ಸಂಭವಿಸಿದ್ದು ನಟ ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿದ್ದ 'ಮಜಾ ಟಾಕೀಸ್' ಶೂಟಿಂಗ್ ಮುಗಿಸಿಕೊಂಡು ಬರುವ ವೇಳೆ ಮುಂಜಾನೆ 7.10ರ ಸುಮಾರಿಗೆ ಕಾರು ಅಪಘಾತಕ್ಕೆ ಈಡಾಗಿದೆ. ಮಂಡ್ಯ ರಮೇಶ್ ತಾವೇ ಕಾರ್ ಚಾಲನೆ ಮಾಡಿಕೊಂಡು ಮೈಸೂರಿಗೆ ವಾಪಾಸಾಗುತ್ತಿದ್ದರು. ಆಗ ಎದುರಿನಿಂದ ಬಂದ ಲಾರಿಗೆ ಕಾರ್ ಡಿಕ್ಕಿ ಆಗುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಅಪ್ಪಳಿಸಿದೆ.
ಘಟನೆಯಲ್ಲಿ ಕಾರಿನ ಮುಂಭಾಗ ಹಾನಿಗೊಂಡಿದ್ದು ಅದೃಷ್ಟವಶಾತ್ ನಟ ಮಂಡ್ಯ ರಮೇಶ್ ಗೆ ಯಾವ ಅಪಾಯವೂ ಆಗಿಲ್ಲ. ಅಪಘಾತ ಸಂಬಂಧ ಯಾವ ದೂರು ದಾಖಲಿಸಲಾಗಿಲ್ಲ.