ಮುಂಬಯಿ: ಸಂಬಂಧಿಕರ ವಿವಾಹಕ್ಕೆ ತೆರಳಿ ದುಬೈ ನಲ್ಲಿ ಸಾವಿಗೀಡಾಗಿರುವ ಮೋಹಕ ತಾರೆ ಶ್ರೀದೇವಿ ಜನಪ್ರಿಯತೆಯ ಉತ್ತುಂಗದಲ್ಲಿದ್ದರೂ ರಾಜಕೀಯದಿಂದ ದೂರ ಉಳಿದಿದ್ದರು.
ಆದರೆ 1989 ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. 1989ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಶ್ರೀದೇವಿ ತಂದೆ ಕೆ.ಅಯ್ಯಪ್ಪನ್ ಶಿವಕಾಶಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಈ ಕ್ಷೇತ್ರದಿಂದ ಡಿಎಂಕೆ, ಎಐಎಡಿಎಂಕೆಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು, ಶ್ರೀದೇವಿ ತಂದೆ ಅಯ್ಯಪ್ಪನ್ ಅವರನ್ನು ಕಣಕ್ಕಳಿಸುವ ಮೂಲಕ ಕಾಂಗ್ರೆಸ್ ಎಲ್ಲರ ಹುಬ್ಬೇರುವಂತೆ ಮಾಡಿತು. ತಮ್ಮ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದರೂ ಅಯ್ಯಪ್ಪನ್ ಮಾತ್ರ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದರು.
ಅಯ್ಯಪ್ಪನ್ ರಾಜೀವ್ ಗಾಂಧಿ ಅವರನ್ನು ಪದೇ ಪದೇ ಭೇಟಿ ಮಾಡುತ್ತಿದ್ದರು. 1989 ರ ತಮಿಳುನಾಡು ವಿಧಾನ ಸಭೆ ಚುನಾವಣೆಯಲ್ಲಿ ಹಲವು ಸ್ಟಾರ್ ಗಳು ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾದರು. ತಮ್ಮ ತಂದೆ ಪರ ಪ್ರಚಾರದಲ್ಲಿ ಶ್ರೀದೇವಿ ಮುಂದಾದರು. ಶ್ರೀದೇವಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಆದರೆ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದ ಶ್ರೀದೇವಿ ಕೇವಲ ಶಿವಕಾಶಿಯಲ್ಲಿ ಮಾತ್ರ ಚುನಾವಣಾ ಪ್ರಚಾರದಲ್ಲಿ ಪಾಲ್ಗೋಳ್ಳುವುದಾಗಿ ತಿಳಿಸಿದರು.
ಚುನಾವಣಾ ರ್ಯಾಲಿ ಉದ್ದೇಶಿಸಿ ಶ್ರೀದೇವಿ ಮಾತನಾಡಲಿಲ್ಲ, ಆದರೆ ತಮ್ಮ ತಂದೆ ಜೊತೆ ಶಿವಕಾಶಿ ವಿಧಾನಸಭೆ ಕ್ಷೇತ್ರದಲ್ಲಿ ಮೂರರಿಂದ ನಾಲ್ಕುದಿನ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
5000 ಮತಗಳಿಂದ ಶ್ರೀದೇವಿ ತಂದೆ ಅಯ್ಯಪ್ಪನ್ ಡಿಎಂಕೆ ಪಿ.ಶ್ರೀನಿವಾಸನ್ ವಿರುದ್ಧ ಸೋತಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಳ್ಳುವ ಮೂಲಕ ಅಯ್ಯಪ್ಪನ್ ಅವರ ರಾಜಕೀಯ ಆಕಾಂಕ್ಷೆ ಕೊನೆಗೊಂಡಿತು.