ಕೆ.ಮಂಜು ಪುತ್ರನ ಅದೃಷ್ಟ ಪರೀಕ್ಷೆ, 2018ರಲ್ಲಿ ಮೂರು ಚಿತ್ರಗಳಲ್ಲಿ ಶ್ರೇಯಸ್ ಮಂಜು ಅಭಿನಯ

ಈ ವರ್ಷ ಅನೇಕ ಹೊಸ ಮುಖಗಳು ಸ್ಯಾಂಡಲ್ ವುಡ್ ಗೆ ಬರಲಿದ್ದು ಅವರಲ್ಲಿ ಹಿರಿಯ ನಟ, ನಿರ್ಮಾಪಕರ ಮಕ್ಕಳೂ ಸೇರಿದ್ದಾರೆ.
ಶ್ರೇಯಸ್ ಮಂಜು
ಶ್ರೇಯಸ್ ಮಂಜು
ಬೆಂಗಳೂರು: ಈ ವರ್ಷ ಅನೇಕ ಹೊಸ ಮುಖಗಳು ಸ್ಯಾಂಡಲ್ ವುಡ್ ಗೆ ಬರಲಿದ್ದು ಅವರಲ್ಲಿ ಹಿರಿಯ ನಟ, ನಿರ್ಮಾಪಕರ ಮಕ್ಕಳೂ ಸೇರಿದ್ದಾರೆ. ಅದರಲ್ಲಿ ಖ್ಯಾತ ನಿರ್ಮಾಪಕರಾದ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು ಪಾಲು ತುಸು ಹೆಚ್ಚೆನಿಸುತ್ತಿದೆ. ಶ್ರೇಯಸ್ ಮಂಜು ಪಾಲಿಗೆ ಈ 2018ನೇ ವರ್ಷ ಬಹು ಮುಖ್ಯವಾಗಿದ್ದು ಅವರು ತಮ್ಮ ಚಿತ್ರಗಳ ಬಗೆಗೆ ಸಾಕಷ್ಟು ಭರವಸೆ ಇರಿಸಿದ್ದಾರೆ. ವಿಶೇಷವೆಂದರೆ ಈ ಸಾಲಿನಲ್ಲಿ ಶ್ರೇಯಸ್ ಅಭಿನಯದ ಮೂರು ಚಿತ್ರಗಳು ಸೆಟ್ಟೇರಲಿದೆ.
ಇದಾಗಲೇ ಇಮ್ರಾನ್ ಸರ್ಧಾರಿಯಾ ಹಾಗೂ ರಘು ಕೋವಿ ನಿರ್ದೇಶನದ ಚಿತ್ರಗಳಲ್ಲಿ ಶ್ರೇಯಸ್ ಕಾಣಿಸಿಕೊಳ್ಳುತ್ತಿರುವುದು ಪಕ್ಕಾ ಆಗಿದೆ. ಈಗ ಹೊಸ ಸುದ್ದಿಯ ಪ್ರಕಾರ ಶ್ರೇಯಸ್ ಮಂಜು ಅಭಿನಯದ ಮೂರನೇ ಚಿತ್ರಕ್ಕೆ ಸಹ ನಿರ್ದೇಶಕರ ಆಯ್ಕೆ ಆಗಿದ್ದು ಈ ಚಿತ್ರಕ್ಕೆ  ಚಿತ್ರಕಥೆಯನ್ನು ನಿರ್ಮಾಪಕ ಮಂಜು ಅಂತಿಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಕ್ರಾಂತಿ ನಂತರದ ಚಿತ್ರಗಳ ವಿವರವನ್ನು ಘೋಷಿಸಲು ಚಿತ್ರತಂಡ ನಿರ್ಧರಿಸಿದ್ದು, ಇದಕ್ಕಾಗಿ ಜನವರಿ 25 ರಂದು ಅದ್ದೂರಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ.
 ಈ ಕಾರ್ಯಕ್ರಮದಲ್ಲಿ ಶ್ರೇಯಸ್ ಮಂಜು ಅವರ ತಂದೆ ನಿರ್ಮಾಪಕ ಕೆ. ಮಂಜು ತಮ್ಮ ಪುತ್ರನ ಮೂರೂ ಚಿತ್ರಗಳ ಕುರಿತ ವಿವರ ನೀಡಲಿದ್ದಾರೆ. ಇದರಲ್ಲಿ ಶ್ರೇಯಸ್ ಅಭಿನಯದ ಮೂರನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವವರು ಯಾರೆನ್ನುವುದೂ ಸೇರಿದೆ.
"ಕೆ. ಮಂಜು ತಮ್ಮನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಈ ಬಾರಿ ಅವರು ಚುನಾವಣೆಗೆ ನಿಲ್ಲಲಿದ್ದಾರೆ. ಇದಕ್ಕೂ ಮುನ್ನ ತಮ್ಮ ಮಗನ ವೃತ್ತಿಜೀವನ ಸರಿಯಾದ ಹಾದಿಯಲ್ಲಿ ಸಾಗುವಂತೆ ಮಾಡಲು ಅವರು ತಮ್ಮ ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ಪೂರ್ವತಯಾರಿ ನಡೆಸಿದ್ದಾರೆ "ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭಿಸಿದೆ.
ಏತನ್ಮಧ್ಯೆ, ಶ್ರೇಯಸ್ ಬೆಳ್ಳಿ ಪರದೆಯಲ್ಲಿ ಮಿಂಚಲು ತಾವೂ ತಯಾರಿ ನಡೆಸಿದ್ದು  ಅವರು ಸ್ವತಃ ಒಬ್ಬ ನಟನಿಗೆ ಬೇಕಾದ ವಿವಿಧ ಕೌಶಲಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಇನ್ನು ಶ್ರೇಯಸ್ ನಾಯಕನಾದ ಮೊದಲ ಚಿತ್ರದ ಮೊದಲ ಹಾಡನ್ನು ಡಾ. ವಿಷ್ಣುವರ್ಧನ್ ಗೆ ಅರ್ಪಿಸಲಾಗುತ್ತಿದೆ. ಇಮ್ರಾನ್ ಸರ್ಧಾರಿಯಾ ನಿರ್ದೇಶನದ ಚಿತ್ರದಲ್ಲಿ ಈ ಹಾಡು ಮೂಡಿಬರಲಿದ್ದು ಹಾಡು ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com