ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ಜೆ ಚಂದ್ರಕಲಾ ನಿರ್ದೇಶನದ ಚಿಲ್ಲಂ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಟಿಸುತ್ತಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಆದರೆ ಅವರ ಜಾಗಕ್ಕೀಗ ತೆಲುಗು ಚಿತ್ರರಂಗದ ಖ್ಯಾತ ಕಲಾವಿದ ಜಗಪತಿ ಬಾಬು ಬಂದಿದ್ದಾರೆ.
ಚಿಲ್ಲಂನಲ್ಲಿ ಜಗಪತಿ ಬಾಬು ಅವರದ್ದು ನೆಗೆಟಿವ್ ಪಾತ್ರ. ಈ ಕಾರಣಕ್ಕಾಗಿಯೇ ಅಭಿಮಾನಿಗಳ ಒತ್ತಾಯದ ಮೇರೆಗೆ ರಾಘವೇಂದ್ರ ರಾಜ್ ಕುಮಾರ್ ಹಿಂದೆ ಸರಿದಿದ್ದಾರೆ.
ಹಲವು ವರ್ಷಗಳ ನಂತರ ರಾಘಣ್ಣ ಅವರನ್ನು ಮತ್ತೆ ಅಭಿನಯಕ್ಕೆ ಕರೆತರುತ್ತಿದ್ದೇನೆ ಎಂದು ಖುಷಿಯಾಗಿತ್ತು. ಆದರೆ ಅವರು ನೆಗೆಟಿವ್ ಪಾತ್ರವನ್ನು ಮಾಡಲು ಕೊನೆಗೂ ಇಷ್ಟಪಡಲಿಲ್ಲ. ಹೀಗಾಗಿ ಜಗಪತಿ ಬಾಬು ಅವರನ್ನು ಸಂಪರ್ಕಿಸಿದ್ದು ಮಾತುಕತೆ ಹಂತದಲ್ಲಿದೆ. ಮುಂದೊಂದು ದಿನ ರಾಘಣ್ಣ ಅವರ ಜೊತೆ ಕೆಲಸ ಮಾಡಲು ಅವಕಾಶ ಸಿಗಬಹುದೆಂದು ಭಾವಿಸುತ್ತೇನೆ ಎಂದರು ಚಂದ್ರಕಲಾ.
ಜಗಪತಿ ಬಾಬು ಅವರ ಜೊತೆ ಮೊದಲ ಸುತ್ತಿನ ಮಾತುಕತೆ ಮುಗಿದಿದ್ದು ಸದ್ಯದಲ್ಲಿಯೇ ಹೈದರಾಬಾದಿಗೆ ಹೋಗಿ ಅವರ ಪಾತ್ರದ ಬಗ್ಗೆ ವಿವರಿಸುವೆ ಎನ್ನುತ್ತಾರೆ. ಅವರು ಅಧಿಕೃತವಾಗಿ ಒಪ್ಪಿಗೆ ನೀಡಿದ ನಂತರ ಘೋಷಿಸುವೆ ಎಂದರು.
ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸುವ ಚಿಲ್ಲಂನಲ್ಲಿ ದಿವಾಕರ್, ರಾಘವ್ ನಾತ್, ಸಂದೀಪ್ ಮತ್ತು ಭರತ್ ಚಂದ್ರಕಲಾ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ನವೀನ್ ಕುಮಾರ್ ಅವರ ಛಾಯಾಗ್ರಹಣವಿದೆ.
Advertisement