ಸಿನಿಮಾ ಸುದ್ದಿ
ಕರ್ನಾಟಕದಲ್ಲಿ ರಜನಿಯ 'ಕಾಲ'ನಿಗಿಲ್ಲ ಬಿಡುಗಡೆ?
ಪಾ ರಂಜಿತ್ ನಿರ್ದೇಶಿಸಿ ರಜನಿ ಕಾಂತ್ ಅಭಿನಯಿಸಿರುವ ಕಾಲ ತಮಿಳು ಸಿನಿಮಾ ಜೂನ್ 7 ರಂದು ಬಿಡುಗಡೆಯಾಗಲಿದೆ. ...
ಬೆಂಗಳೂರು: ಪಾ ರಂಜಿತ್ ನಿರ್ದೇಶಿಸಿ ರಜನಿ ಕಾಂತ್ ಅಭಿನಯಿಸಿರುವ ಕಾಲ ತಮಿಳು ಸಿನಿಮಾ ಜೂನ್ 7 ರಂದು ಬಿಡುಗಡೆಯಾಗಲಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ‘ಕಾಲ’ ಬಿಡುಗಡೆಯಾಗುವುದು ಅನುಮಾನ!
ಈ ಹಿಂದೆ ‘ಬಾಹುಬಲಿ-2’ ಚಿತ್ರದಲ್ಲಿ ನಟಿಸಿದ್ದ ಸತ್ಯರಾಜ್ ಕೆಲವು ವರ್ಷಗಳ ಹಿಂದೆ ಕನ್ನಡಿಗರ ಬಗ್ಗೆ ನೀಡಿದ್ದ ಹೇಳಿಕೆ ಉಗ್ರ ಸ್ವರೂಪ ಪಡೆದುಕೊಂಡಿತ್ತು. ಸಿನಿಮಾ ಬಿಡುಗಡೆಗೆ ಎಲ್ಲೆಡೆ ವಿರೋಧವೂ ವ್ಯಕ್ತವಾಗಿತ್ತು. ಪ್ರತಿಭಟನೆಗಳು ನಡೆದಿದ್ದವು. ಖುದ್ದು ನಿರ್ದೇಶಕ ರಾಜಮೌಳಿಯೇ ಕನ್ನಡಿಗರಿಗೆ ಕ್ಷಮೆ ಕೇಳಿದ್ದರು. ಇದೀಗ ಅದೇ ರೀತಿಯ ಮತ್ತೊಂದು ಹೋರಾಟಕ್ಕೆವೇದಿಕೆ ಸಿದ್ಧಗೊಳ್ಳುತ್ತಿದೆ.
‘ಕಾವೇರಿ ವಿಚಾರದಲ್ಲಿ ತಮಿಳು ನಟ ರಜನಿಕಾಂತ್ ಕನ್ನಡಿಗರನ್ನು ಕೆಣಕಿದ್ದಾರೆ. ಹೀಗಾಗಿ ಈ ಹಿಂದೆ ಹೇಳಿದಂತೆ, ಅವರ ನಟನೆಯ ‘ಕಾಲ’ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ. ಇದು ನೆಲ, ಜಲದ ಪ್ರಶ್ನೆ ಆಗಿರುವುದರಿಂದ ಸಿನಿಮಾ ಪ್ರದರ್ಶನ ಮಾಡದಂತೆ ಚಿತ್ರಮಂದಿರದ ಮಾಲೀಕರಲ್ಲಿ ಕೋರಿದ್ದೇವೆ. ಸ್ವಯಂ ಪ್ರೇರಿತವಾಗಿ ನಿರ್ಧಾರ ತೆಗೆದುಕೊಳ್ಳುವುದು ಇನ್ನೂ ಒಳಿತು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ
ಸಾ.ರಾ. ಗೋವಿಂದು ಹೇಳಿದ್ದಾರೆ.
‘ಕರ್ನಾಟಕದಲ್ಲಿ ಕಾಲ ಚಿತ್ರ ಬೇಡ’ ಎಂದು ಒತ್ತಾಯಿಸಿ ಹತ್ತಾರು ಪತ್ರಗಳು ವಾಣಿಜ್ಯ ಮಂಡಳಿಗೆ ಬಂದಿವೆಯಂತೆ. ರಜನಿಕಾಂತ್ ಮಾತ್ರವಲ್ಲದೆ, ಕಮಲ್ ಹಾಸನ್ ಚಿತ್ರಗಳಿಗೂ ನಿಷೇಧ ಹೇರುವಂತೆ ಕನ್ನಡಾಭಿಮಾನಿಗಳು ಪತ್ರದ ಮೂಲಕ ಕೋರಿಕೊಂಡಿದ್ದಾರಂತೆ. ಇದೆಲ್ಲವನ್ನೂ ಪರಿಗಣಿಸಿ, ‘ಕಾಲ’ ಚಿತ್ರದ ಬಿಡುಗಡೆಗೆ ಅವಕಾಶ ನೀಡದಿರಲು ಸಾ.ರಾ. ಗೋವಿಂದು ತೀರ್ವನಿಸಿದ್ದಾರೆ.
ಸ್ವಂತ ಪಕ್ಷ ಘೋಷಿಸಿದ ನಂತರ ರಜನಿ ಬದಲಾಗಿದ್ದಾರೆ. ಕಾವೇರಿ ಬಗ್ಗೆ ಮಾತನಾಡದೆ ಸುಮ್ಮನಿರುತ್ತಿದ್ದ ಅವರು, ಇದೀಗ ಅದೇ ಕಾವೇರಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಪಕ್ಷ ಸ್ಥಾಪಿಸಿ ನೇರ ದಾಳಿಗಿಳಿದಿದ್ದಾರೆ’ ಎಂದು ಸಾ. ರಾ. ಗೋವಿಂದು ಆರೋಪಿಸಿದ್ದಾರೆ.