ಹೌದು, ಸ್ವತಃ ಎಆರ್ ರೆಹಮಾನ್ ತಮ್ಮ ಜೀವನದ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾರೆ. ಎಆರ್ ರೆಹಮಾನ್ ಅವರ ಜೀವನ ಚರಿತ್ರೆಯನ್ನು ಕೃಷ್ಣ ತ್ರಿಲೋಕ್ ದಾಖಲಿಸಿದ್ದು, ಮುಂಬೈ ನಲ್ಲಿ ಪುಸ್ತಕ ಬಿಡುಗಡೆಯಾಗಿದೆ. ಈ ವೇಳೆ ಸಂದರ್ಶನ ನೀಡಿರುವ ಎಆರ್ ರೆಹಮಾನ್, ತಮ್ಮ ಜೀವನದ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾರೆ. "ಸಿನಿಮಾ ಸಂಯೋಜಕರಾಗಿದ್ದ ನನ್ನ ತಂದೆ ಆರ್ ಕೆ ಶೇಖರ್ ಅವರನ್ನು 9 ನೇ ವಯಸ್ಸಿನಲ್ಲಿ ಕಳೆದುಕೊಂಡೆ, ಸಂಗೀತ ಉಪಕರಣಗಳನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದೆವು. ಈ ಮೂಲಕ ಸಂಗೀತ ಕ್ಷೇತ್ರಕ್ಕೆ ಅತ್ಯಂತ ಸಣ್ಣ ವಯಸ್ಸಿನಲ್ಲೇ ಪ್ರವೇಶಿಸಿದೆ. 12-22 ವಯಸ್ಸಿನ ವೇಳೆಗೆ ಎಲ್ಲವನ್ನೂ ನೋಡಿಯಾಗಿತ್ತು, ಸಾಮಾನ್ಯದ ಸಂಗತಿಗಳನ್ನು ಮಾಡುವುದೆಂದರೆ ಬೇಸರವಾಗುತ್ತಿತ್ತು, ಸಾಮಾನ್ಯವಾದ ಸಂಗತಿಗಳನ್ನು ಮಾಡುವುದರಲ್ಲಿ ಆಸಕ್ತಿ ಇರಲಿಲ್ಲ. ಪ್ರಾರಂಭದ ದಿನಗಳಲ್ಲಿ ಎದುರಿಸಿದ ಕಷ್ಟಗಳು ಮುಂದೆ ಧೈರ್ಯವಂತನಾಗುವಂತೆ ಮಾಡಿದವು. 25 ವರ್ಷದವರೆಗೂ ನಾನು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಚಿಂತಿಸುತ್ತಿದ್ದೆ ಎಂದು ಹೇಳಿದ್ದಾರೆ.