ಜೀವನವೆಂದರೆ ಸಮಯಕ್ಕೆ ಸಂಬಂಧಿಸಿದ್ದು, 'ಕಿಸ್ಮತ್' ಬದುಕಿಗೆ ಹತ್ತಿರದ ಕಥೆ: ವಿಜಯ್ ರಾಘವೇಂದ್ರ

ವಿಜಯ್ ರಾಘವೇಂದ್ರ ಅವರ ಮುಂದಿನ ಚಿತ್ರ ಕಿಸ್ಮತ್. ಈ ಕುರಿತು ಅವರಿಂದ ಕೇಳಿದಾಗ ....
ವಿಜಯ್ ರಾಘವೇಂದ್ರ
ವಿಜಯ್ ರಾಘವೇಂದ್ರ

ವಿಜಯ್ ರಾಘವೇಂದ್ರ ಅವರ ಮುಂದಿನ ಚಿತ್ರ ಕಿಸ್ಮತ್. ಈ ಕುರಿತು ಅವರಿಂದ ಕೇಳಿದಾಗ ಅವರು ಹೇಳಿದ್ದಿಷ್ಟು:

ಸಮಯದ ಬಗ್ಗೆ ಹೇಳುವುದೇ ಕಿಸ್ಮತ್. ಚಿತ್ರವನ್ನು ತೆರೆಗೆ ತರಲು ಮೂರು ವರ್ಷ ಹಿಡಿಯಿತು. 2015ರಲ್ಲಿ ಆರಂಭಗೊಂಡ ಸಿನಿಮಾ ಇತ್ತೀಚೆಗಷ್ಟೆ ಮುಗಿದಿದೆ.ನಾನು ಯಾವುದನ್ನೂ ಯೋಚಿಸಿ ಮಾಡುವುದಿಲ್ಲ. ಸಿನಿಮಾ ಮುಗಿದರೂ ಕೂಡ ನಮ್ಮ ಸಂಗೀತ ನಿರ್ದೇಶಕ ರಾಜೇಶ್ ಮುರುಗೇಶನ್ ಅವರಿಗೆ ಅಸೌಖ್ಯವಿದ್ದ ಕಾರಣ ಚಿತ್ರ ಪೂರ್ಣಗೊಳಿಸಲು ಸಮಯ ಹಿಡಿಯಿತು.

ಬಾಲ ಕಲಾವಿದನಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದ ನಾನು 2015ರಲ್ಲಿ ಕಿಸ್ಮತ್ ಗೆ ನಿರ್ದೇಶಕನಾಗಬೇಕಂದುಕೊಂಡೆ. ನನಗೆ ಹಲವು ವರ್ಷಗಳಿಂದ ನಿರ್ದೇಶಕನಾಗಬೇಕೆಂದು ತುಡಿತವಿತ್ತು. 2013ರಲ್ಲಿ ಬಿಗ್ ಬಾಸ್ ಗೆದ್ದು ಬಂದ ನಂತರ ನಾನು ಸ್ಟಾರ್, ನನ್ನನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂಬೆಲ್ಲ ಯೋಚನೆಯಿತ್ತು, ನಾನು ಜನರಿಗೆ ಇನ್ನಷ್ಟು ಹತ್ತಿರವಾದೆ ಬಿಗ್ ಬಾಸ್ ಮೂಲಕ. ಆದರೆ ನಾನು ಅಂದುಕೊಂಡ ಹಾಗೆ ನನಗೆ ಅವಕಾಶಗಳು ಸಿಗಲಿಲ್ಲ.
ಆಗ ನನ್ನದೇ ಆದ ರೀತಿಯಲ್ಲಿ ಸಿನಿಮಾ ಮಾಡಲು ಮುಂದಾದೆ. ಈ ಸಂದರ್ಭದಲ್ಲಿ ಕಿಸ್ಮತ್ ಬಂತು. ಚಿತ್ರ ನಿರ್ಮಾಣ ಮಾಡಬೇಕೆಂದುಕೊಂಡೆ. ಬೇರೆ ನಿರ್ದೇಶಕರನ್ನು ಕೇಳದೆ, ನನಗೆ ಆ ಕ್ಷೇತ್ರದಲ್ಲಿ ಅನುಭವ ಇಲ್ಲದಿದ್ದರೂ ಕೂಡ ನಿರ್ದೇಶನಕ್ಕಿಳಿದೆ. ಕಿಸ್ಮತ್ ಚಿತ್ರ ನಿರ್ದೇಶನ, ನಿರ್ಮಾಣ ಮತ್ತು ಒಂದು ಹಾಡನ್ನು ಹಾಡಿರುವುದು ಮಾತ್ರವಲ್ಲದೆ ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದೇನೆ ಎಂದರು.

ಮಲಯಾಳಂ ಚಿತ್ರ ನೆರಮ್ ನಿಂದ ಪ್ರೇರಿತವಾದರೂ ಕೂಡ ಕಿಸ್ಮತ್ ನ್ನು ಅದರ ಜೊತೆ ಹೋಲಿಸಬೇಡಿ ಎನ್ನುತ್ತಾರೆ ವಿಜಯ್ ರಾಘವೇಂದ್ರ. ಕಿಸ್ಮತ್ ನ ಕಥೆ ಅವರ ಜೀವನಕ್ಕೆ ಹತ್ತಿರವಿದೆಯಂತೆ. ಜೀವನವೆಂಬುದು ಸಮಯಕ್ಕೆ ಸಂಬಂಧಪಟ್ಟದ್ದು, ನಾವು ಎಂದಿಗೂ ಜೀವನದಲ್ಲಿ ಹಿಂದೆ ಹೋಗಲು ಸಾಧ್ಯವಿಲ್ಲ. ಎಲ್ಲಾ ವಯೋಮಾನದವರಿಗೆ ಸಂಬಂಧಪಟ್ಟ ಸಿನಿಮಾವಿದು ಎಂದರು.

ಮೂರು ದಶಕಗಳ ಕಾಲ ಸ್ಯಾಂಡಲ್ ವುಡ್ ನಲ್ಲಿ ಕೆಲಸ ಮಾಡಿರುವ ವಿಜಯ ರಾಘವೇಂದ್ರ ಚಿತ್ರೋದ್ಯಮದ ಈಗಿನ ಪರಿಸ್ಥಿತಿ, ಬೇಡಿಕೆಗಳಿಗೆ ತಕ್ಕಂತೆ ಕೆಲಸ ಮಾಡಲು ಇಚ್ಛಿಸುತ್ತಾರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com