ಅರ್ಜುನ್ ಸರ್ಜಾ ವಿರುದ್ಧ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲು

ನಟಿ ಶ್ರುತಿ ಹರಿಹರನ್ ಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಪಟ್ಟಂತೆ...
ಶ್ರುತಿ ಹರಿಹರನ್, ಅರ್ಜುನ್ ಸರ್ಜಾ
ಶ್ರುತಿ ಹರಿಹರನ್, ಅರ್ಜುನ್ ಸರ್ಜಾ

ಬೆಂಗಳೂರು: ನಟಿ ಶ್ರುತಿ ಹರಿಹರನ್ ಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಖ್ಯಾತ ನಟ ಅರ್ಜುನ್ ಸರ್ಜಾ ಮೇಲೆ ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ಕೇಸು ದಾಖಲಿಸಿದೆ.

ಮಾಧ್ಯಮಗಳ ವರದಿಗಳನ್ನು ಆಧಾರವಾಗಿಟ್ಟುಕೊಂಡು ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಕೇಸು ದಾಖಲಿಸಿದ್ದು, ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಅವರಿಗೆ ಸೂಚಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರ ನೀಡಲು ಖುದ್ದು ಆಯೋಗದ ಮುಂದೆ ಹಾಜರಾಗಲು ನಾವು ಶ್ರುತಿ ಹರಿಹರನ್ ಗೆ ಹೇಳಿದ್ದೇವೆ. ಬಳಿಕ ನಾವು ನಟ ಅರ್ಜುನ್ ಸರ್ಜಾ ಅವರನ್ನು ಮುಂದಿನ ತನಿಖೆಗೆ ಕರೆಯುವುದಾಗಿ ನಾಗಲಕ್ಷ್ಮಿ ಬಾಯಿ ತಿಳಿಸಿದ್ದಾರೆ.
ಬೆಂಗಳೂರಿನ ಮೆಯೊ ಹಾಲ್ ಕೋರ್ಟ್ ನಲ್ಲಿ ನಟ ಧ್ರುವ ಸರ್ಜಾ ಶ್ರುತಿ ಹರಿಹರನ್ ವಿರುದ್ಧ ಸಲ್ಲಿಸಿರುವ ದೂರಿಗೆ ಸಂಬಂಧಪಟ್ಟಂತೆ ಶ್ರುತಿ ಪರ ವಕೀಲ ಜಯಣ್ಣ ಕೊಠಾರಿ ಆಕ್ಷೇಪಾರ್ಹ ಅರ್ಜಿ ಸಲ್ಲಿಸಿದ್ದಾರೆ.

ನಟ ಅರ್ಜುನ್ ಅವರು ಸಮಾಜದಲ್ಲಿ ತಮ್ಮ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಂಡು ನನ್ನ ಕಕ್ಷಿದಾರಳಾದ ಶ್ರುತಿ ಹರಿಹರನ್ ವಿರುದ್ಧ ಅನುಚಿತವಾಗಿ ವರ್ತಿಸಿದ್ದಾರೆ. ಅದನ್ನು ಶ್ರುತಿ ಅವರು ಮಿಟೂ ಸಾಮಾಜಿಕ ಚಳವಳಿಯಡಿ ಹೇಳಿಕೊಂಡಿದ್ದರು. ಅದಕ್ಕಾಗಿ ಪ್ರತಿನಿತ್ಯ ಅವರಿಗೆ 500ಕ್ಕೂ ಹೆಚ್ಚು ಅನಾಮಧೇಯ ಬೆದರಿಕೆ ಕರೆಗಳು ಬರುತ್ತಿವೆ. ಇದರಿಂದ ಬೇಸತ್ತು ಶ್ರುತಿ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ಕೂಡ ಬದಲಾಯಿಸಿಕೊಂಡಿದ್ದಾರೆ ಎಂದು ವಕೀಲರು ಆಕ್ಷೇಪಣೆಯಲ್ಲಿ ಹೇಳಿಕೊಂಡಿದ್ದಾರೆ.

ಶ್ರುತಿ ಮಾತ್ರವಲ್ಲದೆ ಅವರ ಕುಟುಂಬದವರಿಗೂ ಬೆದರಿಕೆಯಿದೆ. ಅದಕ್ಕಾಗಿ ಅವರು ತಮ್ಮ ತಾಯಿ ಮತ್ತು ಅಜ್ಜಿಯನ್ನು ಬೇರೆಡೆ ಕಳುಹಿಸಿದ್ದಾರೆ. ಇದಕ್ಕಾಗಿ ಶ್ರುತಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿದೆ. ಈ ಮಧ್ಯೆ, ಸರ್ಜಾ ಅವರ ಬೆಂಬಲಿಗರು ಆಕ್ಷೇಪಾರ್ಹ ಹೇಳಿಕೆಗಳು, ನಿಂದನೆ ಮಾಡುವ ರೀತಿಯ ಪೋಸ್ಟ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುತ್ತಿರುವುದು ನಟಿಗೆ ಮಾನಸಿಕವಾಗಿ ತೀವ್ರ ಕಿರಿಕಿರಿಯನ್ನುಂಟುಮಾಡುತ್ತಿದೆ ಎಂದಿದ್ದಾರೆ.

ಶ್ರುತಿಯವರ ವಿರುದ್ಧ ದಾಖಲಿಸಿರುವ ದೂರು ಆಧಾರರಹಿತ, ಹೀಗಾಗಿ ನ್ಯಾಯಾಲಯ ಅದನ್ನು ವಜಾಗೊಳಿಸಬೇಕು ಎಂದು ವಕೀಲ ಜಯಣ್ಣ ಕೊಠಾರಿ ಅರ್ಜಿಯಲ್ಲಿ ಒತ್ತಾಯಿಸಿದ್ದರು. ಅದು ಇಂದು ವಿಚಾರಣೆಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com