ಲಾಕ್ ಡೌನ್: 22 ದಿನದಿಂದ ಹಂಪಿ ಹೋಟೆಲ್ ನಲ್ಲಿ ಸಿಲುಕಿರುವ ಹಿರಿಯ ನಟಿ!
ಅಭಿನಯ ಶಾರದೆ ಎಂದು ಖ್ಯಾತವಾಗಿರುವ ಹಿರಿಯ ನಟಿ ಜಯಂತಿ ಈಗ ಎಲ್ಲಿದ್ದಾರೆ? ದೇಶಾದ್ಯಂತ ಲಾಕ್ ಡೌನ್ ಆದಾಗಿನಿಂದ ನಟಿ ತಮ್ಮ ಮನೆಯಲ್ಲಿ ಸಹ ಕಾಣಿಸಿಲ್ಲ. ಅವರ ಅಭಿಮಾನಿಗಳ ಈ ಎಲ್ಲಾ ಪ್ರಶ್ನೆಗೆ, ಆತಂಕಕ್ಕೆ ಇದೀಗ ಉತ್ತರ ಸಿಕ್ಕಿದೆ. ನಟಿ ಜಯಂತಿ ಹಂಪಿಯ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದಾರೆ.
ಮಾರ್ಚ್ 24ರಂದು ಭಾರತ ಲಾಕ್ ಡೌನ್ ಆದಾಗಿನಿಂದ ನಟಿ ಜಯಂತಿ ಹಾಗೂ ಅವರ ಪುತ್ರ ಕೃಷ್ಣಕುಮಾರ್ ಹಂಪಿಯ ಹೋಟೆಲ್ ನಲ್ಲಿ ಸಿಲುಕಿಕೊಂಡಿದ್ದಾರೆ.
ವಿಷಯವೇನೆಂದರೆ ಜಗದ್ವಿಖ್ಯಾತ ಹಂಪಿಯ ವೀಕ್ಷಣೆಗೆಂದು ಜಯಂತಿ ಕುಟುಂಬ ಆಗಮಿಸಿದ್ದರು. ಆಗಿನ್ನೂ ರಾಜ್ಯದಲ್ಲಿ ಕೊರೋನಾ ಹಾವಳಿ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಅವರು ಪ್ರವಾಸದಲ್ಲಿರುವಾಗಲೇಕೊರೋನಾ ಭೀತಿಯಿಂದ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು, ಇದರಿಂದಾಗಿ ಜಯಂತಿ ಕುಟುಂಬವು ಹೋಟೆಲ್ ನಲ್ಲೇ ಉಳಿದುಕೊಳ್ಳುವ ಅನಿವಾರ್ಯತೆ ಉಂಟಾಗಿದೆ.
ಇನ್ನು ಇಂದು (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಮತ್ತೆ ದೇಶಾದ್ಯಂತ ಮೇ 3ರವರೆಗೆ ಲಾಕ್ ಡೌನ್ ವಿಸ್ತರಿಸಿ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನೂ19 ದಿನಗಳ ಕಾಲ ನಟಿ ಇದೇ ಹೋಟೆಲ್ ನಲ್ಲಿ ನೆಲೆಸುವುದು ಅನಿವಾರ್ಯವಾಗಿದೆ.
ಈ ನಡುವೆ ನಟಿಯ ಆರೋಗ್ಯ ಸ್ಥಿತಿಯ ಬಗ್ಗೆ ಅವರ ಪುತ್ರ ಕೃಷ್ಣಕುಮಾರ್ ಹೇಳಿಕೆ ನೀಡಿದ್ದು "ನಾವು ಕ್ಷೇಮವಾಗಿದ್ದೇವೆ. ಅಧಿಕಾರಿಗಳು ಮತ್ತು ವೈದ್ಯರು ಬಂದು ವಿಚಾರಿಸಿ ಹೋಗಿದ್ದಾರೆ, ದೇಶಾದ್ಯಂತ ನಡೆಯಬೇಕಾಗಿರುವ ತುರ್ತು ಸೇವೆಗಳು ನಡೆಯಲಿ, ನಮಗೆ ಅತ್ಯಂತ ಅನಿವಾರ್ಯವಾದಲ್ಲಿ ನಾವೇ ಸಹಾಯ ಯಾಚಿಸುತ್ತೇವೆ" ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ