'ಸಾಹಸಸಿಂಹ'ನಿಗೆ ಅಪಮಾನ: ತೆಲುಗು ನಟ ವಿಜಯ್ ರಂಗರಾಜುಗೆ ಅನಿರುದ್ಧ ತರಾಟೆ

ಸಾಹಸಸಿಂಹ ವಿಷ್ಣುವರ್ಧನ್ ಕುರಿತಂತೆ ತೆಲುಗು ನಟ ವಿಜಯ್ ರಂಗರಾಜು ವಿವಾದಾತ್ಮಕ ಹೇಳಿಕೆ ದಾದಾ ಅಭಿಮಾನಿಗಳನ್ನು ಕೆರಳಿಸಿದೆ. ರಂಗಬಾಬು ವಿರುದ್ಧ ಕ್ರಮಕೈಗೊಳ್ಳುವಂತೆ ಕನ್ನಡ ಅಭಿಮಾನಿಗಳು ಪಟ್ಟುಹಿಡಿದ್ದಾರೆ. 
ವಿಷ್ಣುವರ್ಧನ್ - ಅನಿರುದ್ಧ
ವಿಷ್ಣುವರ್ಧನ್ - ಅನಿರುದ್ಧ

ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಕುರಿತಂತೆ ತೆಲುಗು ನಟ ವಿಜಯ್ ರಂಗರಾಜು ವಿವಾದಾತ್ಮಕ ಹೇಳಿಕೆ ದಾದಾ ಅಭಿಮಾನಿಗಳನ್ನು ಕೆರಳಿಸಿದೆ. ರಂಗಬಾಬು ವಿರುದ್ಧ ಕ್ರಮಕೈಗೊಳ್ಳುವಂತೆ ಕನ್ನಡ ಅಭಿಮಾನಿಗಳು ಪಟ್ಟುಹಿಡಿದ್ದಾರೆ. 

ತೆಲುಗಿನ ಕೆಲವು ಸಿನಿಮಾ ನಟಿಸಿರುವ ರಂಗರಾಜು ಕನ್ನಡದ ಖ್ಯಾತ ನಟ ವಿಷ್ಣುವರ್ಧನ್ ಬಗ್ಗೆ ಬಾಯಿಗೆ ಬಂದಹಾಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ವಿಷ್ಣು ಅಭಿಮಾನಿಗಳು ಕರ್ನಾಟಕ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ.

ಏತನ್ಮಧ್ಯೆ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ ಸಹ ಬೇಸರ ವ್ಯಕ್ತಪಡಿಸಿ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ರಾಜ್ಯದ ಒಬ್ಬ ಮೇರು ನಟರ ಬಗ್ಗೆ ಮಾತನಾಡ್ತಿದ್ದಾರೆ. ಅವರ ಬಗ್ಗೆ ಇವತ್ತು ಕೆಟ್ಟದಾಗಿ ಮಾತನಾಡಿದ್ರೆ ಕನ್ನಡಿಗರಿಗೆ ಅವಮಾನ ಮಾಡಿದ ಹಾಗೆ. ಅಪ್ಪಾವ್ರ ಅಭಿಮಾನಿಗಳು ಸಿಂಹಗಳು. ದಯವಿಟ್ಟು ಅವರು ಕ್ಷಮೆ ಕೇಳಬೇಕು ಅಂತ ಕೇಳಿಕೊಳ್ಳುತ್ತೇನೆ. ಅಪ್ಪಾವ್ರಿಗೆ ಬೇರೆ ಬೇರೆ ರಾಜ್ಯ, ಭಾಷೆ ಅಂತ ಯಾವತ್ತು ಬೇಧ ಭಾವ ಮಾಡಲಿಲ್ಲ. ಎಲ್ಲರನ್ನೂ ನಮ್ಮವರು ಎಂದು ಭಾವಿಸಿದವರು. ಆದರೆ ಇವತ್ತು ಈ ರೀತಿ ಮಾತನಾಡಿರೋದು ಬಹಳ ಬೇಸರವಾಗಿದೆ ಎಂದು ಹೇಳಿದ್ದಾರೆ. 

ಅಪ್ಪಾವ್ರ ಬಗ್ಗೆ ವಿಜಯ್ ರಂಗರಾಜು ಅವರು ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ. ಇದು ನಿಜಕ್ಕೂ ತುಂಬಾ ಬೇಸರದ ವಿಷಯ. ಇದರಿಂದ ನಮ್ಮ ಎಲ್ಲಾ ಅಭಿಮಾನಿಗಳಿಗೆ ದುಃಖ ಆಗಿದೆ. ಎಲ್ಲರಿಗೂ ಗೊತ್ತಿರುವಂತೆ ಅಪ್ಪಾವ್ರು ಎಲ್ಲಾ ಕಲಾವಿದರಿಗೆ ತಂತ್ರಜ್ಞರಿಗೆ ಪ್ರತಿಯೊಬ್ಬರಿಗೂ ಗೌರವ ಕೊಟ್ಟು ನಡೆದು ಕೊಳ್ತಾ ಇದ್ರು. ಅಷ್ಟೆ ಅಲ್ಲ ಕಷ್ಟದಲ್ಲಿದ್ದ ಎಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಸಹಾಯ ಮಾಡುವ ಸಮಯದಲ್ಲೂ ನಾನು ಸಹಾಯ ಮಾಡ್ದೆ ಅಂತ ಎಲ್ಲಿಯೂ ಹೇಳ್ಬೇಡಿ ಅಂತ ಹೇಳ್ತಾ ಇದ್ರು. ಅಂತವರ ಬಗ್ಗೆ ಇವತ್ತು ಈ ವ್ಯಕ್ತಿ ಹೀಗೆ ಮಾತನಾಡಿದ್ದು, ನಿಜಕ್ಕೂ ಬೇಸರದ ವಿಷಯ ಎಂದಿದ್ದಾರೆ.

ಸಿಂಹದ ಕಾಲರ್ ಹಿಡಿಯೋಕೆ ಸಾಧ್ಯಾನಾ?
ಅಪ್ಪಾವ್ರ ಕಾಲರ್ ಹಿಡಿದರು ಅಂತಾರೆ. ಸಹಾಸಸಿಂಹ ಡಾ. ವಿಷ್ಣುವರ್ಧನ್ ಅವರ ಕಾಲರ್ ಹಿಡಿಯೋದಾ? ಸಿಂಹದ ಕಾಲರ್ ಹಿಡಿಯೋಕೆ ಯಾರಿಂದ ಸಾಧ್ಯ? ಅವ್ರಿಗೆ ಅಷ್ಟು ಧೈರ್ಯ ಇದ್ದಿದ್ರೆ ಅವರು ಈ ವಿಷಯನಾ ಆಗಲೇ ಹೇಳಿಕೊಳ್ಳಬಹುದಿತ್ತು. ಅಪ್ಪಾವ್ರು ನಮ್ಮನ್ನು ಶಾರೀರಿಕವಾಗಿ ಬಿಟ್ಟು 11 ವರ್ಷ ಆದಮೇಲೆ. ಅಲ್ಲೆಲ್ಲೋ ಕೂತ್ಕೊಂಡು ಈ ರೀತಿ ಮಾತನಾಡ್ತಿದ್ದಾರೆ ಅಂದರೆ ಆ ವ್ಯಕ್ತಿಗೆ ಎಷ್ಟು ಧೈರ್ಯ ಇದೆ. ಸತ್ಯಕ್ಕೆ ನಿಜಾಂಶಕ್ಕೆ ಧೈರ್ಯ ಇರತ್ತೆ, ಶಕ್ತಿ ಇರತ್ತೆ. ಅವಾಗ ಹೇಳದೆ ಇದ್ರೆ ಅದು ಸತ್ಯ ಅಲ್ಲ. ಸುಮ್ನೆ ಮೀಸೆ ಬಿಟ್ಕೊಂಡ್ರೆ ಧೈರ್ಯಶಾಲಿ, ಶಕ್ತಿಶಾಲಿ ಅಲ್ಲ ಎಂದಿದ್ದಾರೆ.

ಯಾರ್ ಬಗ್ಗೆ ಮಾತನಾಡ್ತಿದ್ದಾರೆ ಅವ್ರು....
ಕುಟುಂಬದ ಸದಸ್ಯನಾಗಿ ನಾನು ಆ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ತೆಲುಗು ಚಿತ್ರರಂಗದವನ್ನು ಕೇಳಿಕೊಳ್ಳುತ್ತೇನೆ. ಆ ವ್ಯಕ್ತಿಗೂ ಕೇಳ್ಕೋತೀನಿ, “ನೀವಿಲ್ಲಿ ದಯವಿಟ್ಟು ಬರ್ಬೇಡಿ. ನೀವಿಲ್ಲಿ ಬಂದರೆ ಅಪ್ಪಾವ್ರ ಅಭಿಮಾನಿಗಳು ನಿಮ್ಮನ್ನು ಏನ್ ಮಾಡ್ತಾರೋ ನನಗೆ ಗೊತ್ತಿಲ್ಲ. ಯಾವತ್ತೂ ಇಲ್ಲದಿರುವ ವ್ಯಕ್ತಿಯ ಬಗ್ಗೆ ಮಾತನಾಡುವ ಮುನ್ನ ಸಾವಿರ ಬಾರಿ ಯೋಚನೆ ಮಾಡ್ಬೇಕು. ಏನ್ ಮಾತ್ಡಾತಿದ್ದೀವಿ ಅನ್ನೋ ಪರಿಜ್ಞಾನ ಇರಬೇಕು. ತೆಲುಗು ಚಿತ್ರರಂಗವನ್ನು ಕೇಳ್ಕೋತೀನಿ ಆ ವ್ಯಕ್ತಿ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮತ್ತೆ ಎಲ್ಲಾ ಅಭಿಮಾನಿಗಳಿಗೂ ಹೇಳ್ತೀನಿ. ಯಾರೋ ಏನೋ ಮಾತನಾಡಿದ್ರೂ ಅಂತ ಬೇಜರಾಗುವ ಅವಶ್ಯಕತೆ ಇಲ್ಲ. ಆ ವ್ಯಕ್ತಿಯ ಯಾರು ಅಂತಾನೆ ಗೊತ್ತಿಲ್ಲ. ಅಪ್ಪಾವ್ರ ಬಗ್ಗೆ ಮಾತನಾಡಿದ ಮೇಲೆ ಆ ವ್ಯಕ್ತಿ ಯಾರು ಅಂತ ತಿಳಿತು. ಸಾಮಾಜಿಕ ಜಾಲತಾಣದಲ್ಲಿ ಆ ವ್ಯಕ್ತಿಗೆ ಅಪ್ಪಾವ್ರ ಅಭಿಮಾನಿಗಳು ಸಾಮಾಜಿಕ ಜಾಲತಾಣದಗಳಲ್ಲಿ ಚಪ್ಪಲಿಯ ಹಾರ ಹಾಕ್ತಾ ಇದ್ದಾರೆ. ಅಪ್ಪಾವ್ರ ಏನು ಅಂತ ಎಲ್ಲರಿಗೂ ಗೊತ್ತು. ಅವರ ಸ್ಥಾನ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತೆ. ಎಲ್ಲಾ ಅಭಿಮಾನಿಗಳಿಗೆ ಕೋಟಿ ಕೋಟಿ ಧನ್ಯವಾದಗಳು ಎಂದು ಅನಿರುದ್ಧ್ ಹೇಳಿದ್ದಾರೆ.

ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವ ವಿಷ್ಣುವರ್ಧನ್ ಬಗ್ಗೆ ನಾಲಿಗೆ ಹರಿಬಿಟ್ಟಿರುವ ರಂಗರಾಜು ವಿರುದ್ಧ ನವರಸನಾಯಕ ಜಗ್ಗೇಶ್, ನಟ ಪ್ರಥಮ್ ಸೇರಿದಂತೆ ಅನೇಕರು ಕಿಡಿಕಾರಿದ್ದಾರೆ.

ವಿಷ್ಣುವರ್ಧನ್ ಅವರಿಗೆ ಲೇಡಿಸ್ ವೀಕ್ ನೆಸ್ ಇತ್ತು. ಒಂದು ಬಾರಿ ನಾನು ಅವರ ಕಾಲರ್ ಹಿಡಿದುಕೊಂಡೆ ಎಂದು ರಂಗರಾಜು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದು ವಿಷ್ಣು ಅಭಿಮಾನಿಗಳು ಕೆರಳುವಂತೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com