ಬೆಂಗಳೂರು: ಲಾಕ್ ಡೌನ್ ಮುಗಿದ ನಂತರ ಸಿನೆಮಾ ಥಿಯೇಟರ್ ಮತ್ತೆ ಆರಂಭವಾಗುವುದಕ್ಕೆ ಚಿತ್ರೋದ್ಯಮಕ್ಕೆ ಸಂಬಂಧಪಟ್ಟವರೆಲ್ಲರೂ ಎದುರು ನೋಡುತ್ತಿದ್ದಾರೆ. ನಟ ರಮೇಶ್ ಅರವಿಂದ್ ಕೂಡ ಇದೇ ಮಾತನ್ನು ಹೇಳುತ್ತಾರೆ.
ಥಿಯೇಟರ್ ಆರಂಭಗೊಂಡ ನಂತರ ತಮ್ಮ ಕ್ರೈಂ ಆಧಾರಿತ ಚಿತ್ರ 100 ನ್ನು ತೆರೆಗೆ ತರಲು ನೋಡುತ್ತಿದ್ದಾರೆ ರಮೇಶ್ ಅರವಿಂದ್. ಅದಾದ ಬಳಿಕ ಮುಂಬರುವ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರಲ್ಲಿ ಮಗ್ನರಾಗಿದ್ದಾರೆ.
ನನ್ನ ಹಿಂದಿನ ಚಿತ್ರ ಆಕಾಶ್ ಶ್ರೀವಾಸ್ತವ್ ನಿರ್ದೇಶನದ ಶಿವಾಜಿ ಸುರತ್ಕಲ್ ಇನ್ನು ಮುಂದೆ ಹೊಸ ಹೊಸ ಪಾತ್ರಗಳನ್ನು, ಚಿತ್ರಗಳನ್ನು ಮಾಡುವುದಕ್ಕೆ ನನಗೆ ಪ್ರೇರಣೆ ನೀಡಿದೆ. ಮುಂದಿನ ಚಿತ್ರದಲ್ಲಿ ನಾನು ಕ್ರೀಡೆಗೆ ಸಂಬಂಧಿಸಿದ ಪಾತ್ರ ಮಾಡುತ್ತಿದ್ದೇನೆ, ಅದಕ್ಕೆ ಈಗಾಗಲೇ ಚಿತ್ರಕಥೆ ಸುಮಾರಾಗಿ ಸಿದ್ದವಾಗಿದೆ. ಕ್ಲ್ಲೈಮ್ಯಾಕ್ಸ್ ಬರವಣಿಗೆ ಮುಗಿದ ನಂತರ ಪೂರ್ವ ಪ್ರೊಡಕ್ಷನ್ ಹಂತದ ಕೆಲಸ ಆರಂಭಿಸುತ್ತೇನೆ ಎಂದು ಹೇಳಿದರು.
ಕೊರೋನಾ ಲಾಕ್ ಡೌನ್, ಡಿಜಿಟಲ್ ಯುಗದಲ್ಲಿ ಹೊಸ ಚಿತ್ರಗಳು ಅಮೆಜಾನ್, ನೆಟ್ ಫ್ಲಿಕ್ಸ್ ನಲ್ಲಿ ಸಿಗುತ್ತಿರುವಾಗ ಪ್ರೇಕ್ಷಕರು ಅದರಲ್ಲಿ ಹೆಚ್ಚಾಗಿ ನೋಡುತ್ತಾರೆ, ಚಿತ್ರ ನಿರ್ಮಾಪಕರು ಅದಕ್ಕೆ ತಕ್ಕಂತೆ ತಯಾರಾಗಬೇಕು. ಸಿನೆಮಾದಲ್ಲಿ ಚಿತ್ರಕಥೆ ತಯಾರು ಮಾಡುವುದು ದೊಡ್ಡ ಕೆಲಸ. ಮುಂದಿನ ಚಿತ್ರಕ್ಕೆ ಅದಕ್ಕೆ ಬೇಕಾದ ಸಿದ್ದತೆ ಬಹುತೇಕ ಮುಗಿದಿದೆ. ಇನ್ನೆರಡು ತಿಂಗಳಲ್ಲಿ ಶೂಟಿಂಗ್ ಗೆ ಸಿದ್ದವಾಗಬಹುದು ಎಂದು ನಂಬಿಕೊಂಡಿದ್ದೇನೆ ಎಂದು ರಮೇಶ್ ಅರವಿಂದ್ ಹೇಳಿದರು.
ಬಹುಭಾಷೆಯಲ್ಲಿ ತಯಾರಾಗುತ್ತದೆಯೇ ಎಂದು ಕೇಳಿದ್ದಕ್ಕೆ, ಆ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಕ್ರೀಡೆ ಆಧಾರಿತ ಚಿತ್ರವಾಗಿರುವುದರಿಂದ ದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿದೆ. ಕೊರೋನಾ ವೈರಸ್ ಬರುವುದಕ್ಕೆ ಮೊದಲು ಚಿತ್ರ ಬಿಡುಗಡೆಯಾಗಿ 100 ಕೋಟಿ ಗಳಿಸಿದ್ದನ್ನು ನಾವು ನೋಡಿದ್ದೇವೆ. ಇನ್ನು ಥಿಯೇಟರ್ ತೆರೆದ ಮೇಲೆ ಏನು ಪರಿಸ್ಥಿತಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾತರದಿಂದ ಕಾಯುತ್ತಿದ್ದೇನೆ ಎಂದರು.
Advertisement
Advertisement