ಮೈಸೂರಿನಲ್ಲಿ 25 ದಿನದ ಶೂಟಿಂಗ್ ಗೆ ತಯಾರಾದ 'ಮದಗಜ', ಸೆ.19ರಿಂದ ಚಿತ್ರೀಕರಣ ಶುರು
ಶ್ರೀಮುರಳಿ ತಮ್ಮ ಮುಂಬರುವ ಚಿತ್ರ "ಮದಗಜ" ಶೂಟಿಂಗ್ ಪುನರಾರಂಭಿಸಲು ತಯಾರಾಗಿದ್ದಾರೆ. ಅವರ ಈ ಚಿತ್ರದ ಶೂಟೀಂಗ್ ಇದೇ ಸೆಪ್ಟೆಂಬರ್ 19 ರಂದು ಪುನಾರಂಬವಾಗಲಿದೆ. ನಾಯಕ ಶ್ರೀಮುರಳಿ , ನಿರ್ಮಾಪಕ ಉಮಾಪತಿ ಮತ್ತು ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ತಂಡವು ಒಂದೆರಡು ದಿನಗಳ ಹಿಂದೆ ಭೇಟಿಯಾಗಿ ಶೂಟಿಂಗ್ ಬಗ್ಗೆ ಚರ್ಚಿಸಿದೆ. ಹಾಗೂ ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿಶೂಟಿಂಗ್ ಗೆ ಜಾಗವನ್ನು ಅಂತಿಮಗೊಳಿಸಿದ್ದಾರೆ. ಅಲ್ಲಿ ತಂಡವು ಸುಮಾರು 25 ದಿನಗಳ ಶೆಡ್ಯೂಲ್ ಹೊಂದಿರಲಿದೆ.
ಲಾಕ್ಡೌನ್ಗೆ ಸ್ವಲ್ಪ ಮುಂಚೆ ವಾರಣಾಸಿಯಲ್ಲಿ ಪ್ರಮುಖ ಶೆಡ್ಯೂಲ್ ಪೂರ್ಣಗೊಳಿಸಿದ್ದ ತಂಡವು ಶೇಕಡಾ 25 ರಷ್ಟು ಚಿತ್ರೀಕರಣವನ್ನಷ್ಟೇ ಬಾಕಿ ಉಳಿಸಿಕೊಂಡಿದೆ. ಇದೀಗ ಈಗ 18 ದಿನಗಳ ಕಾಲ ಟಾಕಿ ಭಾಗಗಳ ಚಿತ್ರೀಕರಣದೊಡನೆ ಇದು ಪ್ರಾರಂಬವಾಗುತ್ತಿದ್ದು ಸ್ಟಂಟ್ ಮಾಸ್ಟರ್ಸ್ ರಾಮ್-ಲಕ್ಷ್ಮಣ್ ಅವರ ನಿರ್ದೇಶನದಲ್ಲಿ ಫೈಟಿಂಗ್ ನ ಪ್ರಮುಖ ಬಾಗಗಳ ಚಿತ್ರೀಕರಣ ನಡೆಯಲಿದೆ. ಇದನ್ನು ಏಳು ದಿನಗಳವರೆಗೆ ಚಿತ್ರೀಕರಣ ಮಾಡಲು ಯೋಜಿಸಲಾಗಿದೆ.
ನಾಯಕ ಶ್ರೀಮುರಳಿ ತಂಡದೊಡನೆ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದು ನಾಯಕಿಯಾಗಿ ಆಶಿಕಾ ರಂಗನಾಥ್, ಇದ್ದಾರೆ. ರಂಗಾಯಣ ರಘು, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ ಹಾಗೂ ಇತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕ ಮಹೇಶ್ ಕುಮಾರ್ ಪಾಲಿಗೆ ಇದು ಎರಡನೇ ಚಿತ್ರವಾಗಿದೆ.
ರವಿ ಬಸ್ರೂರ್ ಸಂಯೋಜಿಸಿರುವ ಚಿತ್ರದ ಸಂಗೀತವು ನಾಲ್ಕು ಹಾಡುಗಳನ್ನು ಒಳಗೊಂಡಿದೆ. ಎರಡು ಹಾಡುಗಳಿಗೆ ಸಾಹಿತ್ಯವನ್ನು ಚೇತನ್ ಕುಮಾರ್ ಬರೆದಿದ್ದರೆ, ರವಿ ಬಸ್ರೂರ್ ಮತ್ತು ಕಿನ್ನಲ್ ರಾಜ್ ತಲಾ ಒಂದು ಹಾಡನ್ನು ಬರೆಯಲಿದ್ದಾರೆ. ಮುಫ್ತಿ ಛಾಯಾಗ್ರಾಹಕರಾದ ನವೀನ್ ಕುಮಾರ್ ಈ ಚಿತ್ರಕ್ಕೂ ಕ್ಯಾಮರಾ ಕೆಲಸ ಮಾಡಲಿದ್ದಾರೆ. ಹರೀಶ್ ಕೊಂಬೆ ಸಂಭಾಷಣೆ ಬರೆದಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ