ಶಿವರಾಜ್ ಕುಮಾರ್ 124ನೇ ಚಿತ್ರವನ್ನು ರಾಮ್ ಧುಳಿಪುಡಿ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಶೀರ್ಷಿಕೆ ‘ನೀ ಸಿಗುವರೆಗೂ’ ಎಂದಾಗಿದೆ. ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಕಿರಿಯ ವಯಸ್ಸಿನ ಯಂಗ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ‘ನೀ ಸಿಗುವರೆಗೂ’ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು. ಶೀರ್ಷಿಕೆ ಫಲಕ, ಕ್ಲ್ಯಾಪ್ ಬೋರ್ಡ್, ಕ್ಯಾಮೆರಾಗೆ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಮೊದಲ ದೃಶ್ಯಕ್ಕೆ ಕಿಚ್ಚ ಸುದೀಪ್ ಕ್ಲ್ಯಾಪ್ ಮಾಡಿದರು.
ಬಾಲ ಶ್ರೀರಾಮ ಸ್ಟುಡಿಯೋಸ್ ಬ್ಯಾನರ್ನಲ್ಲಿ ಈ ಚಿತ್ರ ನಿರ್ಮಾಣ ಆಗಲಿದೆ. ಈ ಸಿನಿಮಾದಲ್ಲಿ ಶಿವಣ್ಣ ಎರಡು ಡಿಫರೆಂಟ್ ಲುಕ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್ಮಿ ಅಧಿಕಾರಿ ಪಾತ್ರದಲ್ಲಿಯೂ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ, ಆ ಕಾರಣದಿಂದಲೂ ‘ನೀ ಸಿಗುವರೆಗೂ’ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ.
ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಮೆರ್ಹೀನ್ ಪೀರ್ಜಾದಾ ಅವರು ‘ನೀ ಸಿಗುವರೆಗೂ’ ಚಿತ್ರಕ್ಕೆ ನಾಯಕಿ. ಇದೇ ಮೊದಲ ಬಾರಿಗೆ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ತಾರಾಗಣದ ಕಾರಣದಿಂದಲೂ ಈ ಚಿತ್ರ ಹೈಪ್ ಪಡೆದುಕೊಂಡಿದೆ. ನಾಸರ್, ಸಂಪತ್, ಸಾಧುಕೋಕಿಲ ಮುಂತಾದವರು ನಟಿಸಲಿದ್ದಾರೆ.
ಟಗರು ಚಿತ್ರದಲ್ಲಿ ಶಿವಣ್ಣ ಜೊತೆ ಕೆಲಸ ಮಾಡಿದ ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತು ಮಹೇಂದ್ರ ಸಿಂಹ ಛಾಯಾಗ್ರಾಹಣವಿದೆ. ಈ ಚಿತ್ರವನ್ನು ನಾರಾಲ ಶ್ರೀನಿವಾಸ್ ರೆಡ್ಡಿ, ಸ್ವಾತಿ ವನಪಲ್ಲಿ ಮತ್ತು ಶ್ರೀಕಾಂತ್ ಧೂಳಿಪುಡಿ ಜಂಟಿಯಾಗಿ ನಿರ್ಮಿಸಿದ್ದಾರೆ ಮತ್ತು ಕುಡುಪುಡಿ ವಿಜಯಕುಮಾರ್ ಯೋಜನೆಯನ್ನು ಮುನ್ನಡೆಸಲಿದ್ದಾರೆ.
ಹಲವು ಸಿನಿಮಾಗಳಲ್ಲಿ ಶಿವರಾಜ್ಕುಮಾರ್ ಬ್ಯುಸಿ ಆಗಿದ್ದಾರೆ. ಬೈರಾಗಿ, ವೇದಾ ಮುಂತಾದ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಶಿವಣ್ಣ ಅಭಿನಯಿಸಿರುವ ‘ಭಜರಂಗಿ 2’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈಗ ಅವರ 124ನೇ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ.
Advertisement