'ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ. 'ರಿಚರ್ಡ್ ಆಂಟನಿ' ಮೂಲಕ ರಕ್ಷಿತ್ ಶೆಟ್ಟಿ ಉತ್ತರ!
ಬೆಂಗಳೂರು: ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿಯೊಂದರ ವಿರುದ್ಧ ಅಸಮಾಧಾನ, ಆಕ್ರೋಶ ಹೊರಹಾಕಿದ್ದ ನಟ ರಕ್ಷಿತ್ ಶೆಟ್ಟಿ ಜುಲೈ 11ಕ್ಕೆ ಉತ್ತರ ಕೊಡುತ್ತೇನೆ ಎಂದಿದ್ದರು. ಅದಕ್ಕೀಗ ಇಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಡಿ ರಿಚರ್ಡ್ ಆಂಟನಿ ಸಿನೆಮಾ ಮಾಡುತ್ತಿದ್ದು ಅದರಲ್ಲಿ ಬರೀ ನಟನೆ ಮಾತ್ರವಲ್ಲದೆ ಸ್ವತಃ ನಿರ್ದೇಶನ ಕೂಡ ಮಾಡುತ್ತಿದ್ದಾರೆ. 'ಉಳಿದವರು ಕಂಡಂತೆ' ಚಿತ್ರದ ಕಥೆಯನ್ನು 'ರಿಚರ್ಡ್ ಆಂಟನಿ' ಮೂಲಕ ಮುಂದುವರಿಸಲಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹೊಂಬಾಳೆ ಫಿಲ್ಮ್ಸ್ 9ನೇ ಸಿನಿಮಾ 'ದ್ವಿತ್ವ'ವನ್ನು ಘೋಷಿಸಿತ್ತು. ಪುನೀತ್ ರಾಜ್ಕುಮಾರ್ ನಾಯಕನಾಗಿ ಪವನ್ ಕುಮಾರ್ ನಿರ್ದೇಶನದ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇದೀಗ ಸಂಸ್ಥೆಯ 10ನೇ ಸಿನೆಮಾವಾಗಿ ವಿಜಯ್ ಕಿರಗಂದೂರು ಅವರು ರಕ್ಷಿತ್ ಶೆಟ್ಟಿ ಜೊತೆ ಕೈ ಜೋಡಿಸಿದ್ದಾರೆ. 'ಉಳಿದವರು ಕಂಡಂತೆ' ಚಿತ್ರದ 'ರಿಚ್ಚಿ' ಪಾತ್ರದ ಮುಂದುವರಿದ ಭಾಗವೇ 'ರಿಚರ್ಡ್ ಆಂಟನಿ' ಎನ್ನಲಾಗಿದೆ.
ಇಂದು ಸೋಷಿಯಲ್ ಮೀಡಿಯಾ ಮೂಲಕ ಖುಷಿಯ ವಿಚಾರವನ್ನು ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿಯವರು, 'ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ... 'ರಿಚರ್ಡ್ ಆಂಟನಿ'- ಮುಂದಿನ ಅಲೆ.. ನಿಮ್ಮ ಹೃದಯದ ದಡದಲ್ಲಿ ಜಾಗವಿರಿಸಿ.. ಸದಾ ನಿಮ್ಮ ಪ್ರೀತಿಯ ಆಶೀರ್ವಾದವಿರಲಿ' ಎಂದು ಹೇಳಿಕೊಂಡಿದ್ದಾರೆ.
ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ...
"ರಿಚರ್ಡ್ ಆಂಟನಿ" - ಮುಂದಿನ ಅಲೆ.. ನಿಮ್ಮ ಹೃದಯದ ದಡದಲ್ಲಿ ಜಾಗವಿರಿಸಿ.. ಸದಾ ನಿಮ್ಮ ಪ್ರೀತಿಯ ಆಶೀರ್ವಾದವಿರಲಿ
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ