ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಅವರ ಅಳಿಯ ತೆಲುಗು ನಟ ಸಾಯಿ ಧರಂ ತೇಜ್ ಅವರು ಚಲಾಯಿಸುತ್ತಿದ್ದ ಸ್ಪೋರ್ಟ್ಸ್ ಬೈಕ್ ಕಳೆದ ರಾತ್ರಿ ಹೈದರಾಬಾದ್ ನ ದುರ್ಗಮ್ ಚೆರುವು ಕೇಬಲ್ ಸೇತುವೆ ಬಳಿ ಅಪಘಾತಕ್ಕೀಡಾಗಿ ನಟ ಈಗ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿರಂಜೀವಿ ಕುಟುಂಬಕ್ಕೆ ನಿನ್ನೆ ಗಣೇಶ ಹಬ್ಬದ ದಿನವೇ ಆಘಾತವನ್ನುಂಟುಮಾಡಿದೆ. ಚಿರಂಜೀವಿ, ನಟ ಪವನ್ ಕಲ್ಯಾಣ, ನಿರ್ಮಾಪಕ ಅಲ್ಲು ಅರವಿಂದ್ ಸೇರಿದಂತೆ ಇಡೀ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿ ನಟನ ಆರೋಗ್ಯ ವಿಚಾರಿಸುತ್ತಿದ್ದಾರೆ. ಅಭಿಮಾನಿಗಳಲ್ಲಿ ಕೂಡ ಆತಂಕ ಮನೆ ಮಾಡಿದೆ.
ಇದಕ್ಕೆ ಇಂದು ಬೆಳಗ್ಗೆ ಟ್ವೀಟ್ ಮೂಲಕ ಮೆಗಾಸ್ಟಾರ್ ಚಿರಂಜೀವಿ ಸ್ಪಷ್ಟನೆ ನೀಡಿದ್ದಾರೆ. ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನ್ನು ಲಗತ್ತಿಸಿದ್ದಾರೆ. ರಸ್ತೆ ಅಪಘಾತದ ನಂತರ ಧರಮ್ ತೇಜ್ ನನ್ನು ಆಪೊಲೋ ಆಸ್ಪತ್ರೆಗೆ ಕರೆತರಲಾಯಿತು. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಮೆದುಳು, ಬೆನ್ನುಮೂಳೆ ಸೇರಿದಂತೆ ದೇಹದ ಪ್ರಮುಖ ಅಂಗಾಂಗಳಿಗೆ ಯಾವುದೇ ದೊಡ್ಡ ಪೆಟ್ಟಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸಣ್ಣಪುಟ್ಟ ಗಾಯಗಳು ಮತ್ತು ಕತ್ತುಪಟ್ಟಿ ಮೂಳೆ ಮುರಿತವಾಗಿದೆ.ಮುಂದಿನ 24 ಗಂಟೆ ಸತತವಾಗಿ ನಿಗಾ ಇರಿಸಲಾಗುತ್ತದೆ. ತಕ್ಷಣಕ್ಕೆ ಯಾವುದೇ ಸರ್ಜರಿಯ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಮರಳು ತುಂಬಿದ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿದ್ದಾಗ ಸ್ಕಿಡ್ ಆಗಿ ಬಿದ್ದು ಅಪಘಾತ ಸಂಭವಿಸಿದೆ.
Advertisement