

ರಕ್ಷಿತ್ ಶೆಟ್ಟಿ ಅವರು 777 ಚಾರ್ಲಿ ಸಕ್ಸಸ್ ನಂತರ ಹೊಸ ಚಿತ್ರ ನಿರ್ಮಾಣ ಮಾಡುತ್ತಿದ್ದು, ರಕ್ಷಿತ್ ಶೆಟ್ಟಿ ಅವರ ಪರಂವಃ ಪಿಕ್ಚರ್ಸ್ ವಿಭಿನ್ನ ಕಥೆಯ ‘ಮಿಥ್ಯ’ ಎಂಬ ಹೊಸ ಚಿತ್ರ ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಸುಮಂತ್ ಭಟ್ ಕಥೆ ಬರೆದು ನಿರ್ದೇಶ ಮಾಡಿದ್ದು, ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಇದು ಹನ್ನೊಂದು ವರ್ಷದ ಬಾಲಕ ಮಿಥ್ಯ ಅವರ ಕಥೆ ಎಂದು ಹೇಳಲಾಗುತ್ತಿದೆ.
“ನಮ್ಮ ಇಂಡಸ್ಟ್ರಿಗೆ ಎಲ್ಲ ರೀತಿಯ ಸಿನಿಮಾಗಳು ಬೇಕು. ಚಲನಚಿತ್ರ ನಿರ್ಮಾಣಕ್ಕೆ ಹೊಸ ದೃಷ್ಟಿಕೋನಗಳನ್ನು ತರುವ ಹೊಸ ಕಥೆಗಳು ಮತ್ತು ಹೊಸ ಕಾಲದ ಕಥೆಗಾರರನ್ನು ನಾವು ಸ್ವಾಗತಿಸಬೇಕಾಗಿದೆ' ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಸುಮಂತ್ ಭಟ್ ಅವರು ಪರಂವಃ ಪಿಕ್ಚರ್ಸ್ ನ ಬರವಣಿಗೆ ತಂಡದ ಭಾಗವಾಗಿದ್ದಾರೆ. ಪರಂವಃ ‘ಏಕಂ’ ಹೆಸರಿನ ವೆಬ್ಸೀರೀಸ್ ನಿರ್ಮಾಣ ಮಾಡಿತ್ತು. ಏಳು ಎಪಿಸೋಡ್ಗಳ ಪೈಕಿ ನಾಲ್ಕು ಎಪಿಸೋಡ್ಗಳನ್ನು ಸುಮಂತ್ ಅವರೇ ಬರೆದು ನಿರ್ದೇಶನ ಮಾಡಿದ್ದರು. ಮಿಥ್ಯಾ ಸುಮಂತ್ ಅವರ ಚೊಚ್ಚಲ ಚಲನಚಿತ್ರವಾಗಿದೆ.
ಮಿಥ್ಯ ತನ್ನ ಹೆತ್ತವರನ್ನು ಕಳೆದುಕೊಂಡಿರುವ 11 ವರ್ಷದ ಬಾಲಕನ ನೋವಿನ ಕಥೆಯಾಗಿದೆ. ಬಾಲಕನ ತಂದೆ-ತಾಯಿ ನಿಧನ ಹೊಂದುತ್ತಾರೆ. ಅವರ ನೆನಪುಗಳಿಂದ ಹೊರಬರಲಾರದ ಈ ಬಾಲಕ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ಈ ‘ಮಿಥ್ಯ’.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಮತ್ತು ‘ವಿಕ್ರಾಂತ್ ರೋಣ’ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟ ಆತಿಶ್ ಶೆಟ್ಟಿ ‘ಮಿಥ್ಯ’ ಚಿತ್ರದಲ್ಲಿ ಮಿಥುನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ.