'ವಿಲನ್ ನಂತೆ ಕಾಣುತ್ತಿರುವುದು ನೋಡಿ ಬೇಸತ್ತು ಹೋಗಿದ್ದೇನೆ': ಪವನ್ ಕಲ್ಯಾಣ್ ಅಭಿಮಾನಿಗಳ ಮೇಲೆ ಮಾಜಿ ಪತ್ನಿ ರೇಣು ದೇಸಾಯಿ ಆಕ್ರೋಶ

ನಟಿ ಹಾಗೂ ನಿರ್ದೇಶಕಿ ರೇಣು ದೇಸಾಯಿ ತೆಲುಗು ಸೂಪರ್ ಸ್ಟಾರ್ ಹಾಗೂ ರಾಜಕಾರಣಿ ಮಾಜಿ ಪತಿ ಪವನ್ ಕಲ್ಯಾಣ್ ಅವರ ಒಂದು ವರ್ಗದ ಅಭಿಮಾನಿಗಳ ಮೇಲೆ ಕೆರಳಿ ಕೆಂಡವಾಗಿದ್ದಾರೆ. 
ರೇಣು ದೇಸಾಯಿ(ಸಂಗ್ರಹ ಚಿತ್ರ)
ರೇಣು ದೇಸಾಯಿ(ಸಂಗ್ರಹ ಚಿತ್ರ)

ನಟಿ ಹಾಗೂ ನಿರ್ದೇಶಕಿ ರೇಣು ದೇಸಾಯಿ ತೆಲುಗು ಸೂಪರ್ ಸ್ಟಾರ್ ಹಾಗೂ ರಾಜಕಾರಣಿ ಮಾಜಿ ಪತಿ ಪವನ್ ಕಲ್ಯಾಣ್ ಅವರ ಒಂದು ವರ್ಗದ ಅಭಿಮಾನಿಗಳ ಮೇಲೆ ಕೆರಳಿ ಕೆಂಡವಾಗಿದ್ದಾರೆ. 

ತಮ್ಮ ಮೇಲೆ ಗುರಿಯಾಗಿಸಿಕೊಂಡು ಹಲವು ವರ್ಷಗಳಿಂದ ಪವನ್ ಕಲ್ಯಾಣ್ ಅಭಿಮಾನಿಗಳು ಅವಹೇಳನಕಾರಿಯಾಗಿ ಟೀಕಿಸುತ್ತಾ, ಆರೋಪ ಮಾಡುತ್ತಾ ಬಂದಿದ್ದಾರೆ ಎಂಬುದು ರೇಣು ದೇಸಾಯಿಯವರ ಸಿಟ್ಟಿಗೆ ಕಾರಣವಾಗಿದೆ. ಇಂತಹ ನೆಗೆಟಿವ್ ಮಾತುಗಳನ್ನು ಕಳೆದ 11 ವರ್ಷಗಳಿಂದ ಕೇಳುತ್ತಾ ಬಂದಿದ್ದೇನೆ ಎಂದು ಹೇಳಿದ್ದಾರೆ.

ರೇಣು ದೇಸಾಯಿಯವರು ಈ ಬಾರಿ ಇಷ್ಟೊಂದು ಸಿಟ್ಟಿನಿಂದ ತಮ್ಮ ಆಕ್ರೋಶ ಹೊರಹಾಕಲು ಕಾರಣ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ವಿಡಿಯೊ. ಮೊನ್ನೆ ಏಪ್ರಿಲ್ 8ರಂದು ಪುತ್ರ ಆಕಿರಾನ 19ನೇ ವರ್ಷದ ಹುಟ್ಟುಹಬ್ಬಕ್ಕೆ ವಿಡಿಯೊವನ್ನು ಪೋಸ್ಟ್ ಮಾಡಿದ್ದರು. 

ಹ್ಯಾಪಿ 19ನೇ ವರ್ಷದ ಹುಟ್ಟುಹಬ್ಬ ಮಗನೇ, 19 ವರ್ಷದವನಾದರೂ ಇನ್ನೂ ಪುಟ್ಟ ಮಗುವಿನಂತೆ ತೊಡೆಯ ಮೇಲೆ ಕುಳಿತುಕೊಳ್ಳುತ್ತಾನೆ ಎಂದು ಪ್ರೀತಿಯ ಎಮೊಜಿ ಹಾಕಿ ಫೋಟೋ ಶೇರ್ ಮಾಡಿ ಬರೆದಿದ್ದರು. ಅದಕ್ಕೆ ಪವನ್ ಕಲ್ಯಾಣ್ ಅಭಿಮಾನಿ ಎಂದು ಹೇಳಲಾಗುವ ವ್ಯಕ್ತಿಯೊಬ್ಬರು, ಅನ್ಯಾಯ ಮಾಡುತ್ತಿದ್ದೀರಿ, ಸೋದರ ಪವನ್ ಕಲ್ಯಾಣ್ ಗೆ ಮಗನ ಪ್ರೀತಿ ಸಿಗದಂತೆ ಮಾಡುತ್ತಿದ್ದೀರಿ ಎಂಬ ಅರ್ಥದಲ್ಲಿ ಬರೆದಿದ್ದರು.

ಅದಕ್ಕೆ ರೇಣು ದೇಸಾಯಿ ಪ್ರತಿಕ್ರಿಯಿಸಿ, ಆಕಿರಾ ನನ್ನ ಮಗ ಕೂಡ ಹೌದು, ಕೇವಲ ನಿಮ್ಮ ಸೋದರನ ಮಗ ಮಾತ್ರವಲ್ಲ, ನೀವು ಒಬ್ಬ ತಾಯಿಗೆ ಹುಟ್ಟಿದವರಲ್ಲವೇ, ನೀವು ಅವರ ಅಪ್ಪಟ ಅಭಿಮಾನಿಯಾಗಿರಬಹುದು. ಆದರೆ ಗಾಂಭೀರ್ಯತೆಯಿಂದ ಮಾತನಾಡುವುದನ್ನು ಕಲಿಯಿರಿ. ನಂಬಿಕೆ ಮತ್ತು ಅರ್ಥೈಸುವಿಕೆಯಿಂದಾಚೆಗೆ ಕೆಲವೊಬ್ಬರು ಸಂವೇದನಾರಹಿತವಾಗಿ ಮಾತನಾಡುತ್ತೀರಿ, ವರ್ತಿಸುತ್ತೀರಿ ಎಂದು ಬೇಸರ ಹೊರಹಾಕಿದ್ದಾರೆ.

ರೇಣು ದೇಸಾಯಿ ತಮಗೆ ಬಂದ ಕಮೆಂಟ್ ನ ಸ್ಕ್ರೀನ್ ಶಾಟ್ ತೆಗೆದು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ. ನಾನು ಸಾಮಾನ್ಯವಾಗಿ ಇಂತಹ ಕಮೆಂಟ್ ಗಳನ್ನು ನಿರ್ಲಕ್ಷಿಸುತ್ತೇನೆ, ಅಳಿಸಿಹಾಕುತ್ತೇನೆ ಅಥವಾ ಬ್ಲಾಕ್ ಮಾಡುತ್ತೇನೆ, ಆದರೆ ಇಂದು ನನ್ನ ಮಗನ ಹುಟ್ಟುಹಬ್ಬ. ಇಂತಹ ಅಸೂಕ್ಷ್ಮ ಸಂವೇದನರಹಿತವಾದ ಕಮೆಂಟ್ ಓದಿದರೆ ನನಗೆ ನೋವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಕೆಲವರು ಮಗನ ಹೆಸರಿನ ಮುಂದೆ ತಂದೆಯ ಹೆಸರು ಸೇರಿಸುವುದು ತೆಲುಗು ಸಂಸ್ಕೃತಿ, ಅದನ್ನು ತಪ್ಪಾಗಿ ತಿಳಿಯಬೇಡಿ ಎಂದು ಕೆಲವರು ಪ್ರತಿಕ್ರಿಯಿಸಿದರು. ಅದಕ್ಕೆ ರೇಣು ದೇಸಾಯಿ ಹಾಗಾದರೆ ಜನ್ಮಕೊಟ್ಟ ಮಹಿಳೆಯನ್ನು ಅಗೌರವಿಸುತ್ತೀರಾ ಎಂದು ಕೇಳಿದ್ದಾರೆ.

ಮಗನಿಗೆ ಜನ್ಮಕೊಟ್ಟ ದಿನ ಈ ರೀತಿಯ ಮಾತುಗಳನ್ನು ಕೇಳಿದಾಗ ಒಬ್ಬ ಮಗನ ತಾಯಿಯಾಗಿ ನನಗೆ ನೋವಾಗುತ್ತದೆ. ಕಳೆದ 11 ವರ್ಷಗಳಿಂದ ಇಂತಹ ಮಾತುಗಳನ್ನು ಕೇಳುತ್ತಾ ಬಂದಿದ್ದೇನೆ. ನನ್ನನ್ನು ವಿಲನ್ ರೀತಿ ತೋರಿಸುವುದನ್ನು ಯಾವಾಗ ನಿಲ್ಲಿಸುತ್ತೀರಿ, ನನಗೆ ನಿಜಕ್ಕೂ ಇವೆಲ್ಲಾ ನೋಡಿದರೆ ಬೇಸರವಾಗುತ್ತದೆ, ಪ್ರತಿಬಾರಿ ಇಂತಹ ಮಾತುಗಳನ್ನು ಕೇಳಿ ಸುಮ್ಮನೆ ಕುಳಿತರೆ ಅದು ನನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಮೆಂಟ್ ಮಾಡಿ ರೇಣು ದೇಸಾಯಿ ಇನ್ಸ್ಟಾಗ್ರಾಮ್ ನಲ್ಲಿ ಕಮೆಂಟ್ ವಿಭಾಗವನ್ನು ತೆಗೆದುಹಾಕಿದ್ದಾರೆ.

ರೇಣು ದೇಸಾಯಿ ಮತ್ತು ಪವನ್ ಕಲ್ಯಾಣ್ 2009ರಲ್ಲಿ ಮದುವೆಯಾಗಿ 2012ರಲ್ಲಿ ಬೇರ್ಪಟ್ಟರು. ಇವರಿಬ್ಬರೂ 2000ದಲ್ಲಿ ಬದ್ರಿ ಮತ್ತು 2003ರಲ್ಲಿ ಜಾನ್ನಿ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com