ಸಾಹಿತ್ಯ ಆಧರಿಸಿ ಸಿನಿಮಾ ಮಾಡಲು ಮುಂದಾದ ಅಶ್ವಿನಿ; ಪಾರ್ವತಮ್ಮ ಹಾದಿಯಲ್ಲಿ ದೊಡ್ಮನೆ ಸೊಸೆ

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಕನ್ನಡ ಸಾಹಿತ್ಯ ಆಧರಿಸಿ ಸಿನಿಮಾಗಳನ್ನು ಮಾಡಲು ಯೋಚಿಸುತ್ತಿರುವುದಾಗಿ ಹೇಳಿದ್ದಾರೆ.
ಅಶ್ವಿನಿ
ಅಶ್ವಿನಿ

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಕನ್ನಡ ಸಾಹಿತ್ಯ ಆಧರಿಸಿ ಸಿನಿಮಾಗಳನ್ನು ಮಾಡಲು ಯೋಚಿಸುತ್ತಿರುವುದಾಗಿ ಹೇಳಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದ ಅಪ್ರತಿಮ ನಿರ್ಮಾಪಕಿ, ತಮ್ಮ ಅತ್ತೆ ಪಾರ್ವತಮ್ಮ ರಾಜ್‌ಕುಮಾರ್‌ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ. 

ಪಾರ್ವತಮ್ಮ ರಾಜ್‌ಕುಮಾರ್‌ ಅವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಬಹಳ ಆಸಕ್ತಿ ಇತ್ತು. ಅವರು ತಾವು ಓದಿದ ಕಾದಂಬರಿಯನ್ನು ಇಟ್ಟುಕೊಂಡು ಅವರು ಸಿನಿಮಾ ಮಾಡುತ್ತಿದ್ದರು. ಇದೀಗ ಅಶ್ವಿನಿ ಅವರು ಸಹ ಕನ್ನಡ ಸಾಹಿತ್ಯದ ಮೂಲಕ ತಮ್ಮ ಚಿತ್ರಗಳಿಗೆ ಜೀವ ತುಂಬುವತ್ತ ಗಮನಹರಿಸಿದ್ದಾರೆ.

ಹೊಸಬರಿಗೆ ಅವಕಾಶ ನೀಡಬೇಕು ಎಂಬ ಕಾರಣದಿಂದ ಪುನೀತ್​ ರಾಜ್​ಕುಮಾರ್​ ಅವರು ‘ಪಿಆರ್​ಕೆ ಪ್ರೊಡಕ್ಷನ್ಸ್​’ ಸಂಸ್ಥೆ ಆರಂಭಿಸಿದರು. ಈಗ ಅದನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್​ ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಅಶ್ವಿನಿ ಅವರ ಪಿಆರ್​ಕೆ ಪ್ರೊಡಕ್ಷನ್ಸ್ ನಿರ್ಮಾಣದ ಆಚಾರ್ ಆ್ಯಂಡ್ ಕೋ ಜುಲೈ 28 ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದ ಬಗ್ಗೆ ಮತ್ತು ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ್ದಾರೆ.

ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನದ ಈ ಚಿತ್ರಕ್ಕೆ ಬಿಂದುಮಾಲಿನಿ ನಾರಾಯಣಸ್ವಾಮಿ ಸಂಗೀತ ನೀಡಿದ್ದು, ಇಂಚರ ಸುರೇಶ್ ವಸ್ತ್ರ ವಿನ್ಯಾಸಕರಾಗಿದ್ದಾರೆ. ಹೇಮಾ ಸುವರ್ಣ ಸೇರಿದಂತೆ ಈ ಚಿತ್ರ ತಂಡ ಅನೇಕ ನುರಿತ ಮಹಿಳಾ ತಂತ್ರಜ್ಞರನ್ನು ಒಳಗೊಂಡಿದೆ.

ಪಿಆರ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ನಿಮ್ಮ ಹಿಂದಿನ ಪ್ರಾಜೆಕ್ಟ್‌ಗಳಿಗಿಂತ ಆಚಾರ್ ಆ್ಯಂಡ್ ಕೋ ಹೇಗೆ ಭಿನ್ನ?
ಆಚಾರ್ & ಕೋ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಇದು 1960-70 ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ಹೃದಯಸ್ಪರ್ಶಿ ಕೌಟುಂಬಿಕ ಚಿತ್ರವಾಗಿದೆ. ವಿರಹ, ಹಾಸ್ಯ ಮತ್ತು ಡ್ರಾಮಾ ಒಳಗೊಂಡಿದೆ. ಇದು ಎಲ್ಲಾ ವಯಸ್ಸಿನ ಪ್ರೇಕ್ಷಕರಿಗೆ ಖುಷಿ ನೀಡಲಿದೆ. ಇದೊಂದು ರೆಟ್ರೋ ಕಾಲದ ಕಥೆ ಎಂದಿದ್ದಾರೆ.

ಆಚಾರ್ & ಕೋ ನಿರ್ಮಾಣದ ಸಮಯದಲ್ಲಿನ ನಿಮ್ಮ ಅನುಭವ ಮತ್ತು ಆಲೋಚನೆ ಹಂಚಿಕೊಳ್ಳಬಹುದೇ?
ಜೂನ್ 2021 ರಲ್ಲಿ ಸ್ಕ್ರಿಪ್ಟ್ ಅನ್ನು ಅಂತಿಮಗೊಳಿಸುವುದರೊಂದಿಗೆ ಆಚಾರ್ ಆ್ಯಂಡ್ ಕೋ ಪ್ರಯಾಣ ಪ್ರಾರಂಭವಾಯಿತು. ನಾವು ಏಪ್ರಿಲ್ 2022 ರಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಿದೇವು. ನಾನು ಮೊದಲು ಚಿತ್ರಕಥೆಯನ್ನು ಓದಿದಾಗ, ತಕ್ಷಣ ಇಷ್ಟವಾಯಿತು. ಪುನೀತ್ ಕೂಡ ಚಿತ್ರಕಥೆಯನ್ನು ಪರಿಶೀಲಿಸಿದ್ದಾರೆ. ಚಿತ್ರದಲ್ಲಿ ಉತ್ತಮ ಕಲಾವಿದರಿದ್ದು, ಉತ್ತಮ ಸಂಭಾಷಣೆಯನ್ನು ಹೊಂದಿದೆ ಎಂದರು.

1960-70ರ ದಶಕದಲ್ಲಿ ನಡೆದ ಕಥೆಯೊಂದಿಗೆ ಪ್ರಸ್ತುತ ಪೀಳಿಗೆ ಹೇಗೆ ಸ್ಪಂದಿಸುತ್ತದೆ ಎಂದು ನೀವು ಭಾವಿಸುತ್ತೀರಿ?
ಪ್ರಸ್ತುತ ಪೀಳಿಗೆಯ ಅನೇಕ ಜನರು 1960 ರ ದಶಕದ ಜೀವನದ ಬಗ್ಗೆ ಆಗಾಗ್ಗೆ ಆಶ್ಚರ್ಯ ಪಡುತ್ತಾರೆ. ಆಚಾರ್ & ಕೋ. ಆ ಯುಗದೊಂದಿಗೆ ನಿಕಟವಾಗಿ ಸಂಪರ್ಕ ಸಾಧಿಸಲು ಅವರಿಗೆ ಅವಕಾಶವನ್ನು ನೀಡುತ್ತದೆ ಎಂದು ಅಶ್ವಿನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com