ಬೆಂಗಳೂರು: ನ್ಯಾಷನಲ್ ಸ್ಟಾರ್ ಯಶ್ ಅವರು ಯಶ್ 19 ಸಿನಿಮಾ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಅವರ ಮುಂದಿನ ಚಿತ್ರದ ಅಪ್ಡೇಟ್ಗಾಗಿ ಪ್ರೇಕ್ಷಕರು ಕಳೆದ ಒಂದೂವರೆ ವರ್ಷದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ತಮ್ಮ ಮುಂದಿನ ಚಿತ್ರದ ಬಗ್ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.
ಯಶ್ ಸಮಾರಂಭವೊಂದರಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ, ನನಗೆ ನಿಮ್ಮ ಕಾತರ ಅರ್ಥವಾಗುತ್ತದೆ. ನನ್ನನ್ನು ದೊಡ್ಡದಾಗಿ ಬೆನ್ನುತಟ್ಟಿದ್ದೀರ. ಆದರೆ ನಾನು ಸುಮ್ಮನೆ ಕೂತಿಲ್ಲ. ನಾನು ರಿಲ್ಯಾಕ್ಸ್ ಆಗುತ್ತಿಲ್ಲ. ಬದಲಿಗೆ ದೊಡ್ಡ ಮಟ್ಟದ ಕೆಲಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೇನೆ. ಸಾಧಾರಣವಾದ ಕೆಲಸ ಮಾಡಲು ನನಗೆ ಇಷ್ಟವಿಲ್ಲ, ಎಲ್ಲರೂ ಹೆಮ್ಮೆ ಪಡುವಂತಹ ಕೆಲಸವನ್ನೇ ಮಾಡುತ್ತೇನೆ ಎಂದು ಯಶ್ ಮಾತನಾಡಿದ್ದಾರೆ.
ಖಂಡಿತಾ ಸಿನಿಮಾ ಬಗ್ಗೆ ಅಪ್ಡೇಟ್ ಕೊಡುತ್ತೀನಿ. ಎಲ್ಲ ಊಟ ರೆಡಿಯಾದ ಮೇಲೆ ಬಡಿಸಿದರೇನೆ ಚೆಂದ. ಅರ್ಧಂಬರ್ಧ ಅಡುಗೆ ಮಾಡಿ ಊಟಕ್ಕೆ ಕರೆಯುವುದು ಸರಿ ಹೋಗುವುದಿಲ್ಲ. ನೀವೆಲ್ಲರೂ ಹೆಮ್ಮೆ ಪಡುವಂತಹ ಕೆಲಸ ಮಾಡುತ್ತೀನಿ ಎಂದು ಯಶ್ ಖುಷಿಯಿಂದ ಮಾತನಾಡಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ ಯಶ್ ಅವರು ʻʻನಾನು ಯಾವತ್ತೂ ಸಿನಿಮಾ ಬಗ್ಗೆ ಅನೌನ್ಸ್ಮೆಂಟ್ ಎಂದು ಹೇಳಿಲ್ಲ. ತುಂಬ ಜನ ಅವರ ಖುಷಿಗೆ ಪ್ರತಿ ಹಬ್ಬ ಬಂದಾಗ, ಈ ತಿಂಗಳು ಅಪ್ಡೇಟ್, ಈ ದಿನ ಅಪಡೇಟ್ ಎಂದು ಹೇಳಿ ಹೇಳಿ ಮಿಸ್ಗೈಡ್ ಆಗ್ತಿದೆ. ಅಡುಗೆ ಕರೆಕ್ಟ್ ಆದಮೇಲೆ ಬಡಿಸಬೇಕು. ಸ್ವಲ್ಪ ತಾಳ್ಮೆ ಇರಲಿ. ನೀವು ಇಷ್ಟ ಪಡುವ ಕೆಲಸ ಆಗುತ್ತೆ. ನಾನು ಸುಮ್ಮನೆ ರಿಲ್ಯಾಕ್ಸ್ ಆಗಿ ಕುಳಿತಿಲ್ಲ, ರೆಡಿಯಾಗ್ತೀದ್ದೇನೆ. ಆದಷ್ಟು ಬೇಗ ನಿಮಗೆ ಗುಡ್ ನ್ಯೂಸ್ ಕೊಡ್ತೀನಿʼʼ ಎಂದು ಹೇಳಿದರು.
ಮುಂದಿನ ಚಿತ್ರದ ಘೋಷಣೆಗಾಗಿ ಅಭಿಮಾನಿಗಳು, ಇಡೀ ಭಾರತೀಯ ಚಿತ್ರರಂಗ ಕಾಯುತ್ತಿದೆ. ಯಾಕೆಂದರೆ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ್ದ ʼಕೆಜಿಎಫ್ 2ʼ ಚಿತ್ರ ಬಿಡುಗಡೆಯಾಗಿ ಸುಮಾರು ಒಂದೂವರೆ ವರ್ಷವಾದರೂ ಯಶ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ. ಈ ಮಧ್ಯೆ ಅವರು ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ʼರಾಮಾಯಣʼ (Ramayana) ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಯಶ್ ದಾಖಲೆಯ ಬರೋಬ್ಬರಿ 150 ಕೋಟಿ ರೂ. ಸಂಭಾವನೆ ಪಡಯುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ಯಶ್ ʼರಾಮಾಯಣʼ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಲು ನಿರ್ಧರಿಸಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ ಎನ್ನುತ್ತದೆ ಒಂದು ಮೂಲ. ಈ ಮಧ್ಯೆ ʼಕೆಜಿಎಫ್ʼ ಚಿತ್ರದ 3ನೇ ಭಾಗ ಆರಂಭವಾಗಲಿದೆ ಎನ್ನುವ ಸುದ್ದಿಯೂ ತೇಲಿ ಬಂದಿದೆ. ಯಶ್ ಈ ಎರಡೂ ಚಿತ್ರಗಳ ಭಾಗವಾಗಲಿದ್ದು, ಅದಕ್ಕಾಗಿ ಡೇಟ್ ಹೊಂದಿಸಲಿದ್ದಾರಂತೆ.
Advertisement