ಬೆಂಗಳೂರು: ಕನ್ನಡದ ಹೆಸರಾಂತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಇಹಲೋಕ ತ್ಯಜಿಸಿದ್ದಾರೆ. ಅವರು ಹಿಂದೆ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗೆಲ್ಲಾ ತಮ್ಮ ಕುಟುಂಬ ಸದಸ್ಯರ ಬಗ್ಗೆ ಕೂಡ ಮಾತನಾಡುತ್ತಿದ್ದರು. ಪತ್ನಿ ಅಂಬುಜಾ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಿಕೊಳ್ಳುತ್ತಿದ್ದರು.
ಪತ್ನಿ ತೀರಿಹೋದ ದಿನಾಂಕವೇ ದ್ವಾರಕೀಶ್ ನಿಧನ: ಕನ್ನಡದ ಪ್ರಚಂಡ ಕುಳ್ಳ ಎಂದು ಜನಪ್ರಿಯರಾದ ದ್ವಾರಕೀಶ್ ಅವರು ಅಂಬುಜಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಅನ್ಯೋನ್ಯ ದಾಂಪತ್ಯಕ್ಕೆ ಐವರು ಮಕ್ಕಳು ಇದ್ದಾರೆ.ಸಿನಿಮಾ ವೃತ್ತಿಯಲ್ಲಿ ದ್ವಾರಕೀಶ್ ಸೋಲು-ಗೆಲುವು ಕಂಡಿದ್ದಾಗ ಅಂಬುಜಾ ಪತಿಗೆ ಜೊತೆಯಾಗಿ ನಿಂತಿದ್ದರು. ಕಷ್ಟ-ಸುಖಗಳಲ್ಲಿ ಹೆಗಲು ಕೊಟ್ಟಿದ್ದರು.
ಅಂಬುಜಾ ಅವರು ಮೂರು ವರ್ಷಗಳ ಹಿಂದೆ 2021ರ ಏಪ್ರಿಲ್ 16ರಂದು ನಿಧನರಾಗಿದ್ದರು. ತಮ್ಮ ಪ್ರೀತಿಯ ಮಡದಿ ಅಂಬುಜಾರನ್ನ ದ್ವಾರಕೀಶ್ ಕಳೆದುಕೊಂಡ ಮೇಲೆ ಅಕ್ಷರಶಃ ಒಬ್ಬಂಟಿಯಾಗ್ಬಿಟ್ಟರು. ಅರ್ಧಾಂಗಿಯನ್ನ ಪ್ರತಿ ಕ್ಷಣ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಿದ್ದರು. ಅಂಬುಜಾ ಇಲ್ಲದೆ ನೊಂದುಕೊಂಡಿದ್ದ ದ್ವಾರಕೀಶ್, ಪತ್ನಿ ಇಹಲೋಕ ತ್ಯಜಿಸಿದ ದಿನದಂದೇ ಏಪ್ರಿಲ್ 16ರಂದು ನಿಧನರಾಗಿದ್ದಾರೆ.
ಒಂದೇ ದಿನಾಂಕ... ಒಂದೇ ಸಮಯ: ಏಪ್ರಿಲ್ 16, 2021 ರಂದು ಬೆಳಗ್ಗೆ 9.45 ಸುಮಾರಿಗೆ ದ್ವಾರಕೀಶ್ ಅವರ ಮೊದಲ ಪತ್ನಿ ಅಂಬುಜಾ ಬಾರದ ಲೋಕಕ್ಕೆ ಪಯಣಿಸಿದರು. ಕಾಕತಾಳೀಯ ಅಂದ್ರೆ ಅದೇ ದಿನಾಂಕ ಬೆಳಗಿನ ಸಮಯ 9.45ರ ಸುಮಾರಿಗೆ ದ್ವಾರಕೀಶ್ ಸಹ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಮಲಗಿದ ದ್ವಾರಕೀಶ್ ಮೇಲೇಳಲೇ ಇಲ್ಲ: ಮೊನ್ನೆ ಏಪ್ರಿಲ್ 15 ಸೋಮವಾರ ರಾತ್ರಿಯಿಂದಲೂ ದ್ವಾರಕೀಶ್ ಅವರಿಗೆ ಹೊಟ್ಟೆಯಲ್ಲಿ ಸಂಕಟವಾಗುತ್ತಿತ್ತಂತೆ. ತೀರಾ ಅಸ್ವಸ್ಥರಾಗಿ ಹೋಗಿದ್ದರು. ಲೂಸ್ ಮೋಷನ್ ಆಗುತ್ತಿತ್ತು. ರಾತ್ರಿ ಪೂರ್ತಿ ನಿದ್ದೆ ಮಾಡಿರಲಿಲ್ಲ. ನಿನ್ನೆ ಮಂಗಳವಾರ ಬೆಳಗ್ಗೆ ಎದ್ದು ಕಾಫಿ ಕುಡಿದರು. ಬಳಿಕ ‘’ಸುಸ್ತಾಗ್ತಿದೆ. ಸ್ವಲ್ಪ ಹೊತ್ತು ನಿದ್ದೆ ಮಾಡ್ತೀನಿ. 10 ಗಂಟೆ ಸುಮಾರಿಗೆ ಎಬ್ಬಿಸು’’ ಎಂದು ಮಗ ಯೋಗೀಶ್ಗೆ ದ್ವಾರಕೀಶ್ ಹೇಳಿದ್ದಾರೆ. ಆನಂತರ, 9.45 ಸುಮಾರಿಗೆ ಅಪ್ಪನನ್ನ ಎಬ್ಬಿಸಲು ಯೋಗೀಶ್ ಕೋಣೆಗೆ ತೆರಳಿದ್ದಾರೆ. ಮಲಗಿದ್ದ ದ್ವಾರಕೀಶ್ ಮೇಲೇಳಲೇ ಇಲ್ಲ. ಹೃದಯಾಘಾತದಿಂದ ದ್ವಾರಕೀಶ್ ಕೊನೆಯುಸಿರೆಳೆದಿದ್ದಾರೆ.
ಏ.17, 2004ರಂದು ನಿಧನ ಹೊಂದಿದ್ದ ನಟಿ ಸೌಂದರ್ಯ: ಇಲ್ಲಿ ಮತ್ತೊಂದು ಆಸಕ್ತಿಕರ ವಿಷಯವೆಂದರೆ ಕನ್ನಡದ ಹೆಸರಾಂತ ಪ್ರತಿಭಾವಂತ ನಟಿ ಸೌಂದರ್ಯ 2004ರ ಏಪ್ರಿಲ್ 17ರಂದು ವಿಮಾನ ಅಪಘಾತದಲ್ಲಿ ಅಸುನೀಗಿದ್ದರು.
ಆಗಷ್ಟೇ ವಿಷ್ಣುವರ್ಧನ್, ದ್ವಾರಕೀಶ್, ರಮೇಶ್ ಅರವಿಂದ್ ಅಭಿನಯದ ಆಪ್ತಮಿತ್ರ ಚಿತ್ರ ಬಿಡುಗಡೆಗೆ ಸಜ್ಜಾಗಿತ್ತು. ಸೌಂದರ್ಯ ಅವರ ನಿಧನ ನಂತರ ಬಿಡುಗಡೆಯಾದ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸ್ಥಾಪಿಸಿತು. ದ್ವಾರಕೀಶ್ ಅವರಿಗೆ ಚಿತ್ರರಂಗ ವೃತ್ತಿಯಲ್ಲಿ ಮರುಜನ್ಮ ನೀಡಿದ ಚಿತ್ರವದು. ಚಿತ್ರದ ಶೂಟಿಂಗ್ ಸಮಯದಲ್ಲಿ ಈ ಚಿತ್ರ ಗೆದ್ದೇ ಗೆಲ್ಲುತ್ತದೆ ಮಾಮಾ ಎಂದು ದ್ವಾರಕೀಶ್ ಅವರಿಗೆ ಸೌಂದರ್ಯ ಹೇಳುತ್ತಿದ್ದರಂತೆ.
Advertisement