ಬೆಂಗಳೂರು: ಕಾಟೇರ ಸಿನಿಮಾದ ಯಶಸ್ಸು ಮತ್ತು ಮುಂದಿನ ಡೆವಿಲ್ ಚಿತ್ರದ ಆರಂಭಕ್ಕೆ ಮುನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ, ಮಗ ಮತ್ತು ಅವರ ಸ್ನೇಹಿತರ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಇದರ ಫೋಟೋ ವಿಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಹರಿದಾಡುತ್ತಿವೆ.
ದರ್ಶನ್(Challenging star Darshan) ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಹಾಗೂ ಸ್ನೇಹಿತರಾದ ಸಚ್ಚಿದಾನಂದ ಹಾಗೂ ಶ್ರೀನಿವಾಸರ ಜತೆ ತಿರುಪತಿ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಹುಟ್ಟುಹಬ್ಬಕ್ಕೆ ಮುನ್ನ ತಿರುಪತಿ ಯಾತ್ರೆ: ಫೆಬ್ರವರಿ 16ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ. ಅಂದೇ ಅವರ ಡೆವಿಲ್ ಚಿತ್ರದ ಬಗ್ಗೆ ಪ್ರಮುಖ ಅಪ್ ಡೇಟ್ ಹೊರಬೀಳಲಿದೆ. ಅಂದೇ ಚಿತ್ರದಲ್ಲಿ ದರ್ಶನ್ ಅವರ ಫಸ್ಟ್ ಲುಕ್ ಮತ್ತು ನಾಯಕಿ ಯಾರೆಂಬುದು ಬಹಿರಂಗವಾಗಲಿದೆ. ಇತ್ತೀಚೆಗೆ ದರ್ಶನ್ ಅವರ ಖಾಸಗಿ ಬದುಕು ಭಾರೀ ಸುದ್ದಿಯಾಗಿತ್ತು. ಇನ್ಸ್ಟಾಗ್ರಾಮ್ ನಲ್ಲಿ ವಿಜಯಲಕ್ಷ್ಮಿ ದರ್ಶನ್ ಮತ್ತು ನಟಿ ಹಾಗೂ ವಸ್ತ್ರವಿನ್ಯಾಸಕಿ ಪವಿತ್ರಾ ಗೌಡ ಕಿತ್ತಾಡಿಕೊಂಡಿದ್ದರು. ಇದಾದ ಬಳಿಕ ದರ್ಶನ್ ಅವರು ತಮ್ಮ ಪತ್ನಿ ಮತ್ತು ಪುತ್ರನ ಜೊತೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.
ಡಿ ಬಾಸ್ ಎಂದೇ ಅಭಿಮಾನಿ ವಲಯದಲ್ಲಿ ಕರೆಸಿಕೊಳ್ಳುವ ದರ್ಶನ್ ಅವರ ಹುಟ್ಟುಹಬ್ಬವನ್ನು ಈ ವರ್ಷ ಬಹಳ ಅದ್ದೂರಿಯಾಗಿಯೇ ಆಚರಿಸಲು ಅವರ ಅಭಿಮಾನಿಗಳು ಸಿದ್ದತೆ ಮಾಡಿಕೊಂಡಿದ್ದಾರೆ. ಈಗಾಗಲೇ ಕರ್ನಾಟಕದ ವಿವಿಧೆಡೆ ಡಿ ಬಾಸ್ ಅಭಿಮಾನಿಗಳು ಕಟೌಟ್, ಬ್ಯಾನರ್ ಹಾಕಲು ಆರಂಭಿಸಿದ್ದಾರೆ. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲೂ ವಿವಿಧ ಪೋಸ್ಟರ್ಗಳು, ಸಂದೇಶಗಳ ಮೂಲಕ ಕಾಟೇರ ನಾಯಕನಿಗೆ ಶುಭಾಶಯ ಹೇಳಲು ಆರಂಭಿಸಿದ್ದಾರೆ.
ಕಾಟೇರ ಒಟಿಟಿಯಲ್ಲಿ ಪ್ರಸಾರ: ಡಿಸೆಂಬರ್ 29ರಂದು ಬಿಡುಗಡೆಯಾಗಿರುವ ಕಾಟೇರ ಸಿನಿಮಾವು ಯಶಸ್ಸು ಕಂಡು ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ನಿನ್ನೆಯಿಂದ ಝಿ5 ಒಟಿಟಿಯಲ್ಲೂ ಕಾಟೇರಾ ಪ್ರಸಾರವಾಗುತ್ತಿದೆ. ಚಿತ್ರಮಂದಿರಗಳಲ್ಲಿ ಕಾಟೇರ ಸಿನಿಮಾ ನೋಡದೆ ಇರುವವರು ಒಟಿಟಿಯಲ್ಲಿ ಕಾಟೇರ ವೀಕ್ಷಿಸಬಹುದು.
Advertisement