ಕನ್ನಡದಲ್ಲಿ ದಿಯಾ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ ನಟ ಪೃಥ್ವಿ ಅಂಬಾರ್, ಶಿವರಾಜ್ ಕುಮಾರ್ ಜೊತೆಗೆ ಭೈರಗಿ, ಶುಗರ್ಲೆಸ್ ಮತ್ತು ಇತ್ತೀಚೆಗೆ ದೂರದರ್ಶನ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಅವರ ಸತತ ಮೂರು ಚಿತ್ರ ಬಿಡುಗಡೆ ಹಾದಿಯಲ್ಲಿವೆ. ಜೂನಿ ಮತ್ತು ಫಾರ್ ರೆಗ್ನ್ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಮತ್ಸ್ಯಗಂಧವು ಕೂಡ ಅದರ ನಂತರ ಫೆಬ್ರವರಿ 23 ರಂದು ಬಿಡುಗಡೆಯಾಗಲಿದೆ.
ದೇವರಾಜ್ ಪೂಜಾರಿ ನಿರ್ದೇಶನದ ಮತ್ತು ಪ್ರಶಾಂತ್ ಸಿದ್ದಿ ಸಂಗೀತ ನಿರ್ದೇಶಕರಾಗಿರುವ ಮತ್ಸ್ಯಗಂಧ ಒಂದು ಕ್ರೈಂ ಡ್ರಾಮಾ ಚಿತ್ರವಾಗಿದೆ. ಇದರಲ್ಲಿ ಪೃಥ್ವಿ ಅಂಬಾರ್ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
ಬಿ.ಎಸ್.ವಿಶ್ವನಾಥ್ ಅವರ ಸಹ್ಯಾದ್ರಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಕನ್ನಡ ಪಿಚ್ಚರ್ ಪ್ರಸ್ತುತಪಡಿಸಿದ ಮತ್ಸ್ಯಗಂಧವನ್ನು ಹೊನ್ನಾವರ, ಕುಮಟಾ ಮತ್ತು ಅದರ ಸುತ್ತಮುತ್ತಲಿನ ಕರಾವಳಿ ಪ್ರದೇಶದಲ್ಲಿ ಸಂಪೂರ್ಣವಾಗಿ ಚಿತ್ರೀಕರಿಸಲಾಗಿದೆ. ಪ್ರವೀಣ್ ಎಂ ಪ್ರಭು ಅವರ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಗೋಪಾಲ್ ಕೃಷ್ಣ ದೇಶಪಾಂಡೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತಾರಾಗಣದಲ್ಲಿ ಬಜರಂಗಿ ಲೋಕಿ, ಶರತ್ ಲೋಹಿತಾಶ್ವ, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರು, ಕಿರಣ್ ನಾಯ್ಕ್, ಅಶೋಕ್ ಹೆಗ್ಡೆ, ಪಿಡಿ ಸತೀಶ್ ಚಂದ್ರ, ದಿಶಾ ಶೆಟ್ಟಿ, ಅಂಜಲಿ ಪಾಂಡೆ, ಮೈಮ್ ರಾಮದಾಸ್, ನಿರೀಕ್ಷಾ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
Advertisement