
ಉಡುಪಿ: ಮುಂಬರುವ ಕನ್ನಡ ಚಿತ್ರ 'ಕಾಂತಾರ: ಚಾಪ್ಟರ್ 1' ಚಿತ್ರೀಕರಣದ ವೇಳೆ ಕಿರಿಯ ಕಲಾವಿದರೊಬ್ಬರು ಉಡುಪಿ ಜಿಲ್ಲೆಯ ಸೌಪರ್ಣಿಕಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೃತ ಕಲಾವಿದನನ್ನು ಎಂ ಎಫ್ ಕಪಿಲ್ ಎಂದು ಗುರುತಿಸಲಾಗಿದೆ. ಬುಧವಾರ ಈಜಲು ನದಿಗೆ ಇಳಿದಿದ್ದ ಎಂ ಎಫ್ ಕಪಿಲ್ ಅವರು ಬಲವಾದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.
ಅಗ್ನಿಶಾಮಕ ಇಲಾಖೆ ಮತ್ತು ಸ್ಥಳೀಯ ಅಧಿಕಾರಿಗಳು ತಕ್ಷಣ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ ನಿನ್ನೆ ರಾತ್ರಿಯೇ ಅವರ ಶವವನ್ನು ಹೊರತೆಗೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ ಅವರು ತಿಳಿಸಿದ್ದಾರೆ.
2022 ರಲ್ಲಿ ತೆರೆಕಂಡ 'ಕಾಂತಾರ' ಚಿತ್ರದಲ್ಲೂ ನಟಿಸಿದ್ದ ಕಪಿಲ್ 'ಕಾಂತಾರ: ಚಾಪ್ಟರ್ 1' ಸಿನಿಮಾದಲ್ಲಿ ಜೂನಿಯರ್ ಕಲಾವಿದರಾಗಿ ಅಭಿನಯಿಸುತ್ತಿದ್ದರು.
ಮುಂಬೈ ಮೂಲದ ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ(ಎಐಸಿಡಬ್ಲ್ಯೂಎ), ಕೇರಳ ಮೂಲದ ಜೂನಿಯರ್ ಕಲಾವಿದ ಎಂ ಎಫ್ ಕಪಿಲ್ ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಎಐಸಿಡಬ್ಲ್ಯೂಎ, ರಿಷಬ್ ಶೆಟ್ಟಿ ಮತ್ತು ಅವರ ಕಂಪನಿಯ ವಿರುದ್ಧ ಎಫ್ಐಆರ್ ದಾಖಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮತ್ತು ಮೃತ ಕಲಾವಿದನ ಹತ್ತಿರದ ಸಂಬಂಧಿಕರಿಗೆ ೧ ಕೋಟಿ ರೂಪಾಯಿ ಪರಿಹಾರ ಘೋಷಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದೆ.
ಚಿತ್ರದ ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್, ಕಪಿಲ್ ಸಾವು "ತುಂಬಾ ದುರದೃಷ್ಟಕರ" ಎಂದು ಹೇಳಿದ್ದು, ಈ ಘಟನೆಯು ಚಿತ್ರದ ಸೆಟ್ನಲ್ಲಿ ಅಥವಾ ಚಿತ್ರೀಕರಣದ ಸಮಯದಲ್ಲಿ ಸಂಭವಿಸಿಲ್ಲ, ಬದಲಿಗೆ ಚಿತ್ರೀಕರಣದ ಸ್ಥಳದಿಂದ ಸಾಕಷ್ಟು ದೂರದಲ್ಲಿ ಮತ್ತು ದಿನದ ಕೆಲಸ ಮುಗಿದ ನಂತರ ಸಂಭವಿಸಿದೆ ಎಂದು ಹೇಳಿದೆ.
Advertisement