

ತಮಿಳುನಾಡು ವಿಧಾನಸಭೆಯ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಅಚ್ಚರಿಯ ರೀತಿಯಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಮೊದಲ ಪ್ರಯತ್ನದಲ್ಲೇ 108 ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಮೊದಲ ಬಾರಿ ರಾಜಕೀಯ ಅಖಾಡಕ್ಕೆ ಇಳಿದು ಭರ್ಜರಿ ಜಯಭೇರಿ ಬಾರಿಸುವ ಮೂಲಕ ದಳಪತಿ ವಿಜಯ್ ಅವರು, ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರಕ್ಕೆ ಆಘಾತ ನೀಡಿದ್ದಾರೆ.
ವಿಜಯ್ ಭರ್ಜರಿ ಗೆಲುವಿಗೆ ಚಲನಚಿತ್ರೋದ್ಯಮದ ಹಲವು ನಟ, ನಟಿಯರು ಅಭಿನಂದಿಸಿದ್ದಾರೆ. ಇದರ ಬೆನ್ನಲ್ಲೇ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ಅವರು ಮಾಡಿದ ಪೋಸ್ಟ್ ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ತಮಿಳುನಾಡಿನಲ್ಲಿ ಕಲೈನಾರ್ ಎಂದೇ ಜನಪ್ರಿಯರಾಗಿರುವ ಡಿಎಂಕೆ ವರಿಷ್ಠ ದಿವಂಗತ ಎಂ ಕರುಣಾನಿಧಿ ಅವರ ಹಳೆಯ ಫೋಟೋವನ್ನು ರಾಮ್ ಗೋಪಾಲ್ ವರ್ಮಾ ಅವರು ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಕರುಣಾನಿಧಿ ಅವರ ಹಿಂದೆ ಬಾಲಕ ವಿಜಯ್ ನಿಂತಿದ್ದರೆ, ಅವರ ಪೋಷಕರು ಎಸ್ಎ ಚಂದ್ರಶೇಖರ್ ಮತ್ತು ಶೋಭಾ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯೊಂದಿಗೆ ಇದ್ದಾರೆ.
"ಕಲೈನಾರ್ ಅವರ ಹಿಂದೆ ನಿಂತಿರುವ ಹುಡುಗ ಮುಂದೊಂದು ದಿನ ತಮ್ಮ ಪಕ್ಷವನ್ನು ನಾಶಮಾಡುತ್ತಾನೆ ಎಂದು ಕರುಣಾನಿಧಿ ಅವರು ಕನಸು ಮನಸ್ಸಿನಲ್ಲೂ ಭಾವಿಸಿರಲಿಲ್ಲ" ಎಂದು ವರ್ಮಾ ಅವರು X ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಹಲವರು ಪ್ರತಿಕ್ರಿಯಿಸಿದ್ದು, ವರ್ಮಾ ಅವರ ಮಾತಿಗೆ ಸಮ್ಮತಿ ನೀಡಿದ್ದಾರೆ.
Advertisement