ಮರೆವಿನ ಹಾಸ್ಯದ ನೊರೆಗುಳ್ಳೆ!

ತೆಲುಗಿನಿಂದ ಬಂದಿರುವ 'ಸುಂದರಾಂಗ ಜಾಣ' ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಭರಪೂರ ಹಾಸ್ಯದ ಭರವಸೆ ನೀಡಿದ್ದ ಚಿತ್ರ. ಈ ಹಿಂದೆ ತಮಿಳಿನ 'ಸತಿ ಲೀಲಾವತಿ'ಯನ್ನು ಕನ್ನಡಕ್ಕೆ
'ಸುಂದರಾಂಗ ಜಾಣ' ಸಿನೆಮಾ ವಿಮರ್ಶೆ
'ಸುಂದರಾಂಗ ಜಾಣ' ಸಿನೆಮಾ ವಿಮರ್ಶೆ
Updated on
ತೆಲುಗಿನಿಂದ ಬಂದಿರುವ 'ಸುಂದರಾಂಗ ಜಾಣ' ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಭರಪೂರ ಹಾಸ್ಯದ ಭರವಸೆ ನೀಡಿದ್ದ ಚಿತ್ರ. ಈ ಹಿಂದೆ ತಮಿಳಿನ 'ಸತಿ ಲೀಲಾವತಿ'ಯನ್ನು ಕನ್ನಡಕ್ಕೆ 'ರಾಮ ಶಾಮ ಭಾಮಾ'ವಾಗಿ ತಂದಿದ್ದ ರಮೇಶ್, ಪ್ರೇಕ್ಷಕರಲ್ಲಿ ನಗೆ ಉಕ್ಕಿಸುವಲ್ಲಿ ಸಂಪೂರ್ಣ ಸಫಲರಾಗಿದ್ದರು. ಮೂಲ ಮತ್ತು ರಿಮೇಕ್ ಎರಡರಲ್ಲಿಯೂ ಕಮಲ ಹಾಸನ್ ನಟಿಸಿದ್ದು ಅಲ್ಲಿ ಬಹಳ ಪೂರಕವಾಗಿ ಕೆಲಸ ಮಾಡಿತ್ತಲ್ಲದೆ, ಉತ್ತರ ಕರ್ನಾಟಕದ ಸೊಗಡನ್ನು ಒಳಗೊಂಡ ಚಿತ್ರ, ಇದು ಇಲ್ಲಿಯದೇ ಚಿತ್ರವಲ್ಲವೇ ಎಂಬ ಸಂದೇಹ ಮೂಡಿಸುವಷ್ಟು ಆಪ್ತವಾಗಿ ಮೂಡಿಬಂದಿತ್ತು. ಪ್ರಸಕ್ತ ಸಿನೆಮಾದ ಮೇಲೆಯೂ ಅಂತಹುದೇ ನಿರೀಕ್ಷೆ ಪ್ರೇಕ್ಷರಲ್ಲಿತ್ತು ಎಂಬುದರಲ್ಲಿ ಸಂಶಯವಿಲ್ಲ. ತೆಲುಗಿನ 'ಭಲೇ ಭಲೇ ಮಗಾಡಿವೋಯ್'ನಲ್ಲಿ ನಾನಿ ಮಾಡಿದ್ದ ಪಾತ್ರವನ್ನು ಇಲ್ಲಿ ಗಣೇಶ್ ಪೋಷಿಸಿದ್ದಾರೆ. ಭರವಸೆ ನೀಡಿದ್ದಂತೆ ಹಾಸ್ಯದ ನಗೆಗಡಲಿನಲ್ಲಿ ತೇಲಿಸಲು ಈ ಸಿನೆಮಾಗೆ ಸಾಧ್ಯವಾಗಿದೆಯೇ? 
ಲಕ್ಕಿ (ಗಣೇಶ್) ಎಂಬ ಯುವಕನಿಗೆ ಒಂದು ಐಬು. ಒಂದು ಕೆಲಸ ಮಾಡುವಾಗ, ಮತ್ತೊಂದು ಕೆಲಸ ಎದುರಾದರೆ ಮೊದಲನೆಯದನ್ನು ಮರೆಯುವ ರೋಗ. ಇದರಿಂದ ಮದುವೆಗೆ ಹೆಣ್ಣು ಸಿಗುವುದಿಲ್ಲ. ಕಂಡ ಕಂಡಲ್ಲಿ ವಾಹನ ನಿಲ್ಲಿಸಿ ಅದು ಪೋಲೀಸರ ವಶವಾಗುತ್ತದೆ. ಇನ್ನು ಹತ್ತಾರು ಅವಾಂತರಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಇಂತಹ ಅಚಾತುರ್ಯಗಳ ನಡುವೆಯೂ ಅವನ ಜೀವನದಲ್ಲಿ ಅದೃಷ್ಟಗಳೇ ಘಟಿಸುತ್ತಿರುತ್ತವೆ. ಇವನ ಅಚಾತುರ್ಯಗಳು ನಂದನಾಗೆ(ಶಾನ್ವಿ ಶ್ರೀವಾಸ್ತವ) ಲೋಕ ಕಲ್ಯಾಣ ಕಾರ್ಯಗಳಂತೆ ಕಂಡು ಪ್ರೀತಿಗೆ ಬೀಳುತ್ತಾಳೆ. ನಂದಿನಿಯ ಅಪ್ಪ (ದೇವರಾಜ್) ಮರೆಗುಳಿಯನ್ನು ಅಷ್ಟು ಸುಲಭವಾಗಿ ಒಪ್ಪುವ ವ್ಯಕ್ತಿಯಲ್ಲ. ಲಕ್ಕಿಗೆ ಪ್ರೇಯಸಿಯನ್ನು ವರಿಸಿಕೊಳ್ಳುವ ಅದೃಷ್ಟ ಒಲಿಯುತ್ತದೆಯೇ? 
ಹಾಸ್ಯ ಮಸಾಲಾ ಚಿತ್ರದಲ್ಲಿ ಗಟ್ಟಿ ಕಥೆ ಐಚ್ಛಿಕ. ಸುಲಭ ಕಥೆಯ ಜೊತೆಗೆ ಒಂದಷ್ಟು ಘಟನೆಗಳನ್ನು ಸರಾಗವಾಗಿ, ಸ್ವಾಭಾವಿಕವಾಗಿ ಮೂಡಿಸಲು ಸಾಧ್ಯವಾದರೆ ಪ್ರೇಕ್ಷಕರನ್ನು ಮನರಂಜಿಸುವುದಕ್ಕೆ ಅಷ್ಟು ಸಾಕು. 'ಸುಂದರಾಂಗ ಜಾಣ'ನಲ್ಲಿಯೂ ಅಂತಹ ಕಾಡುವ ಕಥೆಯೇನು ಇಲ್ಲ ಅಥವಾ ಬಹುಮುಖ್ಯವಾದ ಸಂಘರ್ಷವು ಇಲ್ಲ. ಬಹಳ ಪ್ರೆಡಿಕ್ಟಿಬಲ್ ಕಥೆ.  ಸಣ್ಣ ಐಬು ಹೊಂದಿರುವ ಯುವಕನಿಗೆ ಕೆಲವರು ಮಣೆ ಹಾಕುವುದಿಲ್ಲ ಎಂಬ ಅತಿ ತೆಳುವಿನ ಸಂಘರ್ಷ ಬಿಟ್ಟರೆ, ಅದು ಕೂಡ ಅವನಿಗೆ ವರವಾಗುವ-ಅನುಕೂಲವಾಗುವ ರೀತಿಯಲ್ಲಿಯೇ ಸಿನೆಮಾ ಕಥೆ ಹೆಣೆದಿರುವುದರಿಂದ ಆ ಸಂಘರ್ಷ ಕೂಡ ನೆನೆಗುದಿಗೆ ಬಿದ್ದ ಹಾಗೆ. ಇನ್ನು ಸಿನೆಮಾ ಹಾಸ್ಯದ ಮನರಂಜನೆಯನ್ನು ಯಥೇಚ್ಛವಾಗಿ ನೀಡಿದೆಯೇ ಎಂಬ ಪ್ರಶ್ನೆಗೆ, ಅಲ್ಲಲ್ಲಿ ಪ್ರೇಕ್ಷಕರಿಗೆ ಮಂದಹಾಸ ಬೀರಲು ಸಹಕರಿಸಿದ್ದರು, ಬಹಳಷ್ಟು ಕಡೆಗೆ ನಿರಾಶೆಯನ್ನು ಮೂಡಿಸುತ್ತದೆ. ಪೋಣಿಸಿರುವ ಘಟನೆಗಳು ಕೂಡ ಸ್ವಾಭಾವಿಕ ಎನಿಸದೆ, ಮೂಡಿರುವ ಹತ್ತು ಹಲವು ಬಹಳ ಕೃತಕವೆನಿಸುವ ಆಕಸ್ಮಿಕಗಳು ಸಿನೆಮಾ ಸಾಗುವ ಮತ್ತು ಪ್ರೇಕ್ಷಕರು ಹಾಸ್ಯವನ್ನು ಆಹ್ವಾದಿಸುವ ಸರಾಗತೆಗೆ ಬ್ರೇಕ್ ಹಾಕುತ್ತವೆ. ಹಾಸ್ಯ ಚಿತ್ರವಾದರೂ ಅತಿರೇಕದ-ಅಶ್ಲೀಲತೆಯ ಸಂಭಾಷಣೆ ನುಸುಳದಂತೆ ಸಾಕಷ್ಟು ಎಚ್ಚರ ತೆಗೆದುಕೊಂಡಿರುವುದೇ ಸಿನೆಮಾದ ಮುಖ್ಯ ಅಂಶಗಳಲ್ಲಿ ಒಂದು. 
ಗಣೇಶ್ ಅವರ ನಟನೆ ಎಂದಿನ ಲವಲವಿಕೆಯಿಂದ ಕೂಡಿದ್ದು ಅವರ ಸ್ವಾಭಾವಿಕ ಶೈಲಿಯಲ್ಲಿ ಅಭಿಮಾನಿಗಳನ್ನು ಒಂದು ಮಟ್ಟಿಗೆ ರಂಜಿಸಲು ಸಫಲರಾಗಿದ್ದಾರೆ. ಶಾನ್ವಿ ಶ್ರೀವಾಸ್ತವ ಅವರ ಪಾತ್ರದಲ್ಲಿ ದೊಡ್ಡ ಸವಾಲೇನು ಎದ್ದು ಕಾಣುವುದಿಲ್ಲವಾದ್ದರು, ಅತಿರೇಕವಿಲ್ಲದೆ ನಟಿಸಿ ಮುಗಿಸಿದ್ದಾರೆ. ಹಾಸ್ಯ ನಟರಾದ ರಂಗಾಯಣ ರಘು ಮತ್ತು ಸಾಧುಕೋಕಿಲಾ ಎಂದಿನಂತೆ ಇಷ್ಟವಾಗುವವರಿಗೆ ಇಷ್ಟವಾಗುವಂತೆ, ಅತಿರೇಕ ಎನ್ನಿಸುವವರಿಗೆ ಅತಿರೇಕ ಎನ್ನಿಸುವಂತೆ ತಮ್ಮ ನಟನೆಯನ್ನು ಮುಂದುವರೆಸಿದ್ದರೆ, ದೇವರಾಜ್, ಸಿಹಿ ಕಹಿ ಚಂದ್ರು ಮುಂತಾದ ಪೋಷಕ ನಟರು ತಮ್ಮ ಕೊಡುಗೆಯನ್ನು ಕೈಲಾದ ಮಟ್ಟಿಗೆ ನೀಡಿದ್ದಾರೆ. 
ಸಿನೆಮಾದ ತಾಂತ್ರಿಕ ಆಯಾಮಗಳು ಸಾಮಾನ್ಯವಾಗಿದ್ದು, ಬಿ ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಪರವಾಗಿಲ್ಲ. ಲೀನಿಯರ್ ನಿರೂಪಣೆಯ ಚಿತ್ರದ ಸಂಭಾಷಣೆ ಕೂಡ ಬಹಳ ತಾಜಾತನದಿಂದ ಕೂಡಿಲ್ಲ. ಒಂದು ಸುಲಭ ಕಥೆಯನ್ನು ಒಳಗೊಂಡ ಸಾಧಾರಣ ಹಾಸ್ಯಚಿತ್ರ ತೆಲುಗಿನಲ್ಲಿ ಈಗಾಗಲೇ ಗೆದ್ದಿದೆ ಎಂಬ ಒಂದೇ ಮಾನದಂಡದ ಮೇರೆಗೆ, ಕನ್ನಡಿಗರಿಗೂ ಉಣಬಡಿಸಲು ಮುಂದಾಗಿರುವ ನಿರ್ದೇಶಕ ರಮೇಶ್ ಅರವಿಂದ್ ಕೆಲವೊಮ್ಮೆ ನಗಿಸಲು ಯಶಸ್ವಿಯಾಗಿ, ಮತ್ತೆ ಕೆಲವೊಮ್ಮೆ ನಿರಾಶೆಗೊಳಿಸಿ, ಅವರ ನಿರ್ದೇಶನದ ರಿಮೇಕ್ ಚಿತ್ರ 'ರಾಮ ಶಾಮ ಭಾಮಾ' ಇದಕ್ಕಿಂತಲೂ ಹಲವು ಪಟ್ಟು ಉತ್ತಮವಾಗಿತ್ತಲ್ಲವೇ ಎಂಬ ಪ್ರಶ್ನೆಗಳೊಂದಿಗೆ ಪ್ರೇಕ್ಷಕನನ್ನು ಮಿಶ್ರ ಭಾವನೆಗಳೊಂದಿಗೆ ಬೀಳ್ಕೊಡುತ್ತದೆ. ಈ ಸಿನೆಮಾದ ಹಾಸ್ಯ ಆಗಾಗ ನೊರೆಗುಳ್ಳೆಯಂತೆ ಮೂಡಿ ಮಾಯವಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com