ಮಾರ್ಚ್ ಗಾಗಿ ಸಿನೆರಸಿಕರು ಕಾಯುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ. ಕಾರಣ ಸುನಿಲ್ ಕುಮಾರ್ ದೇಸಾಯಿ '..ರೇ' ಮೂಲಕ ಹಿಂದಿರುಗಲಿದ್ದಾರೆ ಎಂಬುದು ಹಾಗು ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆ 'ಕಿರಗೂರಿನ ಗಯ್ಯಾಳಿಗಳು' ಸಿನೆಮಾ ಆಗಿ ಬಿಡುಗಡೆಯಾಗಲಿದ್ದಕ್ಕೆ. ಅನಂತ ನಾಗ್, ರಮೇಶ್, ಲೋಕನಾಥ್ ಹೀಗೆ ಬಹುತಾರಾಗಣವಿದ್ದರೂ ಭರವಸೆ ಮೂಡಿಸಲು ಸುನಿಲ್ ಕುಮಾರ್ ದೇಸಾಯಿ ಅವರು ಸೋತರೆ, ಸುಮನಾ ಕಿತ್ತೂರು ನಿರ್ದೇಶನದ 'ಕಿರಗೂರಿನ ಗಯ್ಯಾಳಿಗಳು' ಮಿಶ್ರ ಪ್ರತಿಕ್ರಿಯೆ ಗಳಿಸಿ, ಪ್ರಮುಖ ಸಿನೆಮಾವಾಗಿ ಹೊರಹೊಮ್ಮಿತು. ವಿನೋದ್ ಪ್ರಭಾಕರ್ ನಟನೆಯ 'ಟೈಸನ್', ಸುನಿ ನಿರ್ದೇಶನದ 'ಸಿಂಪಲ್ ಆಗ್ ಇನ್ನೊಂದ್ ಲವ್ ಸ್ಟೋರಿ', ವಿಜಯ್ ರಾಘವೇಂದ್ರ ನಟನೆಯ 'ರಣತಂತ್ರ', ಗೌರೀಶ್ ಅಕ್ಕಿ ನಿರ್ದೇಶನದ 'ಸಿನೆಮಾ ಮೈ ಡಾರ್ಲಿಂಗ್', ಪವನ್ ಒಡೆಯರ್ ನಿರ್ದೇಶನ 'ಜೆಸ್ಸಿ' ಸಿನೆಮಾಗಳು ತೆರೆ ಕಾಣುವುದಕ್ಕೆ ಮುಂಚಿತವಾಗಿ ಒಳ್ಳೆಯ ಪ್ರಚಾರ ಪಡೆದವಾದರೂ ಬಿಡುಗಡೆಯ ನಂತರದ್ದ ಮಾತು ಮಾತ್ರ ಬೇರೆ. ಫೆಬ್ರವರಿ ತಿಂಗಳಗೆ ಹಿಂದೆ ಬೀಳದೆ ಮಾರ್ಚ್ ತಿಂಗಳಲ್ಲೂ ತೆರೆ ಕಂಡದ್ದು 22 ಚಿತ್ರಗಳು!