ಪಾತ್ರಗಳ ಸೃಷ್ಟಿ ಒಂದು ಮಟ್ಟಕ್ಕೆ ಸರಿಯಾಗಿದ್ದರು, ಕಥನ ಕಲ್ಪನೆ-ಬೆಳವಣಿಗೆ ಮತ್ತು ನಿರೂಪಣೆಯಲ್ಲಿ ಎಡವಿರುವಾಗ ವಿವಿಧ ನಂತರ ನಟನೆಯಲ್ಲಿಯೂ ಗಮನಾರ್ಹವಾಗಿ ಗುರುತಿಸುವಂತಹಾದ್ದೂ ಏನಿಲ್ಲ. ನಟ ಗಣೇಶ್ ಅವರಷ್ಟೇ ಸ್ಕ್ರೀನ್ ಸಮಯ ಪಡೆಯುವ ಸಾಧು ಕೋಕಿಲಾ ಎಲ್ಲೋ ಕೆಲವೊಮ್ಮೆ ನಗಿಸುವಂತೆ ಕಂಡರು, ತಮ್ಮ ಹಿಂದಿನ ಸಿನೆಮಾಗಳ ಅತಿರೇಕದ ಪೋಲಿ ಹಾಸ್ಯವನ್ನು ಮತ್ತೆ ಮತ್ತೆ ಪುನರಾವರ್ತಿಸುವುದರಿಂದ ಕರ್ಕಷವೆನಿಸುತ್ತಾರೆ. ಸಮಗ್ರ ಕಥೆಯ ದೃಷ್ಟಿಯಿಂದ ಚಂದದ ಸಂಘರ್ಷ ಇದ್ದರು, ಅದನ್ನು ಪೋಷಿಸದೆ, ಈ ಅಪಹಾಸ್ಯ, ಅತಿರೇಕ, ಅತಾರ್ಕಿಕ ನಿರೂಪಣೆ ನುಂಗಿ ನೀರುಕುಡಿಯುತ್ತದೆ. ಗಣೇಶ್ ಮತ್ತು ರಾಧಿಕಾ ಪಂಡಿತ್ ನಟನೆ ಸಾಧಾರಣ. ಬಹಳ ದಿನಗಳ ನಂತರ ಕಾಣಿಸಿಕೊಂಡಿರುವ ಕಾಶಿನಾಥ್ ಅವರಿಗೂ ಅಂತಹ ಪ್ರಮುಖ ಪಾತ್ರವೇನಿಲ್ಲ. ಎಸ್ ತಮನ್ ಅವರ ಸಂಗೀತವಾಗಲಿ ಅಥವಾ ಇನ್ನುಳಿದ ತಾಂತ್ರಿಕ ಆಯಾಮಗಳಲ್ಲಾಗಲಿ ಹೆಚ್ಚುಗಾರಿಕೆಯೇನಿಲ್ಲ. ಈ ಹಿಂದೆಯೂ ಸಿನೆಮಾಗಳನ್ನು ನಿರ್ದೇಶಿರುವ ನಿರ್ದೇಶಕ ಪ್ರಶಾಂತ್ ರಾಜ್, ಕಥೆ-ನಿರೂಪಣೆ-ಸಂಭಾಷಣೆ ಯಾವುದನ್ನು ಉತ್ತಮಪಡಿಸುವುದಕ್ಕೆ ಸೊಪ್ಪು ಹಾಕದೆ ಕಳಪೆ ಜೋಕುಗಳ ಜೋಕಾಲಿಗೆ ನೇತುಬಿದ್ದು ಇದನ್ನು ನಿರ್ದೇಶಿಸಿರುವುದು ಕನ್ನಡ ಪ್ರೇಕ್ಷಕನಿಗೆ ಅಘಾತವೇ ಸರಿ.