ವಿಧಿಯಾಟದ ನೆರಳಿನಲ್ಲಿ ನಗರ ಜೀವನದ ನರಕ ಯಾತನೆಗಳು

ಯಾವುದೇ ಪಾತ್ರದ ನೈತಿಕತೆಯನ್ನು ವಾಚಾಳಿಯಾಗಿ ಪ್ರಶ್ನಿಸದೆ, ಪ್ರೇಕ್ಷಕರನ್ನು ಬೇಕಂತಲೇ ಪ್ರಭಾವಿಸದೆ, ವಿವೇಚಿಸಲು ಅವಕಾಶ ನೀಡುತ್ತದೆ ಸಿನೆಮಾ.
ಕಹಿ ಸಿನೆಮಾ ವಿಮರ್ಶೆ
ಕಹಿ ಸಿನೆಮಾ ವಿಮರ್ಶೆ
Updated on
ಬಹುತೇಕ ಕನ್ನಡ ಚಲನಚಿತ್ರಗಳು ನಗರದಲ್ಲೇ ಸಿದ್ಧವಾಗಿ, ನಗರಕೇಂದ್ರಿತ ಪ್ರೇಕ್ಷಕರನ್ನೇ ಹೆಚ್ಚೆಚ್ಚು ಗುರಿಯಾಗಿಸಿಕೊಂಡು ಚಿತ್ರಿತವಾದರೂ, ನಗರದ ಮತ್ತು ನಗರವಾಸಿಗಳ ತಲ್ಲಣಗಳನ್ನು ಹಿಡಿದಿಟ್ಟಿದ್ದು ಇಲ್ಲವೇ ಇಲ್ಲ ಅಥವಾ ಬಹಳ ವಿರಳ ಎನ್ನಬಹುದು. ನಗರಜೀವನವೇ ಹಾಗೆ, ಬಹಳ ಅಸಂಬದ್ಧ-ಅಸಂಗತ. ಎಷ್ಟೋ ಬಾರಿ ಅದಕ್ಕೆ ಗೊತ್ತು ಗುರಿ-ಕೇಂದ್ರ ಎಂಬುದಿಲ್ಲ. ಇದೇ ಕಾರಣಕ್ಕೆ ಇರಬಹುದು ಈ ಅಸಂಗತವನ್ನು ಕಲೆಯಲ್ಲಿ ಅದರಲ್ಲೂ ದೃಶ್ಯ ಮಾಧ್ಯಮದಲ್ಲಿ ಕಟ್ಟಿಹಾಕುವುದು ಸುಲಭವಾದ ಕೆಲಸವೂ ಅಲ್ಲ. ಅಂತಹ ಒಂದು ಸಾಹಸಕ್ಕೆ ಕೈಹಾಕಿ 'ಕಹಿ'ಯನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ ನಿರ್ದೇಶಕ ಅರವಿಂದ್ ಶಾಸ್ತ್ರಿ. 
ನಾಲ್ಕು ಪ್ರಮುಖ ಪಾತ್ರಗಳ ಸುತ್ತ ವಿಭಿನ್ನ ನಿರೂಪಣೆಯಿಂದ ಕುತೂಹಲಕಾರಿ ಕ್ರೈಮ್ ಕಥೆಯೊಂದನ್ನು ಹೆಣೆದು-ಬೆಸೆದು, ಒಂದಷ್ಟು ಗಂಭೀರವಾದ ತತ್ವವನ್ನು ಕೂಡ ಚರ್ಚಿಸುವ ನಿರ್ದೇಶಕನ ಜಾಣ್ಮೆ-ಪರಿಶ್ರಮ ಸಿನೆಮಾದಲ್ಲಿ ಆಪ್ತವಾಗಿದ್ದರು, ಈ ಪಾತ್ರಗಳ ಪರಿಕಲ್ಪನೆ ಮತ್ತು ಬರವಣಿಗೆಗೆ ಹೆಚ್ಚು ಕಾಡುವ ಶಕ್ತಿಯಿದೆ. ಸಾಫ್ಟ್ವೇರ್ ವೃತ್ತಿಯನ್ನು ತೊರೆದು ತನ್ನಿಚ್ಛೆಯಂತೆ ಶಿಶುವಿಹಾರದಲ್ಲಿ ಶಿಕ್ಷಕಿಯಾಗಿ, ಬರಹಗಾರ್ತಿಯಾಗುವ ಕನಸು ಕಾಣುತ್ತಿರುವ ಅಖಿಲಾಳಿಗೆ(ಕೃಷಿ) ಬದುಕು ಇನ್ನೂ ಅಪೂರ್ಣವೆಂಬ ಭಾವನೆ. ವಿದ್ಯಾ (ಮಾತಂಗಿ) ನೃತ್ಯಗಾರ್ತಿ ಮತ್ತು ಮುಂಬೈನ ಪ್ರಖ್ಯಾತ ನೃತ್ಯತಂಡಕ್ಕೆ ಸೇರುವ ಕನಸು ಹೊತ್ತವಳು. ತನ್ನ ನಾಯಿ ಟಿಮ್ಮಿಯೊಂದಿಗೆ ಬದುಕುವ ಅವಳಿಗೆ ನಿರ್ಧಿಷ್ಟ ಆದಾಯದ ಕೊರತೆ. ಇಂತಹ ಸಮಯದಲ್ಲಿ ತನ್ನ ಅಗತ್ಯಗಳಿಗೆ ಕಳ್ಳತನದ ಮೊರೆ ಹೋಗುವ ವಿದ್ಯಾಗೆ ಕೂಡ ಬದುಕು ಸುಗಮವಾಗಿಲ್ಲ. ಮಕ್ಕಳಿಗೆ ಪಾಠ ಮಾಡುವ, ಕವಿತೆ ಕಟ್ಟುವ ಹರಿ (ಹರಿಶರ್ವ) ಬದುಕು ಕಟ್ಟಿಕೊಳ್ಳಲು ಬೀದಿ ಬದಿಯಲ್ಲಿ ಗುಪ್ತವಾಗಿ ಡ್ರಗ್ ವ್ಯಾಪಾರ ಮಾಡುವವನು. ಇವೆರೆಲ್ಲರಿಗೂ ಅತಿ ಹೆಚ್ಚು ಅಮಾನುಷ ಮತ್ತು ಡಾರ್ಕ್ ವ್ಯಕ್ತಿತ್ವ ರಘುವಿನದ್ದು (ಸೂರಜ್ ಗೌಡ). ಸಿರಿವಂತ ತಂದೆಯ ಜೊತೆಗೆ ಸಂಯಮದ ಸಂಬಂಧವಿಲ್ಲದೆ ವಿಕ್ಷಿಪ್ತವಾಗಿ ಬದುಕುವ ರಘು ಸೈಕೋಪಾಥ್ ಮತ್ತು ಡ್ರಗ್ ವ್ಯಸನಿ. ವಿಧಿಯಾಟ ಇವರ ಬದುಕುಗಳನ್ನು ಅಲ್ಲಲ್ಲಿ ಸಂಧಿಸುತ್ತವೆ. ಈ ವಿಧಿಯಾಟದಲ್ಲಿ ಯಾರ್ಯಾರಿಗೆ ಏನೇನಾಗುತ್ತದೆ?
ಪ್ರಾರಂಭವೇ ಇಡೀ ಸಿನೆಮಾಗೆ ಒಂದು ತಾತ್ವಿಕ ಆಯಾಮ ಸೃಷ್ಟಿಸಿ, ಅದರಲ್ಲೇ ಅದನ್ನು ಬಂಧಿಯಾಗಿಸುತ್ತದೆ. ಇದು ಶಕ್ತಿಯೂ ಹೌದು, ಕುಂದುಕೊರತೆಯೂ!  ಅಖಿಲಾ ತನ್ನ ಬಾಲ್ಯದಲ್ಲಿ ಕೇಳಿದ ಅಣ್ಣಮ್ಮಯ್ಯ ಕೀರ್ತನೆ 'ನಾನಾಟಿ ಬ್ರಾಟಕು ನಾಟಕಮು' ಬಗ್ಗೆ ಹೇಳುತ್ತಾ ನಡೆದಂತೆ, ಸಿನಿಮಾದಲ್ಲಿನ ಎಲ್ಲ ಪಾತ್ರಗಳ ಬದುಕು ಕೂಡ ಜನನ ಮತ್ತು ಮರಣದ ನಡುವಿನ ನಾಟಕದಲ್ಲಿ ಬಂಧಿಯಾದಂತೆ ನಿರ್ದೇಶಕ ಕಟ್ಟಿಕೊಡುತ್ತಾರೆ. ಆದರೆ ಈ ಜೀವನ ನಾಟಕದ ಯಾತನೆಗಳನ್ನು ಬಹಳ ಧೈರ್ಯವಾಗಿ-ಶಕ್ತಿಯುತವಾಗಿ ಮೂಡಿಸುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ. ತನ್ನ ದೈಹಿಕ ಸ್ಥಿತಿಯಲ್ಲಿ ಎಲ್ಲವೂ ಸರಿಯಾಗಿದ್ದು, ಮದುವೆಯಾಗಿ ಮೂರೂ ವರ್ಷ ಕಳೆದರೂ, ಮಕ್ಕಳಾಗದ ಕಾರಣಕ್ಕೆ ಪರೀಕ್ಷೆಗೆ ಒಡ್ಡಿಕೊಳ್ಳಲು ಸಿಡುಕುವ ಪತಿ. ತನ್ನ ಪತಿ ಯಾವುದನ್ನು ತನ್ನ ಜೊತೆಗೆ ಗಾಢವಾಗಿ ಚರ್ಚಿಸುವುದಿಲ್ಲ, ತನ್ನ ಮದುವೆ ವಿಫಲವಾಯಿತೇ ಎಂದು ಸ್ವಗತದಲ್ಲಿ ಅಖಿಲಾ ಪ್ರಶ್ನಿಸಿಕೊಳ್ಳುವ ದೃಶ್ಯ ಇಂದಿನ ಜೀವನವನ್ನು ಪ್ರತಿಫಲಿಸುವುದಿಲ್ಲವೇ? ಡ್ರಗ್ ಪೆಡಲಿಂಗ್ ದೃಶ್ಯಗಳು, ಸೈಕೋಪಾತ್ ನ ಪರಿಸರ, ನೃತ್ಯಗಾರ್ತಿ ವಿದ್ಯಾಳ ಆಕಾಂಕ್ಷೆಗಳು ಕೂಡ ಬಹಳ ನೈಜವಾಗಿ ಮೂಡಿರುವುದು ವಿಶೇಷ. 'ಮರಣ'ವನ್ನೇ ಸರಪಳಿಯಲ್ಲಿ ಬಂಧಿಸಿದ್ದಕ್ಕೆ, ಸದಾ ಜಾರಿ ಬೀಳುವ ಗುಂಡುಕಲ್ಲನ್ನು ಬೆಟ್ಟದ ಮೇಲೆ ಮತ್ತೆ ಮತ್ತೆ ಸಾಗಿಸುವ ಶಿಕ್ಷೆ ಪಡೆಯುವ ಗ್ರೀಕ್ ಪುರಾಣದ ಸಿಸಿಫಸ್ ಕಥೆಯನ್ನು ಅಖಿಲಾಳ ಮೂಲಕ ಹೇಳಿಸುವ ಮೂಲಕ, ಆಧುನಿಕ ಮನುಷ್ಯನ ಅಸಂಗತ ಜೀವನವನ್ನು ಕಲ್ಲು ತಳ್ಳುಪ ಪುರಾಣಕ್ಕೆ ತಳುಕು ಹಾಕುವ ಅವಕಾಶವನ್ನು ಜಾಣ್ಮೆಯಿಂದ ಉಪಯೋಗಿಸಿಕೊಳ್ಳುವ ನಿರ್ದೇಶಕ ಪ್ರೇಕ್ಷಕನನ್ನು ಚಿಂತನೆಗೂ ಹಚ್ಚುತ್ತಾರೆ. ಯಾವುದೇ ಪಾತ್ರದ ನೈತಿಕತೆಯನ್ನು ವಾಚಾಳಿಯಾಗಿ ಪ್ರಶ್ನಿಸದೆ, ಪ್ರೇಕ್ಷಕರನ್ನು ಬೇಕಂತಲೇ ಪ್ರಭಾವಿಸದೆ, ವಿವೇಚಿಸಲು ಅವಕಾಶ ನೀಡುತ್ತದೆ ಸಿನೆಮಾ.
ಕಥೆ ಮತ್ತು ನಿರೂಪಣೆಯ ಮೂಲಕ ಆಧುನಿಕ ಬದುಕಿನ ಕತ್ತಲೆ ಬದಿಯನ್ನು ಹಿಡಿದಿಡುವುದಕ್ಕೆ ಸಂಪೂರ್ಣ ಸಹಕಾರ ನೀಡಿರುವುದು ಮಿದುನ್ ಮುಕುಂದನ್ ಅವರ ಸಂಗೀತ ಮತ್ತು ಪ್ರಶಾಂತ್ ಅವರ ಛಾಯಾಗ್ರಹಣ. ಸಿನೆಮಾದ ಮೂಡ್ ಅನ್ನು ಸದಾ ಹಿಡಿದಿಡಲು ಸಂಗೀತ ಸಹಕರಿಸಿದ್ದರೆ, ಬೆಂಗಳೂರು ನಗರದ ಡಾರ್ಕ್ ಬದಿಯನ್ನು ಸಶಕ್ತವಾಗಿ ಛಾಯಾಗ್ರಹಣ ಹಿಡಿದಿಟ್ಟಿದೆ. ಹರಿಶ್ರವ, ಸೂರಜ್ ಗೌಡ, ಕೃಷಿ ಮತ್ತು ಮಾತಂಗಿ ಅವರದ್ದು ಬಹಳ ನಿಖರವಾದ ಮತ್ತು ಮಾಗಿದ ನಟನೆ. ಸಣ್ಣ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮಹೇಶ್ ಬಂಗ್ ಮತ್ತು ಅರವಿಂದ್ ಅಯ್ಯರ್ ಕೂಡ ಗಮನ ಸೆಳೆಯುತ್ತಾರೆ. ಯಾವುದೇ ಅತಿರೇಕವಿಲ್ಲದ ನಟನೆ ಮತ್ತು ಹಾಸ್ಯದ ಸರುಕನ್ನು ತುರುಕದೆ, ವಿಷಯಕ್ಕೆ ಮತ್ತು ಪಾತ್ರಕ್ಕೆ ಒಗ್ಗಿಸಿ ನಟನೆ ತೆಗೆದಿರುವುದು ವಿಶೇಷ. ಯೋಚನಾಲಹರಿಯನ್ನು ಕೆಣಕುವ ಸಂಭಾಷಣೆ ಕೂಡ ಸಿನೆಮಾದ ಗಂಭೀರತೆಗೆ ಸಹಕರಿಸಿದೆ. 
ಇವೆಲ್ಲ ಆಪ್ತತೆಯ ವಿಷಯಗಳ ಹೊರತಾಗಿಯೂ, ಇನ್ನಷ್ಟು ವಿವರಗಳಿಗೆ ಹೆಚ್ಚಿನ ಒತ್ತು ನೀಡಿದ್ದರೆ ಸಿನೆಮಾ ಹೆಚ್ಚು ಪರಿಣಾಮಕಾರಿಯಾಗುತ್ತಿತ್ತೇನೋ! ಅಖಿಲಾಳಿಗೆ ತನ್ನ ಪತಿಯೊಂದಿಗಿನ ಸಂಘರ್ಷವನ್ನು ಮಾತಿನ ಮೂಲಕ ಹೇಳಿಸುವ ಬದಲು ಇನ್ನಷ್ಟು 
ದೃಶ್ಯಗಳ ಮೂಲಕ ಕಟ್ಟಿಕೊಡಬಹುದಿತ್ತು. ಗನ್ ಪಡೆಯುವ ದೃಶ್ಯ, ಪೊಲೀಸರು ರಘುವನ್ನು ವಿಚಾರಣೆ ಮಾಡುವ ದೃಶ್ಯ ತುಸು ಜಾಳು ಜಾಳು ಎನ್ನಿಸದೆ ಇರವು. ಇವು ತಾಂತ್ರಿಕ ವಿವರಗಳಿಗೆ ಸಂಬಂಧಿಸಿದ ಕುಂದುಕೊರತೆಗಳಾದರೆ ನಿರ್ದೇಶಕ ಸಿನೆಮಾದ ಮೂಲಕ ಚರ್ಚಿಸುವ ತತ್ವದ ಬಗ್ಗೆಯು ಕೆಲವು ಪ್ರಶ್ನೆಗಳು ಮೂಡದೇ ಇರವು. ಎಲ್ಲವನ್ನು ವಿಧಿಯಾಟಕ್ಕೆ ಬಿಡುವ ನಿರ್ದೇಶಕ, ನಿರರ್ಥಕತೆಯ ಅರಿವು ಮೂಡಿದ ಮೇಲೆಯೂ ಕ್ರಾಂತಿಕಾರಕ ಭಾವನೆ ಕೆರಳಿಸುವ ಪಾತ್ರಗಳನ್ನು ಕಟ್ಟಿಕೊಡುವುದಿಲ್ಲ. ಅಸಂಗತ ಜೀವನದ ನಿರರ್ಥಕತೆಯ ಅರಿವಿಗೆ ಪ್ರತಿಭಟನೆ ಮದ್ದು ಎಂದು ಹೇಳಿದ್ದಲ್ಲವೇ ಫ್ರೆಂಚ್ ಬರಹಗಾರ ತತ್ವಶಾಸ್ತ್ರಜ್ಞ ಆಲ್ಬರ್ಟ್ ಕಮು? ಅಂತ್ಯ ಕೂಡ ಇಂತಹುದೇ ಗಾಢವಾದ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಮಕ್ಕಳಿಲ್ಲದೆ ಕೊರಗುತ್ತಿರುವ ಅಖಿಲಾ, ರೇಪ್ ಗೆ ಒಳಗಾದಾಗ, 'ನನಗೇಕೆ ವಿರೋಧಿಸಲು ಸಾಧ್ಯವಾಗಲಿಲ್ಲ? ಬೇಡದ ಕ್ರಿಯೆಯಿಂದ ಬೇಕಾಗಿರುವುದೊಂದು ಸಿಕ್ಕರೆ' ಎಂಬ ಅರ್ಥ ಬರುವ ಸ್ವಗತದಿಂದ ಅಂತ್ಯವಾಗುವ ಚಿತ್ರ ಅವಳ ನೋವನ್ನು ಸೂಚಿಸಿದರು, ರೇಪ್ ಅನ್ನು ಗಟ್ಟಿ ಧ್ವನಿಯಲ್ಲಿ ವಿರೋಧಿಸಲು ಸೋತಿದೆ. ಇದು ನೈತಿಕತೆಯ ಪ್ರಶ್ನೆ ಅಲ್ಲ ಆದರೆ ಸಮಾಜದಲ್ಲಿ ಢಾಳವಾಗಿ ಬೆಳೆದಿರುವ ಪುರುಷಕೇಂದ್ರಿತ ಈ ಕ್ರೌರ್ಯ-ವ್ಯಾಧಿಯ ವಿರುದ್ಧ ಗಟ್ಟಿಯಾದ ಹೇಳಿಕೆ ಅವಶ್ಯಕವಾಗಿತ್ತು! ಆದರೂ ಇಂತಹ ಪ್ರಶ್ನೆಗಳನ್ನು ಎಬ್ಬಿಸುವುದಕ್ಕೆ ಸಾಧ್ಯವಾಗಿರುವುದೇ ಚಿತ್ರದ ಹೆಚ್ಚುಗಾರಿಕೆ ಎನ್ನಲಡ್ಡಿಯಿಲ್ಲ. 
ಚೊಚ್ಚಲ ಪ್ರಯತ್ನದಲ್ಲಿ, ಸ್ವತಂತ್ರ ತಂಡವೊಂದನ್ನು ಕಟ್ಟಿಕೊಂಡು, ಬಹುಷಃ ಅತಿ ಕಡಿಮೆ ಬಜೆಟ್ ನಲ್ಲಿ, ಅತ್ಯುತ್ತಮ ಪಾತ್ರಗಳನ್ನು ಬರೆದು-ಸೃಷ್ಟಿಸಿ, ಅದಕ್ಕೆ ತಕ್ಕ ನಟರನ್ನು ಆಯ್ಕೆ ಮಾಡಿ, ಅವರಿಂದ ಉತ್ತಮ ನಟನೆ ದೊರಕಿಸಿಕೊಂಡು, ಕುತೂಹಲಕಾರಿ ಕಥೆ ಮೂಲಕ ಅದನ್ನು ನಿರೂಪಿಸಿ, ತಾತ್ವಿಕವಾಗಿ ಆಧುನಿಕ ಜೀವನವನ್ನು ದೃಶ್ಯಮಾಧ್ಯಮದಲ್ಲಿ ಕಟ್ಟಿಕೊಟ್ಟಿರುವ ನಿರ್ದೇಶಕ ಅರವಿಂದ್ ಶಾಸ್ತ್ರಿಯವರ ಈ ಪ್ರಯತ್ನ ಗಮನಾರ್ಹ ಮತ್ತು ಶ್ಲಾಘನೀಯ. ಈ ಸಿನೆಮಾ ನೋಡಿ, ಇದರ ಬಗ್ಗೆ ಚರ್ಚಿಸಿ ಮಾತಾಡುವ ಅವಶ್ಯಕತೆ ಈ ದಿನಕ್ಕೆ ಹೆಚ್ಚಿದೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com