ನಟ ಧನಂಜಯ್ ಉದ್ದುದ್ದ ಡೈಲಾಗ್ ಗಳನ್ನು ಹೊಡೆದಿದ್ದಾರೆ, ಒಂದಷ್ಟು ಫೈಟ್ ಗಳನ್ನೂ ಮಾಡಿದ್ದಾರೆ ಎಂಬುದನ್ನು ಹೊರತುಪಡಿಸಿದರೆ, ಪಾತ್ರದ ಪರಿಕಲ್ಪನೆಯಲ್ಲಿನ ತೊಂದರೆಯೂ ಇರಬಹುದು, ಅವರ ನಟನೆಯಲ್ಲಿ ಯಾವುದೇ ಹೆಚ್ಚುಗಾರಿಕೆಯಿಲ್ಲ. ಸಂಚಿತ ಶೆಟ್ಟಿ ಅವರದ್ದು ಕೂಡ ಸಾಧಾರಣ ನಟನೆ. ಸಿನೆಮಾಗೆ ಸ್ವಲ್ಪ ಜೀವ ತುಂಬುವುದೆಂದರೆ ಅಚ್ಯುತ್ ಕುಮಾರ್ ಅವರ ನಟನೆ. ನಯವಂಚಕ-ಕೇಡಿ ಗೃಹಮಂತ್ರಿಯ ಮಾಮೂಲಿ ಪಾತ್ರವನ್ನು ಕೂಡ ತಮ್ಮ ಉತ್ತಮ ಅಭಿನಯದಿಂದ ತುಸು ತಾಜಾ ಎಂಬಂತೆ ಕಾಣಿಸಲು ಸಹಕರಿಸಿದ್ದಾರೆ. ಉಳಿದಂತೆ ಶ್ರೀನಿವಾಸ ಪ್ರಭು, ಪ್ರಕಾಶ್ ಬೆಳವಾಡಿ, ರಮೇಶ್ ಭಟ್, ಬಿ ಸುರೇಶ, ಸುಚೇಂದ್ರ ಪ್ರಸಾದ್ ಮುಂತಾದ ಪೋಷಕ ನಟರು ಎಂದಿನಂತೆ ಸಹಕರಿಸಿದ್ದಾರೆ. ಜುಡಾ ಸ್ಯಾಂಡಿ ಅವರ ಅಬ್ಬರದ ಸಂಗೀತದಲ್ಲಿ ಮೂಡಿರುವ ಹಾಡುಗಳು, ಇತ್ತ ಸಿನೆಮಾ ಮೂಡಿಸುವ ಬೇಸರದಿಂದ ಬ್ರೇಕ್ ನೀಡಿ ಪ್ರೇಕ್ಷಕನಿಗೆ ತಾತ್ಕಾಲಿಕ ಸಂತಸ ನೀಡಲು ಕೂಡ ವಿಫಲವಾಗಿದೆ. ಇತರ ತಾಂತ್ರಿಕ ಆಯಾಮಗಳು ಕೂಡ ಸಿನೆಮಾವನ್ನು ಎತ್ತಿಹಿಡಿಯಲು ವಿಫಲವಾಗಿವೆ.