ವಿಜೇಯೇಂದ್ರ ಪ್ರಸಾದ್ ಅವರ ಕಲ್ಪನೆಯ ಮಾಮೂಲಿ ಸೇಡಿನ ಕಥೆಯೊಂದನ್ನು, ತೆರೆಯ ಮೇಲೆ ಮೂಡಿಸಲು ಇನ್ನಿಲ್ಲದ ಹರಸಾಹಸ ಪಟ್ಟಿದ್ದಾರೆ ನಿರ್ದೇಶಕ ಎ ಮಹದೇವ. ಕಾಲೇಜು ವಾತಾವರಣದಲ್ಲಿ ಮೂಡಿ ಬರುವ ಮೊದಲಾರ್ಧದ ಘಟನೆಗಳು ತುಂಬಾ ಪೇಲವವಾಗಿವೆ. ಇನ್ನು ಹೆಚ್ಚು ಲವಲವಿಕೆಯಿಂದ, ಹಾಸ್ಯಮಯವಾಗಿ, ತಾಜಾತನವಾಗಿ ಮೂಡಿಸುವ ವಿಫುಲ ಅವಕಾಶಗಳಿದ್ದರೂ, ಮತ್ತದೇ ಹಿರೋಯಿಸಂಗೆ ಜೋತುಬಿದ್ದಿರುವ ನಿರ್ದೇಶಕ ಅತ್ತ ಗಟ್ಟಿ ಕಥೆಯು ಇಲ್ಲದ, ಇತ್ತ ಮೈನವಿರೇಳಿಸುವ ಅಥವಾ ಮನಮುಟ್ಟುವ ಸಂಭಾಷಣೆ-ಭಾವನಾತ್ಮಕ ಸನ್ನಿವೇಶಗಳು-ಘಟನೆಗಳು ಇಲ್ಲದೆ ಬೇಸರಿಸುತ್ತಾರೆ. ಆಸ್ಪತ್ರೆಯಲ್ಲಿ ತನ್ನ ಗಂಡನನ್ನು ಉಳಿಸಿಕೊಡಿ ಎಂದು ಗೋಳಿಡುವ ಮಹಿಳೆ, ಹಣಕ್ಕಾಗಿ ಪರಿತಪಿಸುವ ವೈದ್ಯರು, ಮಾನವೀಯತೆ ಮೆರೆಯುವ ವೈದ್ಯಕೀಯ ವಿದ್ಯಾರ್ಥಿಗಳು ಇಂತಹ ಒಂದು ಘಟನೆ ಆದರ್ಶಪ್ರಾಯವಾಗಿದ್ದರು, ಈಗಾಗಲೇ ಅದನ್ನು ಸಾವಿರಾರು ಬಾರಿ ನೋಡಿರುವಂತೆ ಭಾಸವಾಗಿ ಮತ್ತು ಅದಕ್ಕೆ ಹೆಚ್ಚೇನೂ ಮಹತ್ವವು ಸಿಗದೆ, ಫಿಲ್ಲರ್ ರೀತಿಯ ದೃಶ್ಯಗಳಾಗಿ ಮಾಯವಾಗುತ್ತವೆ.