ಇಂತಹ ಒಂದು ವಿವೇಚನಾರಹಿತ ಅಥವಾ ಕಳೆಕಟ್ಟದ ಒಂದು ಕಳಶದ ಕಥೆಯ, ಮೂರ್ನಾಲ್ಕು ಕಾಲಘಟ್ಟಗಳಲ್ಲಿ ನಡೆಯುವ ಒಂದಷ್ಟು ಸನ್ನಿವೇಶಗಳನ್ನು ಸ್ವಲ್ಪವೂ ಸ್ಪಷ್ಟತೆಯಿಲ್ಲದೆ ಹಿಂದಕ್ಕೂ ಮುಂದಕ್ಕೂ ಜಗ್ಗಿ ಪ್ರೇಕ್ಷಕರನ್ನು ಹೈರಾಣಾಗಿಸುವ ಈ ಸಿನೆಮಾಗೆ ತುದಿ ಮೊದಲಿಲ್ಲ. ಆರಂಭದಲ್ಲಿ ವಿಷ್ಣುವರ್ಧನ್ ಅವರಿಗೆ ಗೌರವ ಸೂಚಿಸವ ನಟ ದರ್ಶನ ಅವರನ್ನು ಒಳಗೊಂಡ ಹಾಡನ್ನು ತುರುಕಿರುವುದಕ್ಕೂ ಸಿನೆಮಾದ ಕಥೆಗೂ ಸೂತ್ರ ಸಂಬಂಧವಿಲ್ಲ. ಇನ್ನು ಅಂತ್ಯದವರೆಗೂ ವಿಷ್ಣು ಅವರನ್ನು ಮರೆತಂತೆ ಸಿನೆಮಾ ಮುಂದುವರೆಯುತ್ತದೆ. ಕೆಡುಕು-ಒಳಿತಿನ ಕ್ಯಾರಿಕೇಚರ್ಡ್ ಸಂಘರ್ಷ ಅಡಗೂಲಜ್ಜಿ ಕಥೆಗಳಿಂದ ಹಿಡಿದು, ಬಹುತೇಕ ಸಿನಿಮಾಗಳಲ್ಲೂ ಬಂದು ಮೂಡಿ ಮರೆಯಾಗಿರುವ ಕ್ಲೀಷೆ. ಇದನ್ನೂ ಕೂಡ ಮೊದಲೇ ವಾಚ್ಯವಾಗಿ ಹೇಳಿ ಎಲ್ಲ ಕುತೂಹಲವನ್ನು ಪ್ರೇಕ್ಷಕನ ಮನಸ್ಸಿನಿಂದ ತೊಡೆದುಹಾಕಲಾಗುತ್ತದೆ. ಇನ್ನು ವಿವಿಧ ಕಾಲಘಟ್ಟಗಳಲ್ಲಿ ನಡೆಯುವ ಸನ್ನಿವೇಶಗಳನ್ನು ಮನಬಂದಂತೆ ಬದಲಿಸಿ, ಅನಗತ್ಯ ಗೊಂದಲ ಮೂಡಿಸುವ ನಿರೂಪಣೆ ಶಿವನೇ ಮೆಚ್ಚಬೇಕು. ಇನ್ನು ಒಂದು ದೃಶ್ಯದಲ್ಲಿ ರಂಗಾಯಣ ರಘು ಬಂದು, ಸಾಧು ಕೋಕಿಲಾ ಅವರ ಜೊತೆ ಕುಣಿದು ಮಾಯವಾಗುವುದು ಏಕೆ ಎಂಬುದು ಅರ್ಥವಾಗುವುದೇ ಇಲ್ಲ. ಹಿತವೂ ಅನ್ನಿಸುವುದಿಲ್ಲ! ಈ ಮಧ್ಯದಲ್ಲಿ ಕಳಶ ಕಾಯುವ ಶಿವಪ್ಪ (ಸಾಯಿಕುಮಾರ್) ಅಘೋರಾಧಿಪತಿ ಜೊತೆಗೆ ಕಾದಾಡುತ್ತಾನೆ. ಜೊತೆಗೆ ಇವಳ ಮಗಳು ನಾಗನಿಕೆ ಕೂಡ ಹೊಡೆದಾಡುತ್ತಾಳೆ ಮತ್ತು ಇದ್ದಕ್ಕಿದ್ದಂತೆ ಅವಳು ರೂಪ ಬದಲಾಗಿರುತ್ತದೆ(ರಮ್ಯಾ ಕಾಣಿಸಿಕೊಳ್ಳುತ್ತಾರೆ- ಬಹುಶಃ ಇದು ವಯಸ್ಸಾದ ನಂತರ ರೂಪ ಎಂದುಕೊಳ್ಳಬೇಕೇನೋ!). ಇಂತಹ ಅಂಸಂಬದ್ಧಗಳ ಉಗ್ರಾಣವನ್ನು ಸಹಿಸಿಕೊಳ್ಳಲಾಗದ ಪ್ರೇಕ್ಷಕ ಈ ಹೊತ್ತಿಗೆ ಉಗ್ರರೂಪಿಯಾಗಿರುತ್ತಾನೆ.