ಇಂತಹ ಒಂದು ಸರ್ರಿಯಲಿಸ್ಟಿಕ್ ಕಥಾ ಹಂದರವನ್ನು ರಚಿಸಿರುವ ನಿರ್ದೇಶಕ ಅದನ್ನು ರಸ್ತೆ ಪ್ರಯಾಣದ ಮೂಲಕ ಹೇಳುವ ನಿರೂಪಣೆ, ಚಿತ್ರ ಮುಂದುವರಿದಂತೆ ಹಲವು ಘಟನೆಗಳ ಮೂಲಕ ಕುತೂಹಲಭರಿತವೂ, ಹೆಚ್ಚೆಚ್ಚು ಆಪ್ತವೂ ಆಗುತ್ತದೆ. ಸಿನೆಮಾದ ಆರಂಭಕ್ಕೆ ಪಾತ್ರಗಳ ನಡುವೆ ಯಾವುದೇ ಸಂಘರ್ಷಗಳು ಕಾಣದೆ ಅವು ಪ್ರಯಾಣದ ಜೊತೆಗೆ ಅನಾವರಣಗೊಳ್ಳುವ ರೀತಿ ಪರಿಣಾಮಕಾರಿಯಾಗಿ ಮತ್ತು ವಿಭಿನ್ನವಾಗಿ ಚಿತ್ರಿತವಾಗಿದೆ. ಯಾವುದೇ ಹಣದ ಆಸೆಯಿಲ್ಲದೆ, ತಪ್ಪಿಸಿಕೊಂಡವನನ್ನು ಹಿಡಿದು ಕೊಡುವ ಕರ್ತವ್ಯವೂ ತನ್ನದಾಗಿಲ್ಲದೆ ಹೋದರು, ನಿವೃತ್ತ ಗಲ್ಲು ಶಿಕ್ಷೆಯ ನಿರ್ವಾಹಕನಾಗಿ, ಸ್ಯಾಂಡಲ್ ರಾಜನನ್ನು ಪೊಲೀಸರಿಗೆ ಒಪ್ಪಿಸುವತ್ತ ರಾಜಣ್ಣ ಚಿತ್ತ ಹರಿಸಿದರೆ, ಪ್ರಿಯತಮೆಯ ಜೊತೆ ಓಡಿ ಬಂದಿರುವ ಧರ್ಮನಿಗೆ ತಾನು ಮಾಡಬೇಕಾದ ಕರ್ತವ್ಯ ಮರೆತುಹೋಗಿ, ಹಣದ ಆಸೆಗಾಗಿ ಸ್ಯಾಂಡಲ್ ರಾಜನನ್ನು ಹಿಡಿದೊಪ್ಪಿಸಲು ಅವನ ಜೊತೆಗೆ ಕಾದಾಟಕ್ಕೆ ಇಳಿಯುತ್ತಾನೆ. ಇದಕ್ಕೆ ಸುಬ್ಬಿ ವ್ಯಕ್ತಪಡಿಸುವ ವಿರೋಧ, ಈ ಜೋಡಿಯನ್ನು ಬೇರ್ಪಡಿಸಲು ಹುಡುಕಿ ಬರುವ ಹಲವು ಪಡೆಗಳು, ಅವರಿಂದ ತಪ್ಪಿಸಿಕೊಳ್ಳಲು ನಡೆಸುವ ಪ್ರಯತ್ನಗಳು ಹೀಗೆ ಹಲವು ಘಟನೆಗಳಿಂದ ಸಿನೆಮಾ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತದೆ.