ಈ ಮಸಾಲೆ ಘಟನೆಗಳ ನಡುವೆ ಕೆಲವೊಂದು ಒಳ್ಳೆಯ ಆಶಯದ ಘಟನೆಗಳು ಇಲ್ಲವೆಂದಲ್ಲ ಆದರೆ ಅವುಗಳ ನಿರ್ವಹಣೆ ಮಾತ್ರ ಬಹಳ ಪೊಳ್ಳಾಗಿ ಮೂಡಿದೆ. ಯಾವಾಗಲೂ ಕೆಲಸದ ಚಿಂತೆಯಿಂದ ಪತ್ನಿಯ ಜೊತೆಗೆ ಅನುಚಿತವಾಗಿ ವರ್ತಿಸುವ ಸಯ್ಯದ್ ಗೆ ರೊಮ್ಯಾಂಟಿಕ್ ಪ್ರೇಮ ಪಾಠಗಳನ್ನು ಸಂತು ಹೇಳಿಕೊಡುತ್ತಾನೆ. ಆಸ್ಪತ್ರೆಯಿಲ್ಲದ ಊರಿನಲ್ಲಿ ರಾತ್ರಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆ ಹೆರಿಗೆ ನೋವಿನಿಂದ ನರಳುತ್ತಿರುವ ಮಹಿಳೆಗೆ ಧೈರ್ಯ ಹೇಳಿ, ಪತಿ ಅವಳ ಕೈಹಿಡಿಯುವಂತೆ ಮಾಡಿ, ಧೈರ್ಯ ಮೂಡಿಸಿ ವೈದ್ಯರ ಸಹಾಯವೇ ಇಲ್ಲದೆ ನೀರಿನಲ್ಲಿ ಮಗುವಿಗೆ ಜನ್ಮ ನೀಡುವಂತೆ ಮಾಡಲು ಸಹಕರಿಸುತ್ತಾನೆ. ಹೀಗೆ ಒಳ್ಳೆಯ ಆಶಯವಿರುವ ಘಟನೆಗಳು ಅಲ್ಲೊಂದು ಇಲ್ಲೊಂದು ಸೇರಿದ್ದರು, ಅದನ್ನು ನಿರ್ವಹಿಸಿರುವ ರೀತಿ ಬೇಸರ ಮೂಡಿಸುತ್ತದೆ. ಸಯ್ಯದ್ ಗೆ ಪ್ರೇಮ ಪಾಠ ಹೇಳುವಾಗ ಅರ್ಥವಿಲ್ಲದ 'ಗಂಡಸ್ತನ'ದ ಮಾತುಗಳನ್ನಾಡುವ ನಾಯಕನ ಅತಿ ವೈಭವೀಕರಣ ಸಿಲ್ಲಿ ಎಂದೆನಿಸದೆ ಇರದು. ಇಡೀ ಚಿತ್ರದ ಟೋನ್ ಅಲ್ಲಲ್ಲಿ ಹಾಸ್ಯಮಯ ಮತ್ತು ಹೀರೊ ವೈಭವೀಕರಣದಿಂದ ತುಂಬಿ ಹೋಗಿದ್ದು, ಹಾಸ್ಯದ ಭಾಗ ಎಲ್ಲ ಪ್ರೇಕ್ಷಕರಿಗೂ ಕೆಲವೊಮ್ಮೆ ಕಚಗುಳಿಯಿಡಲು ಯಶಸ್ವಿಯಾಗಿದ್ದರು, ಹಿರೋಯಿಸಂ ಭಾಗ ಯಶ್ ಕಟ್ಟಾ ಅಭಿಮಾನಿಗಳ ಶಿಳ್ಳೆಗೆ-ಕಿರುಚಾಟದ ಸಂಭ್ರಮಕ್ಕೆ ಹೇಳಿಮಾಡಿಸಿದಂತಿದೆ.