ಮೊದಲ 'ಮುಂಗಾರು ಮಳೆ'ಯ ಜೊತೆಗೆ ಹೋಲಿಸದೆ ಇರದಷ್ಟು ತಾಜಾತನ ಸಿನೆಮಾದಲ್ಲಿಲ್ಲ. ಶೀರ್ಷಿಕೆಯ ಹೆಸರು ಅದೇ, ಪ್ರಮುಖ ಪಾತ್ರಗಳ ಹೆಸರುಗಳು ಅವೇ, ಹೆಚ್ಚು ಕಡಿಮೆ ಸಂಘರ್ಷವು ಅದೇ, ಬದಲಾಗಿರುವುದು ನಾಯಕನಟನ ಆರ್ಥಿಕ ಶಕ್ತಿಯಷ್ಟೇ. ಆ ಆರ್ಥಿಕ ಶಕ್ತಿಯಿಂದ ಪ್ರೇಕ್ಷಕರಿಗೆ/ಸಿನೆಮಾಗೆ ಹೆಚ್ಚುವರಿಯಾಗಿ ದಕ್ಕುವುದು ಪರದೇಶದ ಸೌಂದರ್ಯದ ಕೆಲವು ದೃಶ್ಯಗಳಷ್ಟೇ! ಚಿತ್ರದುದ್ದಕ್ಕೂ ಮೂಡುವ ಸಿರಿವಂತ ಅಪ್ಪ-ಮಗನ ಆತ್ಮೀಯ ಸಂಬಂಧ ಸಿನೆಮಾಗೆ-ಸಿನೆಮಾ ಕಥೆಗೆ ಯಾವುದೇ ರೀತಿಯಲ್ಲಿ ಗಟ್ಟಿಯಾಗಿ ಸಹಕರಿಸದೆ ನೆಪಮಾತ್ರಕ್ಕೆ, ಮತ್ತೊಬ್ಬ ದೊಡ್ಡ ನಟನನ್ನು ತೊಡಗಿಸಿಕೊಳ್ಳುವ ದೃಷ್ಟಿಯಿಂದ ಸೃಷ್ಟಿಸಿರುವ ತಂದೆಯ ಪಾತ್ರ ಎಂದೆನಿಸದೆ ಇರದು. ಪ್ರೀತಿಸುವ ರೀತಿ ಬದಲಾಗಿದೆ ಎಂದು ಹೇಳಿದ ಮಾತಿಗೆ ಬದ್ಧನಾಗಿರಲೆಂದೋ ಏನೋ, ಕೊನೆಗೆ ಅಂತ್ಯವನ್ನು ಹಿಂದಿನ 'ಮುಂಗಾರು ಮಳೆ'ಗಿಂತ ಧನಾತ್ಮಕವಾಗಿ ರೂಪಿಸಿರುವುದನ್ನು ಹೊರತುಪಡಿಸಿದರೆ, ಕಥೆಯ ವ್ಯಾಪ್ತಿಯಲ್ಲಿ ಮೂಲ ಯೋಗರಾಜ್ ಭಟ್ ಅವರ 'ಮುಂಗಾರು ಮಳೆ' ಸಿನೆಮಾದ ಛಾಯೆಯಿಂದ ಹೊರಬರಲು ನಿರ್ದೇಶಕನಿಗೆ ಸಾಧ್ಯವೇ ಆಗಿಲ್ಲ. ಇನ್ನು ಅಂತ್ಯವನ್ನು ಜಗ್ಗಿರುವ ರೀತಿಯಂತೂ ಹಾಸ್ಯಾಸ್ಪದವಾಗಿದೆ.