ಭೂಗತ ಲೋಕ, ಅದರ ಜೊತೆಗಿನ ರಾಜಕೀಯ ನಂಟು, ಮುಗ್ಧನೊಬ್ಬ ಭೂಗತ ಲೋಕಕ್ಕೆ ಪ್ರವೇಶ ಪಡೆಯುವುದು, ಕೊನೆಗೆ ಅದರಲ್ಲಿ ಅವನೇ ರಾರಾಜಿಸುವುದು, ಭೂಗತ ಲೋಕದ ಜೊತೆಗಿನ ಭಯೋತ್ಪಾದಕರ ನಂಟು ಹೀಗೆ ಹಲವು ವಿಷಯಗಳನ್ನು ಸಿನೆಮಾ ಒಳಗೊಂಡಿದ್ದರು, ಇಡೀ ಕಥೆ ಅಥವಾ ಸನ್ನಿವೇಶಗಳು ಈಗಾಗಲೇ ನೂರಾರು ಭಾರತೀಯ-ಕನ್ನಡ ಸಿನೆಮಾಗಳಲ್ಲಿ ಕಂಡಿರುವವೇ. ಇಲ್ಲಿ ನಾಯಕ ನಟ ಸ್ವ-ಇಚ್ಛೆಯಿಂದ, ವ್ಯವಸ್ಥೆಗೆ ಹೆದರಿ ಕೂರದೆ ಹೋರಾಟದ ಮನೋಭಾವದಿಂದ, ತನ್ನ ಸೌಕರ್ಯಗಳನ್ನು ತೊರೆದು, ಕುಟುಂಬದ ಕಳವಳಕ್ಕೆ ಸಮಾಧಾನ ಹೇಳಿ ಭೂಗತ ಲೋಕವನ್ನು ಎದುರಿ ಹಾಕಿಕೊಳ್ಳುತ್ತಾನೆ ಎಂಬ ಅಂಶ ಆಪ್ತವಾಗಿದ್ದರು, ಕಥಾ ಹಂದರ, ಜರುಗುವ ಘಟನೆಗಳು ತುಂಬಾ ಪ್ರೆಡಿಕ್ಟೇಬಲ್ ಎಂದೆನಿಸಿ ನಿರಾಸೆ ಹುಟ್ಟಿಸುತ್ತದೆ. ಅಲ್ಲದೆ ಸಿನೆಮಾದ ಕೆಲವು ಸಂಗತಿಗಳನ್ನು ಮಾತಿನಿಂದಲೇ ಆಡಿಸಿ, ಅದಕ್ಕೆ ತಕ್ಕಂತಹ ಸಂದರ್ಭಗಳನ್ನು, ಘಟನೆಗಳನ್ನು ಸೃಷ್ಟಿಸದೆ ಬರವಣಿಗೆಯಲ್ಲಿ ವಿಫಲವಾಗಿರುವುದನ್ನು ಗೋಚರಿಸುತ್ತದೆ. (ಮಹಾರಾಜ ಎಂಬ ರೌಡಿ ನಗರಕ್ಕೆ ಭೀಕರ, ದುಃಸ್ವಪ್ನ ಎಂದೆಲ್ಲ ಮಾತಿನಲ್ಲೇ ಹೇಳಿಸುವ ನಿರ್ದೇಶಕ ಅವನನ್ನು ಹಿಡಿಯಲು ಪೊಲೀಸರು/ ವ್ಯವಸ್ಥೆ ಪ್ರಯತ್ನಿಸಿದ ಅಥವಾ ವಿಫಲವಾದ ಸಂದರ್ಭಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವುದಿಲ್ಲ)