ಮಾನಸಿಕ ಅಸ್ವಸ್ಥರು ಎದುರಿಸಬೇಕಾದ ಸಮಾಜದ ತಾರತಮ್ಯ, ವಿಷಣ್ಣ ಮನೋಭಾವದ ಬಗ್ಗೆ ಮಹತ್ವದ ಪ್ರಶ್ನೆ ಎತ್ತುವ ಸಿನೆಮಾ, ಅದನ್ನು ಪರಿಣಾಮಕಾರಿಯಾಗಿ ದಾಟಿಸುವಲ್ಲಿ ವಿಫಲವಾಗಿದೆ. ಅಪ್ಪ ಅಂತಾರಾಮಯ್ಯ ಮತ್ತು ಪುತ್ರಿ ಪುಟ್ಟುವಿನ ಭಾವುಕತೆಯ ಸಂಬಂಧ ಮತ್ತು ಅದಕ್ಕೆ ಇತರರು ಸಹಕರಿಸುವ ಸಂಗತಿಗಳ ನಡುವೆಯೂ ಸುತ್ತುವ ಸಿನೆಮಾ, ಆ ಸಂಬಂಧವನ್ನು ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಇನ್ನಷ್ಟು ಆಪ್ತವಾಗಿ ಎಸ್ಟಾಬ್ಲಿಶ್ ಮಾಡಿದ್ದರೆ, ಇದು ಒತ್ತಾಯಪೂರ್ವಕವಾಗಿ ಕಾಣುವುದರಿಂದ ತಪ್ಪಿಸಿಕೊಳ್ಳಬಹುದಿತ್ತೇನೋ! ಎಲ್ಲವು ಅವಸರವಾಗಿ ಮುನ್ನುಗ್ಗುವಂತೆ ಭಾಸವಾಗುವ ನಿರೂಪಣೆ, ಕೆಲವು ನಿರ್ಣಾಯಕ ಸನ್ನಿವೇಶಗಳನ್ನು ತೇಲಿಸಿ ಮುಂದುವರೆದುಬಿಡುತ್ತದೆ. ಉದಾಹರಣೆಗೆ, ಸಹಜೈಲುವಾಸಿಗಳ ಸಹಾಯದಿಂದ ಪುಟ್ಟುವನ್ನು ಜೈಲಿನೊಳಗೆ ಕರೆತರುವ ಸನ್ನಿವೇಶದಲ್ಲಿ ಕಾಣಬೇಕಿದ್ದ ಉದ್ವೇಗ ಇಲ್ಲವಾಗಿಬಿಡುತ್ತದೆ. ಜೈಲರ್, ಪುಟ್ಟುವನ್ನು ದತ್ತು ಸ್ವೀಕರಿಸಿ ಸಾಕುವ ಪ್ರಸಂಗ ಕೂಡ ಬಹಳ ತೆಳುವಾಗಿ ಹೆಣೆಯಲಾಗಿದ್ದು, ಅದಕ್ಕೆ ಅಗತ್ಯವಾಗಿದ್ದ ಗಂಭೀರತೆ ಮಾಯವಾಗಿಬಿಡುತ್ತದೆ. ಅಥವಾ ಇಂತಹ ಪ್ರಶ್ನೆಗಳು ಪ್ರೇಕ್ಷಕರ ಮನದಲ್ಲಿ ಮೂಡದಂತೆ, ಅವುಗಳನ್ನು ಮರೆಸುವಂತೆ, ಕಥೆಯನ್ನು ನಿರೂಪಿಸುವಲ್ಲಿ ನಿರ್ದೇಶಕನಿಗೆ ಸಾಧ್ಯವಾಗಿಲ್ಲ. ಕೊರಿಯಾ ಭಾಷೆಯ ಸಿನೆಮಾದಿಂದ ಎಲ್ಲ ಫ್ರೇಮ್ ಗಳನ್ನು ಹಾಗೆಯೇ ಭಟ್ಟಿ ಇಳಿಸುವ ಇರಾದೆ ಕೂಡ ಇದಕ್ಕೆ ಅಡ್ಡಿಪಡಿಸಿರಲಿಕ್ಕೂ ಸಾಕು.